- ನೂತನ ಶಾಸಕರಿಗೆ ಮೂರು ದಿನ ತರಬೇತಿ ಶಿಬಿರ ಆಯೋಜನೆ
- ಹಿರಿಯ ಮಾಜಿ ಸಚಿವರುಗಳಿಂದ ಕಿರಿಯ ಶಾಸಕರಿಗೆ ತರಬೇತಿ
ಜುಲೈ 3 ರಿಂದ ಆರಂಭವಾಗಲಿರುವ ನೂತನ ಸರ್ಕಾರದ ಬಜೆಟ್ ಅಧಿವೇಶನದ ಜೊತೆಜೊತೆಯಲ್ಲೇ ವಿಧಾನಸಭೆಯನ್ನ ಡಿಜಿಟಲೈಜೇಷನ್ ಮಾಡುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ತಿಳಿಸಿದರು.
ವಿಧಾನಸೌಧದಲ್ಲಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಅವರು ಬಜೆಟ್ ಅಧಿವೇಶನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಅಧಿವೇಶನದ ಆರಂಭವಾಗುವ ಜುಲೈ 3ರ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜುಲೈ 3 ರಿಂದ 14 ನೇ ತಾರೀಖಿನ ವರೆಗೆ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ಹೇಳಿದರು.
ವಿಧಾನಸಭೆಯನ್ನ ಡಿಜಿಟಲೈಜೇಷನ್ ಮಾಡುವ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇವೆ. ದೇಶದಲ್ಲೇ ವಿಧಾನಭೆಯನ್ನ ಮಾದರಿಯ ಸಭೆಯನ್ನಾಗಿ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಖಾದರ್ ತಿಳಿಸಿದರು.
ಈ ಬಾರಿ 70 ಶಾಸಕರು ಪ್ರಥಮ ಬಾರಿಗೆ ಆಯ್ಕೆಯಾಗಿದ್ದಾರೆ. ಅಧಿವೇಶನದಲ್ಲಿ ನೂತನ ಶಾಸಕರು ಪಾಲ್ಗೊಳ್ಳುವುದು ತುಂಬಾ ಅವಶ್ಯ. ಈ ಹಿನ್ನೆಲೆಯಲ್ಲಿ ನೂತನ ಶಾಸಕರಿಗೆ ಮೂರು ದಿನ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು, ಅವರಿಗೆ ಹೆಲ್ತ್ ಫಿಟ್ ನೆಸ್ ಮತ್ತು ಟ್ರೈನಿಂಗ್ ಕ್ಯಾಂಪ್ ನಡೆಸಲಾಗುವುದು. ಇದರ ಜೊತೆಗೆ ನೆಲಮಂಗಲದ ಧರ್ಮಸ್ಥಳ ಕೇಂದ್ರದಲ್ಲಿ ನ್ಯಾಚರೋಪತಿ ಟ್ರಿಟ್ಮೆಂಟ್ ಕೂಡ ಇರಲಿದೆ. 26ನೇ ತಾರೀಖಿನಿಂದ ಮೂರು ದಿನಗಳ ಕಾಲ ಈ ತರಬೇತಿ ನಡೆಯಲಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ನಾಳೆ ರಾಷ್ಟ್ರಪತಿ, ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡುವೆ: ಸಿಎಂ ಸಿದ್ದರಾಮಯ್ಯ
ಇನ್ನು ತರಬೇತಿ ಅವಧಿಯಲ್ಲಿ ಪ್ರತಿದಿನಕ್ಕೆ ಒಬ್ಬರಂತೆ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಕುಮಾರಸ್ಚಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಒಳಗೊಂಡಂತೆ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ಆಯೋಜನೆ ಮಾಡಲಾಗಿದೆ ಎಂದು ಸ್ಪೀಕರ್ ಹೇಳಿದರು.
ಈ ವೇಳೆ ನೂತನ ಶಾಸಕರಿಗೆ ಸಭಾ ನಿಯಮ, ನಡಾವಳಿ ಹಾಗೂ ಕಲಾಪ ನಡೆಯುವ ರೀತಿ ಜೊತೆಗೆ ಬಜೆಟ್ ಮಂಡನೆ ಹೇಗೆ? ಶಾಸನ ರಚನೆ, ವಿಧಾನಸಭೆ ಮತ್ತು ಪರಿಷತ್ ಮಹತ್ವ ಏನು? ಶಾಸಕ ಹಕ್ಕುಗಳು ಏನು ಎಂಬೆಲ್ಲ ಮಾಹಿತಿಯನ್ನ ನೀಡಲಾಗುತ್ತದೆ ಎಂದು ತಿಳಿಸಿದರು.