- ಕೈ ಪಾಳಯದಲ್ಲಿ ಕಿಡಿ ಹೊತ್ತಿಸಿದ ಡಿಸಿಎಂ ಆಯ್ಕೆ ವಿಚಾರ
- ಉಪಮುಖ್ಯಮಂತ್ರಿ ಪಟ್ಟಕ್ಕಾಗಿ ಜಿ ಪರಮೇಶ್ವರ್ ಬಿಗಿಪಟ್ಟು
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ರಚನೆ ಕಸರತ್ತು ಸಿಎಂ ಆಯ್ಕೆಯಷ್ಟೇ ಬಿಗಿಯಾಗುವ ಸಾಧ್ಯತೆ ಹುಟ್ಟುಹಾಕಿದೆ.
ಕಾಂಗ್ರೆಸ್ ನ ಐತಿಹಾಸಿಕ ಗೆಲುವಿನ ಅಲೆಯಲ್ಲಿ ಆಯ್ಕೆಯಾಗಿರುವ ಹಿರಿಕಿರಿಯ ನಾಯಕರುಗಳು ತಮ್ಮ ತಮ್ಮ ಸಾಧನೆ ಹಿನ್ನೆಲೆ ಮುಂದಿಟ್ಟು ತಮಗೆ ಮಂತ್ರಿ ಸ್ಥಾನ ಕೊಡುವಂತೆ ಪಕ್ಷ ನಾಯಕರನ್ನು ಒತ್ತಾಯಿಸುತ್ತಿದ್ದಾರೆ.
ಮತ್ತೊಂದು ಕಡೆ ಹೈ ಕಮಾಂಡ್ ಘೋಷಿಸಿದ ಏಕೈಕ ಡಿಸಿಎಂ ಪಟ್ಟವೂ ಪಕ್ಷದೊಳಗೆ ಅಸಮಾಧಾನದ ಕಿಡಿ ಹೊತ್ತಿಸಿದೆ. ಸಾಮೂಹಿಕ ನಾಯಕತ್ವದ ಮೇಲೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ವ್ಯಕ್ತಿ ಕೇಂದ್ರಿತ ಅಧಿಕಾರ ಹಂಚಿಕೆ ಸರಿಯಲ್ಲ ಎನ್ನುವುದು ಹಲವು ಕಾಂಗ್ರೆಸ್ ನಾಯಕರ ಅಭಿಮತ.
ಈ ವಿಚಾರವನ್ನೇ ಮುನ್ನೆಲೆಗೆ ತಂದಿರುವ ಡಾ. ಜಿ ಪರಮೇಶ್ವರ್, ನಾನು ಈ ಹಿಂದೆ ಡಿಸಿಎಂ ಆಗಿದ್ದವನು. ದಲಿತ ಸಮುದಾಯಕ್ಕೆ ಸಿಎಂ ಪದವಿಯಂತೂ ಸಿಕ್ಕಿಲ್ಲ ಹೀಗಿದ್ದಾಗ, ಡಿಸಿಎಂ ಆದರೂ ಸಿಗಬೇಕು. ಅದನ್ನು ನಾನು ಕೇಳಬೇಕೆಂದೇನಿಲ್ಲ ಅವರೇ ಕೊಡಬೇಕು ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಪರಮೇಶ್ವರ್ “ಈ ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು ನಮ್ಮ ನಾಯಕತ್ವವು ನಿರ್ಧಾರ ತೆಗೆದುಕೊಳ್ಳಬೇಕು. ಅದು ಆಗದಿದ್ದರೆ ಸಹಜವಾಗಿಯೇ ಅದಕ್ಕೆ ಪ್ರತಿಕ್ರಿಯೆಗಳು ಬರುತ್ತವೆ. ಅದನ್ನು ನಾನು ಹೇಳುವ ಅಗತ್ಯವಿಲ್ಲ. ನಂತರ ಅದನ್ನು ಅರಿತುಕೊಳ್ಳುವ ಬದಲು ಈಗ ಅದನ್ನು ಸರಿಪಡಿಸದೆ ಇದ್ದಲ್ಲಿ ಪಕ್ಷಕ್ಕೆ ತೊಂದರೆಯಾಗಬಹುದು, ಅದನ್ನು ಅರ್ಥ ಮಾಡಿಕೊಳ್ಳುವಂತೆ ಹೇಳಲು ಬಯಸುತ್ತೇನೆ” ಎಂದು ಪರಮೇಶ್ವರ್ ಹೇಳಿದರು.
ಮತ್ತೊಂದು ಕಡೆ ಪಕ್ಷಕ್ಕೆ ಈ ಚುನಾವಣೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದ ಲಿಂಗಾಯತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳೂ ತಮ್ಮ ಶಾಸಕರುಗಳಿಗೂ ಡಿಸಿಎಂ ಅವಕಾಶ ಕೊಡುವಂತೆ ಮನವಿ ಮಾಡಿಕೊಳ್ಳುತ್ತಿದೆ.
ಪರಮೇಶ್ವರ್ ಜೊತೆಗೆ ಈ ಹಿಂದೆಯೇ ಡಿಸಿಎಂ ವಿಚಾರದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದ ಎಂ ಬಿ ಪಾಟೀಲ್ ಅವಕಾಶ ಕೊಟ್ಟರೆ ನಾನು ಡಿಸಿಎಂ ಆಗುವೆ, ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗ ಅವಕಾಶ ಕೊಟ್ಟರೆ ಸಮುದಾಯಕ್ಕೆ ನ್ಯಾಯ ಸಲ್ಲಿಸಿದಂತೆ ಎಂದಿದ್ದರು.
ಇದೇ ಅಭಿಪ್ರಾಯವನ್ನು ಮಾಜಿ ಆರೋಗ್ಯ ಸಚಿವ ಯು ಟಿ ಖಾದರ್ ಕೂಡ ಹಂಚಿಕೊಂಡಿದ್ದರು. ಈ ಇಬ್ಬರು ನಾಯಕರುಗಳ ಅಭಿಪ್ರಾಯವನ್ನೇ ರಾಮಲಿಂಗಾರೆಡ್ಡಿ ಹಾಗೂ ಸತೀಶ್ ಜಾರಕಿಹೊಳಿ ಬೆಂಗಲಿಗರು ವ್ಯಕ್ತಪಡಿಸಿ ತಮ್ಮ ಸಮುದಾಯಗಳಿಗೂ ನ್ಯಾಯ ಒದಗಿಸಲು ಇವರಿಬ್ಬರನ್ನು ಡಿಸಿಎಂ ಮಾಡುವಂತೆ ಕಾಂಗ್ರೆಸ್ಗೆ ಒತ್ತಡ ಹೇರಿದ್ದವು.
ಈ ಸುದ್ದಿ ಓದಿದ್ದೀರಾ?:ರಾಜ್ಯ ರಾಜಕಾರಣದಲ್ಲಿ ಇನ್ನಾರು ತಿಂಗಳೊಳಗೆ ಭಾರೀ ಬದಲಾವಣೆ : ಎಚ್ಡಿಕೆ ಅಚ್ಚರಿ ಹೇಳಿಕೆ
ಇವೆಲ್ಲದರ ನಡುವೆ ಗುರುವಾರ ಸಂಜೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪರಮೇಶ್ವರ್ ತಮ್ಮ ಡಿಸಿಎಂ ಪದವಿ ಆಕಾಂಕ್ಷೆಯನ್ನು ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಿನಲ್ಲಿ ಡಿಸಿಎಂ ಜೊತೆಗೆ ಸಚಿವ ಸ್ಥಾನಕ್ಕೆ ನೂತನ ಸರ್ಕಾರದಲ್ಲಿ ದೊಡ್ಡಮಟ್ಟದ ಲಾಬಿಯನ್ನು ಶಾಸಕರು ಆರಂಭಿಸಿದ್ದಾರೆ. ಸಿಎಂ ಹಾಗೂ ಡಿಸಿಎಂ ಜೊತೆ ಮೊದಲ ಪಟ್ಟಿಯಲ್ಲಿ ಪ್ರಮಾಣವಚನ ಸ್ವೀಕರಿಸುವ ಅದೃಷ್ಟಶಾಲಿಗಳು ಯಾರಾಗುತ್ತಾರೆನ್ನುವ ಕುತೂಹಲವನ್ನು ಹುಟ್ಟು ಹಾಕಿದೆ.