- ನಂದಿನಿ ಹಾಲನ್ನು ರಾಜ್ಯಕ್ಕೆ ಸೀಮಿತ ಮಾಡದಂತೆ ಸುಧಾಕರ್ ಮನವಿ
- ಅಮುಲ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದ ಸಿಎಂ
ರಾಜ್ಯದಲ್ಲಿ ಅಮುಲ್ ಮಾರಾಟದ ಹಿಂದಿನ ಹುನ್ನಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್. ಮುಂದಿನ ದಿನಗಳಲ್ಲಿ ದೇಶದ ನಂಬರ್ 1 ಸ್ಥಾನಕ್ಕೆ ಏಳಿಗೆ ಹೊಂದಲಿದೆ” ಎಂದಿದ್ದಾರೆ.
ಗುಜರಾತ್ ಮೂಲದ ಅಮುಲ್ ಕಂಪನಿ ರಾಜ್ಯದಲ್ಲಿ ತನ್ನ ವ್ಯಾಪಾರ ವಿಸ್ತರಿಸಿದೆ. ಅನುಮಾನಗಳಿಗೆ ಪುಷ್ಟಿ ನೀಡುವಂತೆ ರಾಜ್ಯದಲ್ಲಿ ಕೆಲ ದಿನಗಳಿಂದ ನಂದಿನಿ ಹಾಲು ಉತ್ಪನ್ನಗಳ ಅಭಾವ ಕಾಡುತ್ತಿದೆ. ಅಮುಲ್ ತಿರಸ್ಕರಿಸುವಂತೆ ಅಭಿಯಾನಗಳೂ ಆರಂಭವಾಗಿವೆ. ಈ ನಡುವೆ ಬಸವರಾಜ ಬೊಮ್ಮಾಯಿ ಅವರು ‘ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ.
“ಅಮುಲ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಅಮುಲ್ ಬ್ರ್ಯಾಂಡ್ ವಿಚಾರವಾಗಿ ಯಾರೂ ಆತಂಕಪಡಬೇಕಿಲ್ಲ. ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ವೃದ್ಧಿಗೆ ಮತ್ತಷ್ಟು ಕ್ರಮಕೈಗೊಳ್ಳುತ್ತೇವೆ” ಎಂದು ಭರವಸೆಯ ಮಾತಗಳನ್ನಾಡಿದ್ದಾರೆ.
ಅಮುಲ್ ಕಂಪನಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಸುಧಾಕರ್, “ಬಿಜೆಪಿ ಸರ್ಕಾರ ಹಾಲಿಗೆ ಪ್ರೋತ್ಸಾಹ ಧನ ನೀಡಿದೆ. ಕೆಎಂಎಫ್ ಆದಾಯದಲ್ಲಿ ಹಾಲು ಉತ್ಪಾದಕರಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಮುಲ್ ವಿರುದ್ಧ ಕನ್ನಡಿಗರು ಸಿಡಿದೇಳಬೇಕು: ಎಚ್ ಡಿ ಕುಮಾರಸ್ವಾಮಿ
“ನಂದಿನಿ ಹಾಲನ್ನು ಕೇವಲ ರಾಜ್ಯಕ್ಕೆ ಸೀಮಿತ ಮಾಡಬೇಡಿ. ಈಗಾಗಲೇ ಸೇನೆಗೆ, ತಿರುಪತಿ ತಿರುಮಲ, ಮಹಾರಾಷ್ಟ್ರಕ್ಕೆ ನಮ್ಮ ಹಾಲು ಪೂರೈಕೆಯಾಗುತ್ತಿದೆ” ಎಂದು ಹೇಳಿದ್ದಾರೆ.
“ಇತರೆ ಬ್ರ್ಯಾಂಡ್ನ ಹಾಲುಗಳನ್ನು ರಾಜ್ಯದಲ್ಲಿ ಹಿಂದಿನಿಂದಲೂ ಮಾರಾಟ ಮಾಡಲಾಗುತ್ತಿದೆ. ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ” ಎಂದು ಪ್ರಶ್ನಿಸಿದ್ದಾರೆ.
ಅಮುಲ್ ಕಂಪನಿಯ ಜಾಹೀರಾತೊಂದು ಹಾಲು ಉತ್ಪಾದಕರಲ್ಲಿ ಆತಂಕ ಹುಟ್ಟಿಸಿದೆ. ಸಾಲದೆಂಬಂತೆ ರಾಜ್ಯದಲ್ಲಿ ದಿಢೀರನೇ ನಂದಿನಿ ಕಂಪನಿಯ ಉತ್ಪನ್ನಗಳ ಅಭಾವ ಕಾಡಲಾರಂಭಿಸಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ, ಅಮುಲ್ – ನಂದಿನಿ ವಿಲೀನದ ಬಗ್ಗೆ ಈ ಹಿಂದೆ ಮಾತನಾಡಿದ್ದರು.
ನಂದಿನಿ ಕಂಪನಿ ರಾಜ್ಯದ ಅನೇಕರ ನಾಡಿಮೀಡಿತ ಅದನ್ನು ನುಂಗಲು ಅಮುಲ್ ಕಂಪನಿ ತನ್ನ ಬೇರನ್ನು ರಾಜ್ಯದಲ್ಲಿ ಬಿಡುತ್ತಿದೆ ಎನ್ನುವುದು ಅನೇಕರ ಅಭಿಪ್ರಾಯ.
ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ದೊಡ್ಡ ಬ್ಯಾಂಕ್ ಗಳೊಂದಿಗೆ ವಿಲೀನ ಮಾಡಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ ಎಂದು ಸಿದ್ದರಾಮಯ್ಯ ಹೇಳಿದ್ದರು.