- ಯಾವುದೇ ಕಾರಣಕ್ಕೂ ಪಠ್ಯದ ಕೇಸರೀಕರಣಕ್ಕೆ ಅವಕಾಶ ಕೊಡುವುದಿಲ್ಲ
- ನಮ್ಮ ಮಕ್ಕಳು ನೈಜ, ಬ್ರಾತೃತ್ವದ ಶಿಕ್ಷಣವನ್ನೇ ಪಡೆದುಕೊಳ್ಳಬೇಕು: ಸಚಿವ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆನ್ನುವುದು ನಮ್ಮ ಸರ್ಕಾರ ಆಶಯ. ಆ ನಿಟ್ಟಿನಲ್ಲಿ ಹಿಂದಿನ ಸರ್ಕಾರದಿಂದ ಆಗಿದ್ದ ತಪ್ಪು ಮಾಹಿತಿಯುಕ್ತ ಪಠ್ಯ ಕ್ರಮಗಳನ್ನು ಈ ವರ್ಷವೇ ಪರಿಷ್ಕರಣೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮಕ್ಕಳು ತಪ್ಪು ಮಾಹಿತಿಗಳನ್ನು ಕಲಿಯಬಾರದು, ಹಾಗಾಗಿ ಈ ಸಾಲಿನಲ್ಲೇ ಪಠ್ಯ ಮರು ಪರಿಷ್ಕರಣೆ ಮಾಡುತ್ತೇವೆ ಎಂದರು.
ಪಠ್ಯ ಕೇಸರೀಕರಣದ ವಿಚಾರದ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಸಚಿವ ಮಧು ಬಂಗಾರಪ್ಪ, ಶಿಕ್ಷಣದಲ್ಲಿ ಪಕ್ಷದ ಅಜೆಂಡಾಗಳನ್ನು ತರುವುದು ಸರಿಯಲ್ಲ, ದಾಖಲಿತ ಇತಿಹಾಸವನ್ನು, ಬ್ರಾತೃತ್ವದ ಶಿಕ್ಷಣವನ್ನು ನಾವು ಅವರಿಗೆ ಕೊಡಬೇಕು, ನಾವೆಲ್ಲ ಒಂದೇ ಎನ್ನುವುದನ್ನು ಅವರು ರೂಢಿಸಿಕೊಳ್ಳಬೇಕು. ಇಂತಹ ಶಿಕ್ಷಣದ ಬದಲು ದ್ವೇಷ ಬಿತ್ತುವ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವ ಪಠ್ಯಗಳನ್ನು ಕಲಿಸುವುದು ಸರಿಯಲ್ಲ. ಯಾವುದೇ ಸರ್ಕಾರದ ಅವಧಿಯಲ್ಲೂ ಶಿಕ್ಷಣದಲ್ಲಿ ಹೇರಿಕೆ ವಿಚಾರ ಇರಬಾರದು ಎಂದು ಹೇಳಿದರು.
ಪಠ್ಯ ಪರಿಷ್ಕರಣೆ ವಿಚಾರವಾಗಿ ಈಗಾಗಲೇ ಸಾಹಿತ್ಯ ವಲಯದ ಪ್ರಮುಖರೊಂದಿಗೆ ಸಭೆ ನಡೆಸಲಾಗಿದೆ. ಅವರ ಅಭಿಪ್ರಾಯ ಅನಿಸಿಕೆಗಳನ್ನು ಕ್ರೋಡೀಕರಿಸಲಾಗುತ್ತಿದೆ. ಹಾಗೆಯೇ ಅನಗತ್ಯ ಪಠ್ಯಗಳನ್ನು ಕೈ ಬಿಡಲು ನಿರ್ಧರಿಸಿರುವುದಾಗಿ ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಪಠ್ಯ ಪರಿಷ್ಕರಣೆಯ ಧಾವಂತ ಏಕೆ, ಋಣ ತೀರಿಸಲಿಕ್ಕಾಗಿಯೇ: ಸುನಿಲ್ ಕುಮಾರ್ ಪ್ರಶ್ನೆ
ನಮ್ಮ ಸರ್ಕಾರ ಮಕ್ಕಳ ಒಳಿತಿಗೆ ಅಗತ್ಯವಾದ ಕ್ರಮ ಕೈಗೊಳ್ಳುತ್ತದೆ. ಆಮೂಲಾಗ್ರ ಪಠ್ಯಕ್ರಮವನ್ನು ಮಕ್ಕಳು ಅನುಸರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕರಣೆ ವಿಚಾರವನ್ನು ಕ್ಯಾಬಿನೆಟ್ ನಲ್ಲಿಟ್ಟು ಚರ್ಚಿಸಿ ಮುಂದುವರೆಯಲಾಗುವುದು ಎಂದು ಹೇಳಿದರು.
ಪರಿಷ್ಕರಣೆಗೆ ಅಧಿಕೃತ ಮುದ್ರೆ ಸಿಕ್ಕರೆ ಬದಲಾಗಲಿರುವ ಪಠ್ಯ ಕ್ರಮವನ್ನು ಸಪ್ಲಿಮೆಂಟರಿ ಪ್ರತಿ ರೂಪದಲ್ಲಿ ಶಾಲೆ ಹಾಗೂ ಮಕ್ಕಳ ಕೈಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.