2016ರಿಂದ ಅದಾನಿ ಸಮೂಹದ ಮೇಲೆ ನಿಗಾ ಇಟ್ಟಿಲ್ಲ ಎನ್ನುವ ವಿವರವನ್ನು ಸೆಬಿ ಸುಪ್ರೀಂ ಕೋರ್ಟ್ ಮುಂದೆ ಬಹಿರಂಗಪಡಿಸಿದೆ.
ಸೋಮವಾರ ಸುಪ್ರೀಂ ಕೋರ್ಟ್ಗೆ ನೀಡಿದ ಉತ್ತರದಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ)ಯು, 201 ರಿಂದ ಯಾವುದೇ ಅದಾನಿ ಸಮೂಹದ ಯಾವುದೇ ಕಂಪನಿಯನ್ನು ತನಿಖೆ ಮಾಡಿಲ್ಲ ಮತ್ತು ತಮ್ಮ ಹಿಂದಿನ ಹೇಳಿಕೆಯು ತಪ್ಪಾಗಿದೆ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠವು, ಅದಾನಿ ಗುಂಪಿನ ವಿರುದ್ಧ ಹಿಂಡೆನ್ಬರ್ಗ್ ಸಂಶೋಧನೆಯ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಆರು ತಿಂಗಳ ವಿಸ್ತರಣೆಯನ್ನು ಕೋರಿ ಮಾರುಕಟ್ಟೆ ನಿಯಂತ್ರಕ ಸೆಬಿಯ ಅರ್ಜಿಯನ್ನು ಶೀಘ್ರದಲ್ಲೇ ಪರಿಗಣಿಸಲಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ತನ್ನ ಉತ್ತರದಲ್ಲಿ, ಸೆಬಿ ತನ್ನ ತನಿಖೆ ಪೂರ್ಣಗೊಳಿಸಲು ಸಮಯ ವಿಸ್ತರಣೆಯ ಅಗತ್ಯವಿದೆ ಎಂದು ಪುನರುಚ್ಚರಿಸಿತು. ಆದರೆ ಕಳೆದ ಶುಕ್ರವಾರದಂದು, ಸುಪ್ರೀಂ ಕೋರ್ಟ್ ತನಿಖೆ ಪೂರ್ಣಗೊಳಿಸಲು ಮಾರುಕಟ್ಟೆ ನಿಯಂತ್ರಕರು ಕೋರಿರುವ ಆರು ತಿಂಗಳ ವಿಸ್ತರಣೆಯ ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
“ನಾವು ಈಗ 6 ತಿಂಗಳು ಸಮಯ ನೀಡಲು ಸಾಧ್ಯವಿಲ್ಲ. ಕೆಲಸದಲ್ಲಿ ಸ್ವಲ್ಪ ಎಚ್ಚರ ಅಗತ್ಯ. ಒಂದು ತಂಡವನ್ನು ಒಟ್ಟುಗೂಡಿಸಿ. ನಾವು ಆಗಸ್ಟ್ ಮಧ್ಯದಲ್ಲಿ ಪ್ರಕರಣವನ್ನು ಪಟ್ಟಿ ಮಾಡಬಹುದು ಮತ್ತು ನಂತರ ವರದಿಯ ಬಗ್ಗೆ ವಿಚಾರಣೆ ನಡೆಸಬಹುದು. ಇದಕ್ಕೆ ಕನಿಷ್ಠ ಸಮಯ 6 ತಿಂಗಳು ನೀಡಲಾಗುವುದಿಲ್ಲ. ಸೆಬಿ ಅನಿರ್ದಿಷ್ಟ ಅವಧಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ನಾವು ಅವರಿಗೆ 3 ತಿಂಗಳ ಕಾಲಾವಕಾಶ ನೀಡುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ತನ್ನ ತನಿಖೆಯನ್ನು ಪೂರ್ಣಗೊಳಿಸಲು ಆರು ತಿಂಗಳ ಕಾಲ ವಿಸ್ತರಣೆ ಕೋರಿ ಸೆಬಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ.
ಈ ಸುದ್ದಿ ಓದಿದ್ದೀರಾ?: ಜ್ಞಾನವಾಪಿ ಮಸೀದಿ | ಶಿವಲಿಂಗದ ಆಕೃತಿಯ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಹೈಕೋರ್ಟ್ ಅಸ್ತು
ಗೌತಮ್ ಅದಾನಿ ನೇತೃತ್ವದ ವ್ಯವಹಾರ ಸಂಸ್ಥೆಯು ಹಲವು ದಶಕಗಳಿಂದ ತನ್ನ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿ ವಂಚಿಸುತ್ತಿದೆ” ಎಂದು ಅಮೆರಿಕ ಮೂಲದ ಹಿಂಡೆನ್ಬರ್ಗ್ ಸಂಶೋಧನಾ ಸಂಸ್ಥೆ ಆರೋಪಿಸಿತ್ತು.
ಇನ್ನೊಂದೆಡೆ, ಹಿಂಡೆನ್ಬರ್ಗ್ ರಿಸರ್ಚ್ನ ಸಂಸ್ಥಾಪಕ ನಾಥನ್ ಆಂಡರ್ಸನ್ ಮತ್ತು ಭಾರತದಲ್ಲಿನ ಅದರ ಸಿಬ್ಬಂದಿ ವಿರುದ್ಧ ತನಿಖೆ ನಡೆಸಬೇಕು. ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಸೆಬಿ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಸುಪ್ರೀಂ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಮನೋಹರ್ ಲಾಲ್ ಶರ್ಮಾ ಮನವಿ ಮಾಡಿದ್ದಾರೆ.
ಲೋಕಸಭೆಯಲ್ಲೂ ಕೂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವು ವಿಪಕ್ಷ ನಾಯಕರು ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದರು.