- ಇದೆಂತ ಮುಟ್ಟಾಳರ ಗುಂಪೋ ಎಂದ ಸಿ ಟಿ ರವಿ
- ಅಮುಲ್ ಸಮರ್ಥಿಸಿಕೊಂಡ ಸಚಿವ ಸುಧಾಕರ್
ಗುಜರಾತ್ ಮೂಲದ ಅಮುಲ್ ಕಂಪನಿ ತನ್ನ ವ್ಯಾಪಾರವನ್ನು ಕರ್ನಾಟಕದಲ್ಲಿ ವಿಸ್ತರಿಸುತ್ತಿದೆ. ನಂದಿನಿ ಬ್ರ್ಯಾಂಡ್ ಅನ್ನು ಮುಗಿಸುವ ಹುನ್ನಾರದಿಂದಲೇ ಅಮುಲ್ ರಾಜ್ಯಕ್ಕೆ ಬರುತ್ತಿದೆ ಎನ್ನುವ ಚರ್ಚೆಗಳು ಬಿಸಿಯಾಗಿರುವ ಹೊತ್ತಲ್ಲೇ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ‘ಅಮುಲ್ ರಾಜ್ಯದಲ್ಲಿ ಮಾರಾಟವಾದರೆ ತೊಂದರೆ ಏನೀಗ’ ಎನ್ನುವ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಅಮುಲ್ ಮಾರಾಟದ ಹಿಂದಿನ ಹುನ್ನಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕೆಲ ದಿನಗಳಿಂದ ನಂದಿನಿ ಹಾಲು ಉತ್ಪನ್ನಗಳ ಅಭಾವವೂ ಕಾಡುತ್ತಿದೆ. ಸಾಮಾನ್ಯವಾಗಿ ವಿಪಕ್ಷಗಳು ರಾಜ್ಯ ರೈತರ ಪರವಾಗಿ ನಿಂತಿವೆ. ವಿಪಕ್ಷಗಳನ್ನು ಗುರಿಯಾಗಿಸುವ ಬರದಲ್ಲಿ ಸಿ ಟಿ ರವಿ, ಅಮುಲ್ ವ್ಯಾಪಾರ ರಾಜ್ಯಕ್ಕೆ ಬಂದರೆ ತೊಂದರೆ ಏನು ಎಂದು ಹೇಳಿಕೆ ನೀಡಿದ್ದಾರೆ
ಈ ಕುರಿತು ಟ್ವೀಟ್ ಮಾಡಿರುವ ಸಿ ಟಿ ರವಿ, “ಇಟಲಿಯನ್ನರು ದೇಶವನ್ನು ಆಳಿದರೆ ಗುಲಾಮರಿಗೆ ಯಾವ ತೊಂದರೆಯೂ ಇಲ್ಲ. ಆದರೆ, ಭಾರತದ್ದೆ ಆದ ಅಮುಲ್ ಇತರೆ ಕಂಪನಿಗಳಂತೆ ಕರ್ನಾಟಕದಲ್ಲಿ ಮಾರಾಟ ಮಾಡಿದರೆ ಇವರಿಗೆ ಸಮಸ್ಯೆ ಎನಿಸುತ್ತದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
“ಇದೆಂತ ಮುಟ್ಟಾಳರ ಗುಂಪೋ” ಎಂದು ಸಿ ಟಿ ರವಿ ಲೇವಡಿ ಮಾಡಿದ್ದಾರೆ.
ಕೆಎಂಎಫ್ ಅನ್ನು ತಮ್ಮ ಜೀವನಾಡಿ ಆಗಿಸಿಕೊಂಡವರಿಗೆ ಅಮುಲ್ ವ್ಯಾಪಾರ ವಿಸ್ತರಣೆ ಆತಂಕಕ್ಕೀಡು ಮಾಡಿದೆ. ಈ ನಡುವೆ, ಬಿಜೆಪಿ ನಾಯಕರು ‘ಅದೇನು ಮಹಾ’ ಎನ್ನುವಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.
ಈ ಸುದ್ದಿ ಓದಿದ್ದೀರಾ? ಅಮುಲ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದ ಸಿಎಂ ಬೊಮ್ಮಾಯಿ
ಅಮುಲ್ ಬರುವಿಕೆಯನ್ನು ಸಮರ್ಥಿಸಿಕೊಂಡ ಸಚಿವ ಕೆ ಸುಧಾಕರ್, “ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ..? ಕಾಂಗ್ರೆಸ್ಸಿಗರು ಅಪಹಾಸ್ಯಕ್ಕೆ ಒಳಗಾಗಬೇಡಿ. ಕಾಮಾಲೆ ಕಣ್ಣಿನಿಂದ ನೋಡೋದನ್ನ ಬಿಡಿ” ಎಂದು ಹೇಳಿದ್ದಾರೆ.
“ನಂದಿನಿ ಹಾಲನ್ನು ರಾಜ್ಯಕ್ಕೆ ಸೀಮಿತ ಮಾಡಬೇಡಿ ನಂದಿನಿ ಹಾಲನ್ನ ಬೇರೆ ರಾಜ್ಯಗಳಿಗೂ ಕಳಿಸುತ್ತಿದ್ದೇವೆ. ಸೇನೆ, ತಿರುಪತಿ, ದೆಹಲಿಗೂ ಕಳಿಸುತ್ತಿದ್ದೇವೆ. ಬೇರೆ ಬ್ರ್ಯಾಂಡ್ ಹಾಲನ್ನೂ ಇಲ್ಲಿ ಮಾರಲಾಗುತ್ತಿದೆ” ಎಂದು ಸುಧಾಕರ್ ಬಲವಾಗಿ ಅಮುಲ್ಗೆ ಸ್ವಾಗತ ಕೋರಿದ್ದಾರೆ.