- ನಿರ್ಮಲಾನಂದ ಶ್ರೀಗಳಿಗೆ ಮನವರಿಕೆ ಮಾಡಿಕೊಡುತ್ತೇವೆ
- ದಾಖಲೆಗಳನ್ನು ತೆಗೆದುಕೊಂಡು ಮಠಕ್ಕೆ ಹೋಗುತ್ತೇವೆ
ಉರಿಗೌಡ – ನಂಜೇಗೌಡ ವಿಚಾರದಲ್ಲಿ ಬಿಜೆಪಿ ನಾಯಕರು ಸುಮ್ಮನಿರುವಂತೆ ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮಿ ಎಚ್ಚರಿಕೆ ನೀಡಿದ್ದರು. ಅದಾದ ಬಳಿಕ ಬಿಜೆಪಿ ನಾಯಕರು ಒಂದು ಮಟ್ಟಿಗೆ ತಣ್ಣಗಾಗಿದ್ದರು. ಆದರೆ, ಇದೀಗ ನಿರ್ಮಲಾನಂದನಾಥ ಸ್ವಾಮಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸೆಡ್ಡು ಹೊಡೆದಿದ್ದಾರೆ.
ಇತಿಹಾಸದ ಪೂರ್ಣ ದಾಖಲೆಗಳು ಲಭ್ಯವಿಲ್ಲದ ವಿಚಾರಗಳ ಮೇಲೆ ನಾವು ಮಾತನಾಡುವುದು ಅಥವಾ ಆ ವಿಚಾರವನ್ನು ಬೆಳೆಸುವಂತಹ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ನಿರ್ಮಲಾನಂದನಾಥ ಸ್ವಾಮಿ ಹೇಳಿದ್ದರು. ಆದರೆ, ಉರಿ-ನಂಜೇಗೌಡ ವಿವಾದ ಸದ್ಯಕ್ಕೆ ನಿಲ್ಲುವ ಯಾವ ಮುನ್ಸೂಚನೆಯೂ ಕಾಣಿಸುತ್ತಿಲ್ಲ.
ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಮಾತನಾಡಿದ ಸಿ ಟಿ ರವಿ, “ಉರಿಗೌಡ-ನಂಜೇಗೌಡ ಕಾಲ್ಪನಿಕ ಕಥೆಗಳಲ್ಲ. ಅವರ ಬಗ್ಗೆ ಜವರೇಗೌಡರು ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ನಿರ್ಮಲಾನಂದನಾಥ ಶ್ರೀಗಳಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುತ್ತೇವೆ” ಎಂದು ಹೇಳುವ ಮೂಲಕ ಆದಿಚುಂಚನಗಿರಿ ಪೀಠಾಧ್ಯಕ್ಷರಿಗೆ ಬುದ್ಧಿ ಹೇಳುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.
“ಅವರ ಬಳಿಗೆ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತೇವೆ. ಉರಿಗೌಡ, ನಂಜೇಗೌಡ ಬಗ್ಗೆ ದಾಖಲೆ ಸಂಗ್ರಹಿಸುವ ಕೆಲಸ ಮಾಡುತ್ತೇವೆ. ಉರಿಗೌಡ, ನಂಜೇಗೌಡ ಹೆಸರು ನಿನ್ನೆ ಮೊನ್ನೆಯಿಂದ ಪ್ರಾಮುಖ್ಯತೆಗೆ ಬಂದಿರುವುದಲ್ಲ” ಎಂದು ಸೆಡ್ಡು ಹೊಡೆದಿದ್ದಾರೆ.
“ಉರಿಗೌಡ-ನಂಜೇಗೌಡ ಅವರ ಬಗ್ಗೆ ಪುಸ್ತಕಗಳಲ್ಲಿ ಉಲ್ಲೇಖಗಳಿವೆ. ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಎಲ್ಲರೂ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಟಿಪ್ಪು ಸುಲ್ತಾನನನ್ನು ನಮ್ಮ ಇತಿಹಾಸದಲ್ಲಿ ವೈಭವೀಕರಿಸಲಾಗಿದೆ. ಉರಿಗೌಡ-ನಂಜೇಗೌಡರ ವಿಚಾರದಲ್ಲಿ ಅಗೌರವ ತೋರಿಸಿರುವ ಎಚ್ ಡಿ ಕುಮಾರಸ್ವಾಮಿ ಅವರು ನಿರ್ಮಲಾನಂದ ಶ್ರೀಗಳ ಬಳಿ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಟಿಪ್ಪು ಸುಲ್ತಾನ್ ಹತ್ಯೆಯ ಕುರಿತು ಸಂಶೋಧನೆಯ ಮೂಲಕ ಸತ್ಯ ಹೊರಬೀಳಬೇಕು. ಸ್ವಾಮೀಜಿ ನನ್ನ ಜೊತೆ ಮಾತನಾಡಿದ್ದಾರೆ. ಗುರುಗಳ ಮಾತಿಗೆ ನಾವು ಗೌರವ ಕೊಡುತ್ತೇವೆ. ಟಿಪ್ಪು ಮತಾಂಧ ಅನ್ನುವುದು ನಿಜ. ಅವನನ್ನು ವೈಭವಿಕರಿಸಲಾಗಿದೆ. ಇತಿಹಾಸದಲ್ಲಿ ತಿಳಿಸಬೇಕಾದ್ದನ್ನು ತಿಳಿಸಿಲ್ಲ” ಎಂದು ಹೇಳಿದ್ದಾರೆ.