- ಕಾಂಗ್ರೆಸ್ ಸಂಸದರಿಂದ ಕಾರ್ಯ ಕಲಾಪ ಅಮಾನತು ನೋಟಿಸ್
- ಅದಾನಿ ವಿಷಯ ಚರ್ಚೆಗೆ ಆಗ್ರಹಿಸಲು ಪ್ರತಿಪಕ್ಷಗಳ ತೀರ್ಮಾನ
ಸಂಸತ್ ಬಜೆಟ್ ಅಧಿವೇಶನದ ಎರಡನೇ ಅವಧಿಯೂ ಆಡಳಿತ ಹಾಗೂ ಪ್ರತಿಪಕ್ಷಗಳ ಗದ್ದಲದಲ್ಲಿ ಕರಗಿ ಹೋಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಡುವೆ ಜಟಾಪಟಿ ತೀವ್ರಗೊಂಡಿದೆ.
ಅದಾನಿ ಕುರಿತ ಹಿಂಡನ್ಬರ್ಗ್ ವರದಿ ಬಗ್ಗೆ ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಈ ನಿಟ್ಟಿನಲ್ಲಿ ಸೋಮವಾರ (ಮಾರ್ಚ್ 20) ಬೆಳಿಗ್ಗೆ ಸದನದಲ್ಲಿ ಮುಂದಿನ ಕಾರ್ಯತಂತ್ರ ರೂಪಿಸುವ ಬಗ್ಗೆ ಪ್ರತಿಪಕ್ಷಗಳು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಸಿವೆ. ಅದಾನಿ ವಿಷಯದ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ಸಂಸದರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸದನದ ಕಾರ್ಯ ಕಲಾಪ ಅಮಾನತು ನೋಟಿಸ್ ನೀಡಿದ್ದಾರೆ.
ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದಾರೆ ಎಂದು ಆರೋಪದ ಸಂಬಂಧ ಭಾನುವಾರ (ಮಾರ್ಚ್ 19) ಬೆಳಿಗ್ಗೆ ದೆಹಲಿಯ ತಮ್ಮ ನಿವಾಸಕ್ಕೆ ಬಂದ ಪೊಲೀಸರಿಗೆ ಉತ್ತರವನ್ನು ನೀಡಿದ್ದರು. ಬಳಿಕ ಕಾಂಗ್ರೆಸ್ ನೇತೃತ್ವದಲ್ಲಿ ಸಮಾನ ಮನಸ್ಕ ಪಕ್ಷಗಳು ಈ ತೀರ್ಮಾನ ಕೈಗೊಂಡಿವೆ.
ನಿಯಮ 267ರಡಿ ಅದಾನಿ ವಿಷಯದ ಕುರಿತು ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಗೆ ವಿಫಲವಾಗಿರುವ ಕೇಂದ್ರ ಸರ್ಕಾರ ಚರ್ಚೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ಸಂಸದ ರಂಜೀತ್ ರಂಜನ್ ನೋಟಿಸ್ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? 45 ದಿನಗಳ ನಂತರ ಈಗೇಕೆ ನೋಟಿಸ್? ಕೇಂದ್ರದ ನಡೆಗೆ ಕಾಂಗ್ರೆಸ್ ಆಕ್ರೋಶ
ಅದಾನಿ ವಿಷಯ ಹಾಗೂ ರಾಹುಲ್ ಗಾಂಧಿ ನಿವಾಸಕ್ಕೆ ಪೊಲೀಸರ ಭೇಟಿ ಕುರಿತು ಚರ್ಚಿಸುವಂತೆ ಮಾಣಿಕಂ ಟ್ಯಾಗೋರ್,ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಲೋಕಸಭೆಯಲ್ಲಿ ನಿಲುವಳಿ ಸೂಚನೆ ಸಲ್ಲಿಸಿದ್ದಾರೆ.
“ರಾಹುಲ್ ಗಾಂಧಿ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಬೇಕು. ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಅವಕಾಶವಿಲ್ಲದಿದ್ದರೆ ಅದು ಹೇಗೆ ಕಾರ್ಯನಿರ್ವಹಿಸುತ್ತದೆ?” ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.