- ನಸ್ರುದ್ದೀನ್ ನಿವಾಸದಲ್ಲಿ ಗೋಮಾಂಸ ಪತ್ತೆ ಆರೋಪ
- ಗ್ರಾಮಸ್ಥರ ಕೈಗೆ ಸಿಲುಕಿಕೊಂಡ ನಸ್ರುದ್ದೀನ್ ಪುತ್ರನ ರಕ್ಷಣೆ
ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ನಿಷೇಧಿತ ಗೋಮಾಂಸ ಹೊಂದಿದ್ದ ಆರೋಪದಲ್ಲಿ ಗುಂಪು ದಾಳಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ.
ಘಟನೆಯಲ್ಲಿ ಮೂವರು ಪೊಲೀಸರು ಸೇರಿ ಆರು ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಸಂತ್ರಸ್ತ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಉದ್ರಿಕ್ತರು ಪೊಲೀಸರ ವಾಹನಗಳನ್ನು ಧ್ವಂಸಗೊಳಿಸಿದರು. ಅಲ್ಲದೆ ಸಂತ್ರಸ್ತ ಯುವಕನ ನಿವಾಸದ ಮುಂದಿನ ಕೆಲವು ಸರಕುಗಳಿಗೆ ಬೆಂಕಿ ಹಚ್ಚಿದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ದನಗಳ ಹತ್ಯೆ ಮತ್ತು ಮಾರಾಟ ಜಾರ್ಖಂಡ್ನಲ್ಲಿ ನಿಷೇಧಿಸಲಾಗಿದೆ.
ರಾಜಧಾನಿ ರಾಂಚಿಯಿಂದ 190 ಕಿಮೀ ದೂರದ ನಿರ್ಸಾ ಪೊಲೀಸ್ ಠಾಣಾ ವ್ಯಪ್ತಿಯ ಭುರ್ಕುಂಡ ಪ್ರದೇಶದಲ್ಲಿ ಘಟನೆ ನಡೆದಿದೆ.
ನಸ್ರುದ್ದೀನ್ ಅನ್ಸಾರಿ ಎಂಬ ಯುವಕನ ನಿವಾಸದಲ್ಲಿ ಕೆಲವು ಗ್ರಾಮಸ್ಥರಿಗೆ ಸತ್ತ ದನ ಮತ್ತು ಗೋಮಾಂಸ ದೊರೆತಿದೆ ಎಂಬ ವಿಷಯ ಗ್ರಾಮದಲ್ಲಿ ಹರಡಿದೆ. ಕೂಡಲೇ ಉದ್ರಿಕ್ತರ ಗುಂಪು ಯುವಕನ ನಿವಾಸದ ಮುಂದೆ ಜಮಾಯಿಸಿ ಕಲ್ಲು ತೂರಾಟ ನಡೆಸಿದರು. ಉದ್ರಿಕ್ತರು ನಿವಾಸದ ಮುಂದಿದ್ದ ವಸ್ತುಗಳಿಗೆ ಬೆಂಕಿ ಹಚ್ಚಿದರು. ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಪರಿಸ್ಥಿತಿ ಈಗ ಹತೋಟಿಯಲ್ಲಿದೆ. ಸ್ಥಳದಲ್ಲಿ ಪೊಲೀಸರು ನಿಗಾ ಇರಿದ್ದಾರೆ ಎಂದು ನಿರ್ಸಾ ಉಪ ವಿಭಾಗದ ಪೊಲೀಸ್ ಅಧಿಕಾರಿ ಪೀತಾಂಬರ್ ಸಿಂಗ್ ಖೇರ್ವಾರ್ ತಿಳಿಸಿದರು.
ನಸ್ರುದ್ದೀನ್ ಅನ್ಸಾರಿ ಮತ್ತು ಆತನ ಕುಟುಂಬ ಅಲ್ಲಿಂದ ಪರಾರಿಯಾಗಿದೆ. ಆದರೆ, ಉದ್ರಿಕ್ತ ಗುಂಪಿನ ಕೈಗೆ ಸಿಲುಕಿಕೊಂಡಿದ್ದ ನಸ್ರುದ್ದೀನ್ ಪುತ್ರ ಸಹಾಬುದ್ದೀನ್ನನ್ನು ಗುಂಪು ಮರಕ್ಕೆ ಕಟ್ಟಿ ಹಾಕಿತು.
ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮಾಂತರ) ರೀಷ್ಮಾ ರಮೇಶನ್ ಸ್ಥಳಕ್ಕೆ ಅಗಮಿಸಿದ ನಂತರ ಪರಿಸ್ಥಿತಿ ತಹಬದಿಗೆ ಬಂದಿತು. ಗೋಮಾಂಸ ಇಟ್ಟ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ ಅನರ್ಹತೆ | ದಿಗ್ವಿಜಯ ಸಿಂಗ್ ಟ್ವೀಟ್ ವಿರುದ್ಧ ಬಿಜೆಪಿ ಟೀಕೆ
ನಿರ್ಸಾ ಶಾಸಕಿ ಅಪರ್ಣಾ ಸೇನ್ ಗುಪ್ತಾ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಪರಿಶೀಲಿಸಿದರು. ಬಳಿಕ ಶಾಸಕಿ ಅಪರ್ಣಾ, ಆಡಳಿತದ ಅಧಿಕಾರಿಗಳು ಮತ್ತು ಪೊಲೀಸರು ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.
ಗೋಮಾಂಸ ಪತ್ತೆ ಪ್ರಕರಣದಲ್ಲಿ ಸೂಕ್ತ ಕ್ರಮ ಹಾಗೂ ಗ್ರಾಮದಲ್ಲಿ ಶಾಂತಿ ನೆಲೆಸುವ ಭರವಸೆ ನೀಡಿದರು.