- ಅದಾನಿ ಸಮೂಹ ಕುರಿತು ಸುಪ್ರೀಂ ಕೋರ್ಟ್ ಸೆಬಿ ತನಿಖೆಗೆ ಸೂಚನೆ
- ಅದಾನಿ ಕಂಪನಿಯ ಷೇರು ವ್ಯವಹಾರದ ಬಗ್ಗೆ ಹಿಂಡನ್ಬರ್ಗ್ ವರದಿ
ಅದಾನಿ ಸಮೂಹ ಕಂಪನಿಯು ತನ್ನ ಕನಿಷ್ಠ ಮೂರು ವಿದೇಶಿ ಕಂಪನಿಗಳಲ್ಲಿ ನಡೆಸಿದ ವಹಿವಾಟಿನ ನಿಯಮಗಳ ಉಲ್ಲಂಘನೆ ಸಾಧ್ಯತೆಯ ಬಗ್ಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ತನಿಖೆ ನಡೆಸುತ್ತಿದೆ ಎಂದು ಶನಿವಾರ (ಏಪ್ರಿಲ್ 1) ವರದಿಯಾಗಿದೆ.
ಕಳೆದ 13 ವರ್ಷಗಳಲ್ಲಿ ಉದ್ಯಮಿ ಗೌತಮ್ ಅದಾನಿ ಸ್ಥಾಪಿಸಿರುವ ಬಂದರಿನಿಂದ ಆರಂಭಿಸಿ ವಿದ್ಯುತ್ ಘಟಕಗಳೂ ಸೇರಿರುವ ಉದ್ಯಮ ಸಮೂಹವು ಶೆಲ್ ಕಂಪನಿಗಳ ಜೊತೆಗೆ ವಿದೇಶಿ ಹೂಡಿಕೆಯ ವಹಿವಾಟು ನಡೆಸಿವೆ ಎಂದು ಹೂಡಿಕೆದಾರರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಅದಾನಿ ಸಮೂಹ ಮಾಲೀಕ ಗೌತಮ್ ಅದಾನಿ ಸಹೋದರ ವಿನೋದ್ ಅದಾನಿ ವಿದೇಶಿ ಶೆಲ್ ಕಂಪನಿಗಳ ಒಡೆತನದ ಲಾಭ, ನಿರ್ದೇಶಕ ಅಥವಾ ಇತರ ಸಂಪರ್ಕ ಹೊಂದಿದ್ದಾರೆ. ಈ ಶೆಲ್ ಕಂಪನಿಗಳಿಗೆ ಸಂಬಂಧಿತ ಪಾರದರ್ಶಕ ವಹಿವಾಟು ನಿಯಮಗಳನ್ನು ಉಲ್ಲಂಘಿಸಿರುವ ಸಾಧ್ಯತೆ ಬಗ್ಗೆ ಮಾರುಕಟ್ಟೆ ನಿಯಂತ್ರಕ, ಭದ್ರತೆ ಮತ್ತು ಸೆಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ವಿದೇಶಿ ಶೆಲ್ ಕಂಪನಿಗಳ ನೇರ ಸಂಬಂಧಿಗಳು, ಪ್ರಾಯೋಜಕ ಸಮೂಹಗಳು ಹಾಗೂ ಉಪ ಸಹಭಾಗಿ ಕಂಪನಿಗಳನ್ನು ಭಾರತೀಯ ಕಾನೂನಿನಡಿ ಅವುಗಳ ಸಹಭಾಗಿಗಳೆಂದು ಪರಿಗಣಿಸಲಾಗುತ್ತದೆ.
ಷೇರುಪಟ್ಟಿಯಲ್ಲಿರುವ ಕಂಪನಿಗಳಲ್ಲಿ ಅತಿದೊಡ್ಡ ಪ್ರಮಾಣದ ಷೇರುಗಳನ್ನು ಹೊಂದಿರುವ ಮತ್ತು ಕಂಪನಿಗಳ ನೀತಿಯ ಮೇಲೆ ಪ್ರಭಾವ ಬೀರುವ ಕಂಪನಿ ಎಂದು ಪ್ರಾಯೋಜಕ ಸಮೂಹವನ್ನು ವ್ಯಾಖ್ಯಾನಿಸಲಾಗಿದೆ.
ಅಂತಹ ಘಟಕಗಳ ನಡುವಿನ ವಹಿವಾಟುಗಳ ಬಗ್ಗೆ ನಿಯಂತ್ರಕ ಸಂಸ್ಥೆಗಳಿಗೆ ವಿವರ ನೀಡಬೇಕು ಮತ್ತು ಸಾರ್ವಜನಿಕವಾಗಿ ವರದಿ ಸಲ್ಲಿಸುವ ಮೂಲಕ ಮಾಹಿತಿ ಬಹಿರಂಗಪಡಿಸಬೇಕು. ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟಿಗೆ ಷೇರುದಾರರ ಅನುಮೋದನೆಯ ಅಗತ್ಯವಿರುತ್ತದೆ. ವಹಿವಾಟಿನಲ್ಲಿ ನಿಯಮಗಳ ಉಲ್ಲಂಘನೆ ಕಂಡು ಬಂದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ತನಿಖೆಯ ವಿವರ ನೀಡಲು ಸೆಬಿ ನಿರಾಕರಿಸಿದೆ. ಅದಾನಿ ಸಮೂಹ ಕಂಪನಿಯ ವಿದೇಶಿ ಶೆಲ್ ಕಂಪನಿಗಳ ತನಿಖೆಯ ವಿವರ ನೀಡುವಂತೆ ಮಾಧ್ಯಮಗಳ ಬೇಡಿಕೆಯನ್ನು ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ತಿರಸ್ಕರಿಸಿದ್ದಾರೆ.
ವಿನೋದ್ ಅದಾನಿ ಅವರು ಅದಾನಿ ಕುಟುಂಬದ ಸದಸ್ಯರಾಗಿದ್ದಾರೆ. ಅಲ್ಲದೆ ಅವರು ಪ್ರಾಯೋಜಕ ಸಮೂಹದ ಭಾಗವಾಗಿದ್ದಾರೆ. ಆದರೆ ವಿನೋದ್ ಅವರು ಷೇರುಪಟ್ಟಿಯಲ್ಲಿರುವ ಯಾವುದೇ ಅದಾನಿ ಕಂಪನಿ ಅಥವಾ ಅವುಗಳ ಅಂಗಸಂಸ್ಥೆಗಳಲ್ಲಿ ಭಾಗಿಯಾಗಿಲ್ಲ ಎಂದು ಸೆಬಿ ವಕ್ತಾರರೊಬ್ಬರು ಹೇಳಿದ್ದಾರೆ.
ಅದಾನಿ ಕಂಪನಿಯ ವ್ಯವಹಾರದಲ್ಲಿಯ ಲೋಪದೋಷಗಳ ಕುರಿತು ಅಮೆರಿಕದ ಹಿಂಡನ್ಬರ್ಗ್ ಸಂಶೋಧನಾ ವರದಿ ಪ್ರಕಟವಾದ ನಂತರ ಸೆಬಿ ತನಿಖೆ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಜಾರ್ಖಂಡ್ | ಗೋಮಾಂಸ ಹೊಂದಿದ್ದ ವ್ಯಕ್ತಿ ಮೇಲೆ ಗುಂಪು ಹಲ್ಲೆ; ಪೊಲೀಸರ ರಕ್ಷಣೆ
ಅದಾನಿ ಕಂಪನಿ ಷೇರುಗಳ ಮೌಲ್ಯದಲ್ಲಿ ಭಾರೀ ಪ್ರಮಾಣದ ಅವ್ಯವಹಾರವಾಗಿದೆ ಎಂದು ವರದಿ ಹೇಳಿದೆ. ಇದು ಇತ್ತೀಚೆಗೆ ನಡೆದ ಸಂಸತ್ತು ಬಜೆಟ್ ಅಧಿವೇಶನದ ಮೊದಲೆರಡು ಅವಧಿಯಲ್ಲಿ ಪ್ರತಿಪಕ್ಷಗಳ ಗದ್ದಲಕ್ಕೆ ಕಾರಣವಾಯಿತು.
ಸಾರ್ವಜನಿಕ ಷೇರು ಹೂಡಿಕೆ, ನಿಯಂತ್ರಕರಿಗೆ ವಿವರ ಬಹಿರಂಗಪಡಿಸುವಲ್ಲಿ ಆಗಿರುವ ಲೋಪದೋಷಗಳಿಗಾಗಿ ಅದಾನಿ ಸಮೂಹ ವಿರುದ್ಧ ತನಿಖೆ ಮಾಡಲು ಕಳೆದ ಮಾರ್ಚ್ನಲ್ಲಿ ಸುಪ್ರೀಂಕೋರ್ಟ್ ಸೆಬಿಗೆ ನಿರ್ದೇಶನ ನೀಡಿತ್ತು.