- ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಯಲ್ಲಿ ನಿಯೋಜನೆಗೊಂಡ ರೇಖಾ ಸಿಂಗ್
- 2020ರ ಪೂರ್ವ ಲಡಾಖ್ನ ಗಾಲ್ವಾನ್ ಸಂಘರ್ಷದಲ್ಲಿ ಯೋಧನ ಸಾವು
ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಮಡಿದ ವೀರ ಯೋಧನ ಪತ್ನಿ ರೇಖಾ ಸಿಂಗ್ ಅವರನ್ನು ಇದೀಗ ಭಾರತೀಯ ಸೇನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಪತಿಯನ್ನು ಕಳೆದುಕೊಂಡ ಮೂರು ವರ್ಷಗಳ ನಂತರ ರೇಖಾ ಅವರಿಗೆ ಶನಿವಾರ (ಏಪ್ರಿಲ್ 29) ಭಾರತೀಯ ಸೇನೆಯಲ್ಲಿ ಸ್ಥಾನ ನೀಡಲಾಗಿದೆ. ಅವರು ಭಾರತೀಯ ಸೇನೆಗೆ ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಂಘರ್ಷದ ತಾಣವಾಗಿರುವ ಪೂರ್ವ ಲಡಾಖ್ಗೆ ರೇಖಾ ಅವರನ್ನು ನಿಯೋಜಿಸಲು ಸೇನೆ ಆದೇಶಿಸಿದೆ.
ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ರೇಖಾ ಅವರ ಪತಿ ಯೋಧ ನಾಯಕ್ ದೀಪಕ್ ಸಿಂಗ್ ಹುತಾತ್ಮರಾಗಿದ್ದರು.
“ಮರಣೋತ್ತರ ವೀರಚಕ್ರ ಪಡೆದ ನಾಯಕ್ ದೀಪಕ್ ಸಿಂಗ್ ಅವರ ಪತ್ನಿಯಾಗಿರುವ ಮಹಿಳಾ ಕೆಡೆಟ್ ರೇಖಾ ಅವರು ಚೆನ್ನೈನಲ್ಲಿ ತರಬೇತಿ ಪೂರ್ಣಗೊಳಿಸಿದ ನಂತರ ಭಾರತೀಯ ಸೇನೆಗೆ ನೇಮಕಗೊಂಡಿದ್ದಾರೆ. ದೀಪಕ್ ಅವರು ಗಾಲ್ವಾನ್ ಘರ್ಷಣೆಯ ಸಮಯದಲ್ಲಿ ಹುತಾತ್ಮರಾಗಿದ್ದರು” ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ.
ದೀಪಕ್ ಸಿಂಗ್ ಅವರು ಬಿಹಾರ ರೆಜಿಮೆಂಟ್ನ 16ನೇ ಬೆಟಾಲಿಯನ್ ಯೋಧ. ದೀಪಕ್ ಅವರಿಗೆ 2021ರ ನವೆಂಬರ್ನಲ್ಲಿ ಮರಣೋತ್ತರವಾಗಿ ವೀರ ಚಕ್ರ ನೀಡಲಾಗಿದೆ. ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರದ ನಂತರ ಭಾರತದ ಮೂರನೇ ಅತ್ಯುನ್ನತ ಮಿಲಿಟರಿ ಗೌರವ ಇದಾಗಿದೆ.
ರೇಖಾ ಸಿಂಗ್ ಸೇರಿದಂತೆ ಚೆನ್ನೈ ಮೂಲದ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಿಂದ ಉತ್ತೀರ್ಣರಾದ ಐವರು ಮಹಿಳೆಯರನ್ನು ಮೊದಲ ಬಾರಿಗೆ ಫಿರಂಗಿದಳದ ರೆಜಿಮೆಂಟ್ಗೆ ಸೇರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಕ್ಕರೆ ಉತ್ಪಾದನೆಯಲ್ಲಿ ಕುಸಿತ; ರಫ್ತು ನಿಷೇಧಿಸಲಿರುವ ಕೇಂದ್ರ
ಐವರಲ್ಲಿ ಮೂವರನ್ನು ಚೀನಾ ಗಡಿ ಕಾಯುವ ಘಟಕಗಳಿಗೆ ನಿಯೋಜನೆಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
2020ರ ಜೂನ್ 15ರಂದು ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಿ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಮತ್ತು ಭಾರತೀಯ ಯೋಧರ ನಡುವೆ ಸಂಘರ್ಷ ನಡೆಯಿತು. ಇದರಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾಗಿದ್ದರು.