- ಮೇ 20ರಂದು ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಪ್ರಮಾಣ ವಚನ
- ಒಮ್ಮತದಿಂದ ಶಾಸಕಾಂಗ ನಾಯಕನ ಆಯ್ಕೆ ಮಾಡಿದ ಕೈ ಪಡೆ
ಗುರುವಾರ ಸಂಜೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ನೂತನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಸಭೆ ನಡೆಯಿತು. ಇಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಶಾಸಕರು ಸರ್ವಾನುಮತದಿಂದ ಆಯ್ಕೆ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಿರ್ಣಯ ಮಂಡಿಸುತ್ತಿದ್ದಂತೆ ಶಾಸಕರು ಸರ್ವಾನುಮತದಿಂದ ಅದನ್ನು ಅನುಮೋದಿಸಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಎಲ್ಲರನ್ನೂ ಒಳಗೊಂಡ, ಜನಮನ್ನಣೆಯ ಸರ್ಕಾರವನ್ನು ನಡೆಸುವ ವಾಗ್ದಾನ ನೀಡಿ, ಪಕ್ಷದ ಗ್ಯಾರಂಟಿ ಯೋಜನೆಗಳ ಜಾರಿಗೆ ಒತ್ತು ಕೊಡುವುದಾಗಿ ಹೇಳಿದರು.
ಬಳಿಕ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆ ರಾಜಭವನಕ್ಕೆ ತೆರಳಿದ ಅವರು ರಾಜ್ಯಪಾಲರೆದುರು ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಹಿಂದಿರುಗಿದರು.
ನಾಳೆ ಮರಳಿ ದೆಹಲಿಗೆ ತೆರಳಿರುವ ಎಸ್ಡಿಕೆ ಜೋಡಿ, ಹೈಕಮಾಂಡ್ ಭೇಟಿಯಾಗಿ ಸಂಪುಟ ಸದಸ್ಯರ ಪಟ್ಟಿ ನೀಡಿ ಅದಕ್ಕೆ ಒಪ್ಪಿಗೆ ಪಡೆದು ಬರಲಿದೆ.
ಈ ಸುದ್ದಿ ಓದಿದ್ದೀರಾ? :ಕೈ ಪಾಳಯದಲ್ಲಿ ಡಿಸಿಎಂ ಸ್ಥಾನದ ಕಿಡಿ ಹೊತ್ತಿಸಿದ ಪರಮೇಶ್ವರ್
ಹೈಕಮಾಂಡ್ ಅನುಮತಿ ಪಡೆದ ಬಳಿಕ ಸಂಪುಟ ಸೇರಲಿರುವ ಕೆಲವರೊಂದಿಗೆ ಎಸ್ಡಿಕೆ ಜೋಡಿ ಶನಿವಾರ ಪ್ರಮಾಣ ವಚನ ಕೈಗೊಳ್ಳಲಿದೆ. ಅಂದೇ ಸರ್ಕಾರದ ಮೊದಲ ಸಂಪುಟ ಸಭೆ ನಡೆಸಲಿರುವ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಲಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ದೆಹಲಿ ನಾಯಕರಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಪಕ್ಷದ ವೀಕ್ಷಕ ನಾಯಕರುಗಳು ಉಪಸ್ಥಿತರಿದ್ದರು.