2024ರ ಲೋಕಸಭೆ ಚುನಾವಣೆ ಕದನಕ್ಕೆ ‘ಸೆಮಿ ಫೈನಲ್’ ಎಂದೇ ಹೇಳಲಾದ ಪಂಚ ರಾಜ್ಯ ಚುನಾವಣೆಯಲ್ಲಿ ಜನರು ಯಾರಿಗೆ ಅಧಿಕಾರ ನೀಡಲಿದ್ದಾರೆ ಎಂಬುದು ಭಾನುವಾರ ಗೊತ್ತಾಗಲಿದೆ. ನವೆಂಬರ್ 7ರಿಂದ 30ರ ನಡುವೆ ತೆಲಂಗಾಣ, ಛತ್ತೀಸ್ಘಡ, ಮಿಜೋರಾಂ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಮತದಾನ ನಡೆದಿತ್ತು. ಈ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಭಾನುವಾರ ಹೊರಬೀಳಲಿದೆ. ಮಿಜೋರಾಂನಲ್ಲಿ ಮಾತ್ರ ಮತ ಎಣಿಕೆ ಸೋಮವಾರ ನಡೆಯಲಿದೆ. ಯಾವ ಪಕ್ಷ ಯಾವ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ.
ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸರ್ಕಾರ ರಚನೆಗೆ ಬೇಕಿರುವ ಬಹುಮತದ ಸಂಖ್ಯೆ 60 ಇದೆ. ಈಗಾಗಲೇ 4 ರಾಜ್ಯಗಳ ವಿಧಾನಸಭಾ ಚುನಾವಣೆಯ ಅಂಚೆ ಮತ ಎಣಿಕೆ ಆರಂಭವಾಗಿದೆ.
ಹಾಲಿ ಅಧಿಕಾರದಲ್ಲಿರುವ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ(ಬಿಆರ್ಎಸ್) ತೆಲಂಗಾಣದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ರಚಿಸುವ ವಿಶ್ವಾಸದಲ್ಲಿದೆ. ಆದರೆ, ಈ ಬಾರಿ ಆಡಳಿತಾರೂಢ ಬಿಆರ್ಎಸ್ ಅಧಿಕಾರ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.
2018ರಲ್ಲಿ ಸಿಂಹಪಾಲು ಮತಗಳನ್ನು ಗಳಿಸಿದ್ದ ಟಿಆರ್ಎಸ್ (ಈಗ ಬಿಆರ್ಎಸ್) ರಾಜ್ಯದ 119 ಸ್ಥಾನಗಳಲ್ಲಿ 88 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ತೆಲಂಗಾಣದ ಅಂಚೆ ಮತದಾನದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಆರ್ಎಸ್ ಪಕ್ಷವನ್ನು ಹಿಂದಿಕ್ಕಿದೆ. ತೆಲಂಗಾಣದಲ್ಲಿ ಕಾಮಾರೆಡ್ಡಿ ಕ್ಷೇತ್ರದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ಗೆ ಹಿನ್ನಡೆಯಾಗಿದೆ. ಕಾಮಾರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ರೇವಂತ್ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮತ ಎಣಿಕೆ ಆರಂಭ : ತೆಲಂಗಾಣ, ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಮುನ್ನಡೆ
ತೆಲಂಗಾಣದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಲು ಹವಣಿಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಸ್ತುತ ಗಜ್ವೇಲ್ನಲ್ಲಿ ಮುನ್ನಡೆ ಸಾಧಿಸಿದ್ದಾರೆ. 2014ರಲ್ಲಿ ರಾಜ್ಯ ರಚನೆಯಾದಾಗಿನಿಂದ ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಪಕ್ಷ ಅಧಿಕಾರದಲ್ಲಿದೆ. ಎಲ್ಲ ಎಕ್ಸಿಟ್ ಪೋಲ್ಗಳು ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ.
ಈ ಬಾರಿ ತೆಲಂಗಾಣದಲ್ಲಿ 1.80 ಲಕ್ಷ ಚುನಾವಣಾ ಸಿಬ್ಬಂದಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ 27, ಬಿಆರ್ಎಸ್ 17 ಮುನ್ನಡೆ ಸಾಧಿಸಿದೆ. ಎಐಎಮ್ಐಎಮ್ (AIMIM) 5, ಬಿಜೆಪಿ 1, ಇತರೆ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.