ಮಹಾರಾಷ್ಟ್ರದ ಸಾಂಗ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಪಕ್ಷ ನಿರ್ಧರಿಸಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವತ್ ಗುರುವಾರ ಹೇಳಿದ್ದಾರೆ.
ಸಾಂಗ್ಲಿ ಮತ್ತು ಮುಂಬೈನ ಕೆಲವು ಕ್ಷೇತ್ರಗಳು ಸೇರಿದಂತೆ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶಿವಸೇನೆ (ಉದ್ದವ್ ಬಣ) ಬುಧವಾರ ಪ್ರಕಟಿಸಿದೆ. ಮೈತ್ರಿ ಸೀಟು ಹಂಚಿಕೆಗೂ ಮುನ್ನವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವುದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ-ಉದ್ದವ್ ಬಣ, ಎನ್ಸಿಪಿ ಮತ್ತು ಕಾಂಗ್ರೆಸ್ ‘ಇಂಡಿಯಾ’ ಕೂಟದ ಭಾಗವಾಗಿವೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರತ್ ಮತ್ತು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಅವರು ಶಿವಸೇನೆಯು ತನ್ನ ನಿರ್ಧಾರವನ್ನು ಮೈತ್ರಿಪಕ್ಷಗಳೊಂದಿಗೆ ಚರ್ಚಿಸಿ, ಮರುಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಜಯ್ ರಾವತ್, “ಯಾವಾಗಲೂ ಮೈತ್ರಿ ಇರುತ್ತದೆ. ಎನ್ಸಿಪಿ – ರಾಮ್ಟೆಕ್ ಮತ್ತು ಕೊಲ್ಹಾಪುರ ಕ್ಷೇತ್ರಗಳನ್ನು ಕಾಂಗ್ರೆಸ್ಗೆ ನೀಡಿದೆ. ಶಿವಸೇನೆ (ಉದ್ಧವ್ ಠಾಕ್ರೆ ಬಣ) ಅಮರಾವತಿಯನ್ನು ಕಾಂಗ್ರೆಸ್ಗೆ ನೀಡಿದೆ” ಎಂದು ಹೇಳಿದ್ದಾರೆ.
“ನಮ್ಮ ಸ್ಥಳೀಯ ಕಾರ್ಯಕರ್ತರು ಸಹ ಅಸಮಾಧಾನಗೊಂಡಿದ್ದರು. ಆದರೆ ಅಸಮಾಧಾನ ಉಲ್ಬಣಗೊಳ್ಳಲು ನಾವು ಅವಕಾಶ ನೀಡಲಿಲ್ಲ” ಎಂದು ಅವರು ಹೇಳಿದರು.
“ಕಾಂಗ್ರೆಸ್ ರಾಮ್ಟೆಕ್ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ ಕಾರಣ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮುಂಬೈ ಉತ್ತರದಿಂದ ಸ್ಪರ್ಧಿಸುವುದಾಗಿ ಹೇಳಿದೆ. ಮೈತ್ರಿಯನ್ನು ಬಲಪಡಿಸುವ ಮತ್ತು ವಿಸ್ತರಿಸುವ ಅವಶ್ಯಕತೆಯಿದೆ” ಎಂದು ಹೇಳಿದರು.
“ಕಾಂಗ್ರೆಸ್ ದೇಶವನ್ನು ಮುನ್ನಡೆಸಬೇಕು ಮತ್ತು ಆ ಪ್ರಯತ್ನದಲ್ಲಿ ನಾವು ಜೊತೆಗಿರುತ್ತೇವೆ. ಕೇವಲ ಒಂದು ಕ್ಷೇತ್ರಕ್ಕಾಗಿ (ಸಾಂಗ್ಲಿ) ರಾಜ್ಯದಲ್ಲಿ ಬಿಜೆಪಿ ವಿರುದ್ಧದ ಹೋರಾಟವನ್ನು ಕಾಂಗ್ರೆಸ್ ಕೈಬಿಡುತ್ತದೆಯೇ” ಎಂದು ಅವರು ಪ್ರಶ್ನಿಸಿದರು.
“ಪ್ರತಿಪಕ್ಷಗಳ ಮೈತ್ರಿಕೂಟವು ಒಗ್ಗಟ್ಟಿನ ಘಟಕವಾಗಿ ಒಟ್ಟಿಗೆ ಇದ್ದರೆ, ಸಾಂಗ್ಲಿಯನ್ನು ಸುಲಭವಾಗಿ ಗೆಲ್ಲಬಹುದು. ಶಿವಸೇನೆ (ಯುಬಿಟಿ) ಮುಖಂಡ ಚಂದ್ರಹರ್ ಪಾಟೀಲ್ ಅವರನ್ನು ಸಾಂಗ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಯಾರಾದರೂ ಬಿಜೆಪಿಗೆ ಪರೋಕ್ಷವಾಗಿ ಸಹಾಯ ಮಾಡುವ ಉದ್ದೇಶವನ್ನು ಹೊಂದಿದ್ದರೆ, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದರು.
ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಮೇ20 ರವರೆಗೆ ಐದು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.