- ಮೋದಿಯ ಚುನಾವಣೆ ಪ್ರಚಾರದ ಹುಚ್ಚಿಗೆ ಸಾರ್ವಜನಿಕರ ಸುರಕ್ಷತೆ ಬಲಿ
- ಅಪೂರ್ಣ ಕಾಮಗಾರಿ ಪಟ್ಟಿ ಉಲ್ಲೇಖಿಸಿ ಬಿಜೆಪಿ ಕಾಲೆಳೆದ ಸುರ್ಜೇವಾಲಾ
ಪ್ರಧಾನಿ ನರೇಂದ್ರ ಮೋದಿ ಅವರು ನಕಲಿ ವೈದ್ಯರಂತಾಗಿದ್ದು, ಅಪೂರ್ಣ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಅನೇಕ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸುರ್ಜೇವಾಲಾ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
“ಪ್ರಧಾನಿ ಮೋದಿ ಅವರು ಆರಂಭ ಮತ್ತು ಅಂತಿಮ ಸ್ಥಳ ನಿಗದಿಯಾಗದೇ ಇರುವ ಮೆಟ್ರೋ ಮಾರ್ಗವನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಚುನಾವಣೆ ಪ್ರಚಾರದ ಹುಚ್ಚಿಗೆ ಸಾರ್ವಜನಿಕರ ಸುರಕ್ಷತೆ ಮತ್ತು ಜೀವವನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ” ಎಂದು ಹೇಳಿದ್ದಾರೆ.
“ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಲಿದೆ ಎಂಬುದು ಬೊಮ್ಮಾಯಿ ಹಾಗೂ ಮೋದಿ ಸರ್ಕಾರಕ್ಕೆ ಮನವರಿಕೆಯಾಗಿದ್ದು, ಅವರು ಉದ್ದೇಶಪೂರ್ವಕವಾಗಿ ಪ್ರಚಾರ ಪಡೆಯುವ ಗೀಳು ಹತ್ತಿಸಿಕೊಂಡಿದ್ದಾರೆ. ಆದರೆ ಅವರು ಪ್ರತಿ ಪ್ರಯತ್ನದಲ್ಲೂ ಮುಖಭಂಗ ಅನುಭವಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.
“2022ರ ನವೆಂಬರ್ 22ರಂದು ಪ್ರಧಾನಿ ಮೋದಿ ಅವರು ಅಪೂರ್ಣಗೊಂಡಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2ನೇ ಟರ್ಮಿನಲ್ ಉದ್ಘಾಟಿಸಿದರು. ಆದರೆ ಈ ದಿನದವರೆಗೂ ಈ ಟರ್ಮಿನಲ್ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭವಾಗಿಲ್ಲ. ಈ ಟರ್ಮಿನಲ್ ಗೆ ಅಂತಾರಾಷ್ಟ್ರೀಯ ವಿಮಾನಗಳು ಸ್ಥಳಾಂತರವಾಗುವುದಕ್ಕೆ 2 ವರ್ಷಗಳು ಬೇಕಾಗಲಿದೆ. ಈ ಟರ್ಮಿನಲ್ ನಲ್ಲಿ ಪ್ರಾದೇಶಿಕ ವಿಮಾನಗಳ ಕಾರ್ಯಾಚರಣೆ ಆರಂಭವಾಗುವುದು ಮೇ ಹಾಗೂ ಜೂನ್ ತಿಂಗಳವರೆಗೂ ಕಾಯಬೇಕು” ಎಂದು ಹೇಳಿದ್ದಾರೆ.
“ಫೆಬ್ರವರಿ 27, 2023ರಂದು ಪ್ರಧಾನಿ ನರೇಂದ್ರ ಮೋದಿ 500 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಇದುವರೆಗೂ ಅಲ್ಲಿ ಒಂದೇ ಒಂದು ವಿಮಾನ ಕೂಡ ಕಾರ್ಯಾಚರಣೆ ಆರಂಭ ಮಾಡಿಲ್ಲ. ಅಂತೆಯೇ, ಮಾರ್ಚ್ 12, 2023ರಂದು ಮೋದಿ ಅವರು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಮಾಡಿದ್ದು, ಇದುವರೆಗೂ ಈ ರಸ್ತೆ ಪೂರ್ಣ ಕಾಮಗಾರಿಯಾಗಿಲ್ಲ. ಸರ್ವೀಸ್ ರಸ್ತೆಗಳು, ಅಂಡರ್ ಪಾಸ್, ಓವರ್ ಪಾಸ್, ಪಾದಚಾರಿ ಅಂಡರ್ ಪಾಸ್ ಪೂರ್ಣಗೊಂಡಿಲ್ಲ. ಇದೆಲ್ಲದರ ಜತೆಗೆ ಮಳೆ ನೀರು ರಸ್ತೆ ಮೇಲೆ ನಿಂತು ಅಪಘಾತಕ್ಕೆ ಕಾರಣವಾಗುತ್ತಿದೆ” ಎಂದು ಬಿಜೆಪಿಯ ಚುನಾವಣಾ ಗಿಮಿಕ್ ಗಳನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
“ತಮ್ಮ ಅಪೂರ್ಣ ಯೋಜನೆಗಳ ಉದ್ಘಾಟನೆ ಮುಂದುವರೆಸಿದ ಮೋದಿ, ಇದೇ ಮಾರ್ಚ್ 25ರಂದು ಆರಂಭದಿಂದ ಅಂತಿಮ ಸ್ಥಳ ನಿಗದಿಯಾಗದ ಮೆಟ್ರೋ ಮಾರ್ಗ ಉದ್ಘಾಟಿಸುತ್ತಿದ್ದಾರೆ. ಇದು ಬೆಂಗಳೂರಿಗರ ಸಮಸ್ಯೆಗೆ ಪರಿಹಾರ ನೀಡುವ ಬದಲು ಹೆಚ್ಚು ಅಡಚಣೆ ಸೃಷ್ಟಿಸಲಿದೆ. ಈ ಕಾರ್ಯಕ್ರಮದಿಂದ ಆಗುವ ಲಾಭ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಧ್ಯಮಗಳಲ್ಲಿ ಸಿಗುವ ಪ್ರಚಾರ ಮಾತ್ರ. ಈ ಮೆಟ್ರೋ ಮಾರ್ಗ ಹಾಲಿ ಇರುವ ಮೆಟ್ರೋ ಮಾರ್ಗವನ್ನು ಸಂಪರ್ಕಿಸುವುದಿಲ್ಲ. ಹಾಗಾಗಿ ಇದರಿಂದ ಸಾರ್ವಜನಿಕರ ಸುರಕ್ಷತೆಗೂ ಅಪಾಯಕಾರಿಯಾಗಿದೆ” ಎಂದಿದ್ದಾರೆ.