- ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಕೊಳೆಗೇರಿ ನಿವಾಸಿಗಳಿದ್ದಾರೆ
- ಕೊಳಗೇರಿ ನಿವಾಸಿಗಳಿಗೆ ಉಚಿತ ಮನೆ ನಿರ್ಮಿಸಿಕೊಡಬೇಕು
ಕೊಳೆಗೇರಿಗಳ ಸಮಗ್ರ ಅಭಿವೃದ್ಧಿ ಆಗಬೇಕಾದರೆ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ಕೊಳಗೇರಿ ಜನಾಂದೋಲನ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಇಮ್ತಿಯಾಜ್ ಮಾನ್ವಿ ಆಗ್ರಹಿಸಿದರು.
ವಿಜಯನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೊಳೆಗೇರಿಗಳಲ್ಲಿ ವಾಸವಾಗಿರುವವರ ಜನಸಂಖ್ಯೆ ಆಧರಿಸಿ ಸರ್ಕಾರ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಲಾಗಿತ್ತು. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಕೊಳೆಗೇರಿ ನಿವಾಸಿಗಳಿದ್ದಾರೆ. ಸೌಲಭ್ಯವಂಚಿತ ಕೊಳೆಗೇರಿಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂಬ ಬಹುವರ್ಷಗಳ ಬೇಡಿಕೆಯೂ ಈವರೆಗೆ ಈಡೇರಿಲ್ಲ” ಎಂದು ತಿಳಿಸಿದರು.
“ನಗರದ ಕೊಳೆಗೇರಿಗಳಲ್ಲಿ ವಾಸವಾಗಿರುವವರಿಗೆ ನಗರದಲ್ಲಿ ಮನರೇಗಾ ಯೋಜನೆ ಅನುಷ್ಠಾನಗೊಳಿಸಿ, ಕೆಲಸ ಕೊಡಬೇಕು. ರಾಜ್ಯದಲ್ಲಿ ವಸತಿ ಹಕ್ಕು ಕಾಯಿದೆ ಜಾರಿಗೊಳಿಸಬೇಕು. ರಾಜ್ಯದ 3.36 ಲಕ್ಷ ಕೊಳಗೇರಿ ಕುಟುಂಬಗಳಿಗೆ ಹಕ್ಕುಪತ್ರವನ್ನು ಕ್ರಯ ಮಾಡುವುದರ ಮೂಲಕ ಭೂಮಾಲೀಕತ್ವದ ಹಕ್ಕು ಕೊಡಬೇಕು. ಕೊಳಗೇರಿ ನಿವಾಸಿಗಳಿಗೆ ಉಚಿತ ಮನೆ ನಿರ್ಮಿಸಿಕೊಡಬೇಕು” ಎಂದು ಒತ್ತಾಯಿಸಿದರು.
“ರಾಜ್ಯದಲ್ಲಿ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ನೀಡಬೇಕು. ನಗರ ಭೂ ಬ್ಯಾಂಕ್ ನೀತಿ ಜಾರಿಗೊಳಿಸಿ, ನೆಲಬಾಡಿಗೆ ಸ್ಲಂಗಳಿಗೆ ನೀತಿ ರೂಪಿಸಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆ ಬಲಗೊಳಿಸಬೇಕು. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬೇಕು. ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣ ನಿಲ್ಲಿಸಬೇಕು. ಕರ್ನಾಟಕ ಸಮಗ್ರ ಸ್ಲಂ ಅಭಿವೃದ್ಧಿ ಕಾಯಿದೆ 2018 ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
“ಬಹುತೇಕ ಅಂಶಗಳ ವಿಷಯಗಳನ್ನು ಒಳಗೊಂಡ ಕೊಳಗೇರಿ ಜನರ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಇದನ್ನು ಶೀಘ್ರದಲ್ಲೇ ಎಲ್ಲ ರಾಜಕೀಯ ಪಕ್ಷಗಳ ಅಧ್ಯಕ್ಷರು ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಿಗೆ ನೀಡಲಾಗುವುದು. ಚುನಾವಣೆಗೆ ರಾಜಕೀಯ ಪಕ್ಷಗಳು ಘೋಷಿಸುವ ಚುನಾವಣೆ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಸೇರ್ಪಡೆಗೊಳಿಸಬೇಕೆಂದು ಕೋರಲಾಗುವುದು” ಎಂದರು.
“ವಿಜಯನಗರ ಜಿಲ್ಲೆಯ ಯಾವುದೇ ಕೊಳಗೇರಿಯಲ್ಲೂ ಮೂಲಸೌಕರ್ಯಗಳಿಲ್ಲ. ನೂತನ ಜಿಲ್ಲೆಯಾದರೂ ಮಹಿಳೆಯರು ಬಹಿರ್ದೆಸೆಗೆ ಬಯಲಿಗೆ ಹೋಗುವುದು ತಪ್ಪಿಲ್ಲ. ಹಲವು ವರ್ಷಗಳಿಂದ ಹಕ್ಕುಪತ್ರ ಕೇಳುತ್ತಿದ್ದರೂ ಕೊಡುತ್ತಿಲ್ಲ” ಎಂದು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯ ವೆಂಕಮ್ಮ ಆರೋಪಿಸಿದರು.
ಈ ವೇಳೆ ಕೊಳಗೇರಿ ಜನಾಂದೋಲನ ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಶೇಖರ್ ಬಾಬು, ಶಿವರಾಜ, ಈರಮ್ಮ ಇದ್ದರು.