ಮಣಿಪುರ ಘಟನೆಯ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿಗೆ ಬಂದು ಮಾತನಾಡುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿರುವ ಹೊಸದಾಗಿ ರಚನೆಯಾಗಿರುವ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಎಲ್ಲ ಸಂಸದರು, ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಸಂಸತ್ತಿಗೆ ಆಗಮಿಸಿದರು.
ಜುಲೈ 20ರಂದು ಪ್ರಾರಂಭವಾದ ಮುಂಗಾರು ಅಧಿವೇಶನದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುವಂತೆ ಪ್ರತಿಪಕ್ಷಗಳು ನಿರಂತರವಾಗಿ ಆಗ್ರಹಿಸುತ್ತಿದ್ದರೂ ಪ್ರಧಾನಿ ಇನ್ನೂ ಉಭಯ ಸದನಕ್ಕೆ ಬಂದು ಮಾತನಾಡಿಲ್ಲ. ಇದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ವಿಪಕ್ಷಗಳ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮತ್ತೆ ಮುಂದುವರಿಸಿದ್ದು, ಪ್ರತಿಭಟನೆಯ ಸಂಕೇತವಾಗಿ ಕಪ್ಪು ಬಟ್ಟೆ ಧರಿಸಿಕೊಂಡು ಆಗಮಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಮಣಿಪುರದ ಘಟನೆಯು ದೇಶಕ್ಕೆ ಕಪ್ಪುಚುಕ್ಕೆಯ ಅಧ್ಯಾಯ. ಕಳೆದ 85 ದಿನಗಳಿಂದ ಮಣಿಪುರದ ಜನರ ಅಳಲನ್ನು ಗಮನಿಸದೆ, ಕೇಂದ್ರ ಸರ್ಕಾರ ಮಾನವೀಯತೆಗೆ ಮಸಿ ಬಳಿದಿದೆ. ಸಂಸತ್ತಿನ ಅಧಿವೇಶನ ನಡೆಯುತ್ತಿದೆ. ನಿರಂಕುಶಾಧಿಕಾರದ ಧೋರಣೆ ಅನುಸರಿಸಿ, ವಿಷಯದಿಂದ ಗಮನ ಬೇರೆಡೆಗೆ ತಿರುಗಿಸಿ ಬಿಜೆಪಿ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ದೇವಸ್ಥಾನವಾಗಿರುವ ಸಂಸತ್ತಿಗೆ ಬಂದು ಪ್ರಧಾನಿಯವರು ಮಾತನಾಡಲು ಬಯಸುತ್ತಿಲ್ಲ. ಸಂಸತ್ತಿಗೆ ಬಂದು ಬಂದು ಮಾತನಾಡುವ ಬದಲು ರಾಜಸ್ಥಾನಕ್ಕೆ ತೆರಳಿ ರಾಜಕೀಯ ಭಾಷಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ವಿರೋಧ ಪಕ್ಷಗಳನ್ನು ನಿಂದಿಸುವ ಮೂಲಕ ಮೋದಿ ಸರ್ಕಾರವು ಕುಕೃತ್ಯಗಳ ಮಸಿಯನ್ನು ಅಳಿಸಲು ಸಾಧ್ಯವಿಲ್ಲ. ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರ ಬಗ್ಗೆ ವಿರೋಧಿ ಮನಸ್ಥಿತಿ ಇದ್ದವರು ಮಾತ್ರ ಕಪ್ಪು ಬಟ್ಟೆಯನ್ನು ಗೇಲಿ ಮಾಡುತ್ತಾರೆ. ಆದರೆ, ನಮಗೆ ಕಪ್ಪು ಪ್ರತಿಭಟನೆ ಮತ್ತು ಶಕ್ತಿಯ ಸಂಕೇತವಾಗಿದೆ. ಕಪ್ಪು ಬಣ್ಣವು ನ್ಯಾಯದ ಸಂಕೇತ ಮತ್ತು ಘನತೆಯ ಸಂಕೇತವಾಗಿದೆ. ಮಣಿಪುರದ ಜನರು ನ್ಯಾಯ, ಶಾಂತಿ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಈ ನಡುವೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಭಾಗವಹಿಸುವುದರಿಂದ ಅಮಾನತುಗೊಂಡಿರುವ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್, ಸಂಸತ್ ಭವನದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಕೂಡ ಕಪ್ಪು ಬಟ್ಟೆಯಲ್ಲೇ ಆಗಮಿಸಿದ್ದರು.