- ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಕಾಂಗ್ರೆಸ್ ಸರ್ಕಾರ
- 8 ಮಂದಿ ಸಚಿವರೊಂದಿಗೆ ಪ್ರಮಾಣ ಸ್ವೀಕರಿಸಿದ ಸಿಎಂ
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹೊಸಯುಗ ಆರಂಭವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿನಿಂದ ಕಾರ್ಯಾರಂಭಕ್ಕೆ ಅಣಿಯಾಗಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾಡಿನ ಗಣ್ಯಮಾನ್ಯರ ಜೊತೆ ಆಹ್ವಾನಿತರಾಗಿದ್ದ ಅತಿಥಿಗಳ ಸಮ್ಮುಖದೊಂದಿಗೆ ಅಪಾರ ಅಭಿಮಾನಿಗಳ ಎದುರಲ್ಲಿ ಸಿದ್ದರಾಮಯ್ಯ ಎರಡನೇ ಬಾರಿ ಮುಖುಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಎಂದಿನಂತೆ ತಮ್ಮ ರೇಷ್ಮೆ ಪಂಚೆ, ಷರ್ಟ್ ನಲ್ಲಿ ಮಿರಿಮಿರಿ ಮಿಂಚುತ್ತಿದ್ದ ಸಿದ್ದರಾಮಯ್ಯ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು. ಇವರಿಗೆ ಜೊತೆಯಾದ ಡಿಸಿಎಂ ಶಿವಕುಮಾರ್ ಕೂಡ ಅದೇ ವಸ್ತ್ರಸಂಹಿತೆ ಪಾಲಿಸಿ, ತಾವೂ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಇವರೊಂದಿಗೆ ಸಂಪುಟ ಸೇರ್ಪಡೆಗೊಂಡ ಡಾ ಜಿ ಪರಮೇಶ್ವರ್ ಸಂವಿಧಾನದ ಹೆಸರಿನಲ್ಲೂ, ಎಂ ಬಿ ಪಾಟೀಲ್ ದೇವರ ಹೆಸರಿನಲ್ಲೂ, ಕೆ ಎಚ್ ಮುನಿಯಪ್ಪ ದೇವರ ಹೆಸರಿನಲ್ಲೂ, ಕೆ.ಜೆ ಜಾರ್ಜ್ ದೇವರ ಹೆಸರಿನಲ್ಲೂ, ಸತೀಶ್ ಜಾರಕಿಹೊಳಿ ಬುದ್ದ,ಬಸವ,ಅಂಬೇಡ್ಕರ್ ಹೆಸರಿನಲ್ಲಿ, ಪ್ರಿಯಾಂಕ್ ಖರ್ಗೆ ದೇವರ ಹೆಸರಿನಲ್ಲೂ, ಜಮೀರ್ ಅಹ್ಮದ್ ಅಲ್ಲಾ ಮತ್ತು ತಾಯಿಯ ಹೆಸರಿನಲ್ಲಿ ಮತ್ತು ರಾಮಲಿಂಗಾರೆಡ್ಡಿ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.
ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಇವರಿಗೆ ಗೌಪ್ಯತಾ ಪ್ರಮಾಣವಚನ ಬೋಧಿಸಿದರು. ಜಮೀರ್ ಅಹ್ಮದ್ ಹೊರತು ಪಡಿಸಿ ಉಳಿದೆಲ್ಲ ಸಚಿವರು ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಿದರು. ಜಮೀರ್ ಇಂಗ್ಲೀಷ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇಂದು ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ನಾಲ್ಕು ಮಂದಿ ಹಿರಿಯ ಸಚಿವರು ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದವರೆನ್ನುವುದು ಗಮನಾರ್ಹ.
ಈ ಸುದ್ದಿ ಓದಿದ್ದೀರಾ?:ಶನಿವಾರವೇ ಮೊದಲ ಸಂಪುಟ ಸಭೆ; ಜಾರಿಗೆ ಬರುತ್ತವಾ ಐದು ಗ್ಯಾರಂಟಿಗಳು?
ಎಸ್ಡಿಕೆ ಜೋಡಿ ಪ್ರಮಾಣವಚನದ ವೇಳೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಇಂತಹ ಸಂಭ್ರಮದ ಕ್ಷಣಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮಿಳುನಾಡಿನ ಮುಖ್ಯಮಂತ್ರಿ ಸ್ಟ್ಯಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್, ಎನ್ಸಿಪಿಯ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ನ ಫರೂಕ್ ಅಬ್ದುಲ್ಲಾ, ಮುಫ್ತಿ ಮಹಮ್ಮದ್ ಸಯ್ಯದ್, ನಟ ಕಮಲಹಾಸನ್, ಶಿವರಾಜ್ ಕುಮಾರ್, ನಟಿ ರಮ್ಯ ಸೇರಿದಂತೆ ಇತರರು ಸಾಕ್ಷಿಯಾದರು.
ಒಂದುವರೆ ಘಂಟೆಗಳ ಕಾಲ ನಡೆದ ಸಮಾರಂಭದ ಬಳಿಕ ಸಿಎಂ ಸಿದ್ದರಾಮಯ್ಯ ಡಿಸಿಎಂ ಶಿವಕುಮಾರ್ ಸೇರಿದಂತೆ ಸಂಪುಟ ಸಿಚಿವರು ವಿಧಾನಸೌಧಕ್ಕೆ ತೆರಳಿ ಮೊದಲ ಸಂಪುಟ ಸಭೆಯಲ್ಲಿ ಭಾಗಿಯಾದರು