- ಭೂ ವಿಜ್ಞಾನ ಸಚಿವರಾಗಿ ಕಿರಣ್ ರಿಜಿಜು ಪ್ರಮಾಣ ವಚನ
- ಕಾನೂನು ಸಚಿವರಾಗಿ ಅರ್ಜುನ್ ರಾಮ್ ಮೇಘವಾಲ್ ನೇಮಕ
ಕಿರಣ್ ರಿಜಿಜು ಅವರು ತಮ್ಮ ಕಾನೂನು ಖಾತೆ ಬದಲಾವಣೆ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
“ನನ್ನ ಖಾತೆ ಬದಲಾವಣೆ ಮಾಡಿರುವುದು ಶಿಕ್ಷೆಯಲ್ಲ. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಭಾಗವಾಗಿದೆ” ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಹೇಳಿದ್ದಾರೆ.
ಸಂಪುಟದಲ್ಲಿ ಮಾಡಿದ ಪ್ರಮುಖ ಬದಲಾವಣೆ ಸಮಯದಲ್ಲಿ ಕೇಂದ್ರ ಕಾನೂನು ಸಚಿವ ಸ್ಥಾನದಿಂದ ಬದಲಾಯಿಸಲ್ಪಟ್ಟ ಒಂದು ದಿನದ ನಂತರ ಕಿರಣ್ ರಿಜಿಜು ಅವರು ದೆಹಲಿಯ ಲೋಧಿ ರಸ್ತೆಯಲ್ಲಿರುವ ಪೃಥ್ವಿ ಭವನದಲ್ಲಿ ಶುಕ್ರವಾರ (ಮೇ 19) ಬೆಳಗ್ಗೆ ಭೂ ವಿಜ್ಞಾನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಖಾತೆಯ ಬದಲಾವಣೆ ಸರ್ಕಾರದ ಕಾರ್ಯವಿಧಾನ ವಾಡಿಕೆಯ ಪ್ರಕ್ರಿಯೆಯಾಗಿದೆ ಎಂದು ರಿಜಿಜು ಉಲ್ಲೇಖಿಸಿದರು.
“ಇದು ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಒಂದು ಭಾಗವೇ ಹೊರತು ನನಗೆ ನೀಡಿರುವ ಶಿಕ್ಷೆಯಲ್ಲ” ಎಂದು ಕಿರಣ್ ರಿಜಿಜು ಅವರು ಸ್ಪಷ್ಟಪಡಿಸಿದರು.
“ಖಾತೆ ಬದಲಾವಣೆಯು ವಾಡಿಕೆಯ ಪ್ರಕ್ರಿಯೆಯಾಗಿದೆ. ಯಾರಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇಲ್ಲಿ ಯಾವುದೇ ರೀತಿಯ ತಪ್ಪಾಗಿಲ್ಲ. ಪ್ರತಿಪಕ್ಷಗಳು ನನ್ನ ವಿರುದ್ಧ ಮಾತನಾಡುತ್ತವೆ. ನನಗೆ ಇದು ಹೊಸತಲ್ಲ” ಎಂದು ರಿಜಿಜು ಸುದ್ದಿಗಾರರಿಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ನೂತನ ಸಂಸತ್ ಭವನ | ಪ್ರಧಾನಿ ಮೋದಿಯಿಂದ ಮೇ 28ಕ್ಕೆ ಲೋಕಾರ್ಪಣೆ
ನೂತನ ಕೇಂದ್ರ ಕಾನೂನು ಸಚಿವರಾಗಿ ಅರ್ಜುನ್ ರಾಮ್ ಮೇಘವಾಲ್ ಅವರನ್ನು ನೇಮಿಸಲಾಯಿತು. ಕಿರಣ್ ರಿಜಿಜು ಅವರನ್ನು ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷ ಮುಂಚಿತವಾಗಿ ಗುರುವಾರ ನಡೆದ ಹಠಾತ್ ಸಂಪುಟ ಬದಲಾವಣೆಯಲ್ಲಿ ಬದಲಾಯಿಸಲಾಯಿತು.