ಕಷ್ಟಗಳನ್ನೆ ಮೆಟ್ಟಿಲಾಗಿ ಮಾಡಿಕೊಂಡವರು ತಮ್ಮ ಕಾಲ ಮೇಲೆ ತಾವು ನಿಲ್ಲುತ್ತಾರೆ ಎಂಬುದಕ್ಕೆ ಲಿಂಗತ್ವ ಅಲ್ಪಸಂಖ್ಯಾತ ಸಮಾಜದ ಅರುಂಧತಿ ಜ್ವಲಂತ ಉದಾಹರಣೆ. ಲಿಂಗತ್ವ ಅಲ್ಪಸಂಖ್ಯಾತರನ್ನು ಅನುಮಾನದಿಂದ ನೋಡುವ ನಮ್ಮ ಸಮಾಜಕ್ಕೆ ಅರುಂಧತಿಯ ಬದುಕು ನಿಜಕ್ಕೂ ಮಾದರಿ. ಮಾನವೀಯತೆ ಹಾಗೂ ಸ್ವಂತ ಸಾಮರ್ಥ್ಯದ ಮೇಲೆ ಬದುಕು ಕಟ್ಟಿಕೊಂಡು ಇತರ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಿಗೂ ಇವರು ಮುಖ್ಯವಾಹಿನಿಗೆ ಬರಲು ನೆರವಾಗುತ್ತಿದ್ದರು.
ಸಾಮಾಜಿಕ ಕಾರ್ಯಕರ್ತರಾಗಿರುವ ಅರುಂಧತಿ ಮೂಲತಃ ಮಂಡ್ಯ ಜಿಲ್ಲೆಯವರು. ಅವರು ಜೀವನೋಪಾಯಕ್ಕಾಗಿ ಭಿಕ್ಷಾಟನೆ ಅಥವಾ ಲೈಂಗಿಕ ಕೆಲಸಗಳನ್ನು ಅವಲಂಬಿಸಿರುವ ಅವರ ಲಿಂಗತ್ವ ಅಲ್ಪಸಂಖ್ಯಾತರ ಸಹೋದರಿಯರಿಗಿಂತ ಭಿನ್ನವಾಗಿ ಸವಾಲಿನ ಜೀವನೋಪಾಯದ ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಹೊಸ ದಾರಿ ಕಂಡುಕೊಳ್ಳಲು ನಿರ್ಧರಿಸಿದರು.
ತಮ್ಮ ಹೊಸ ಬದುಕನ್ನು ನನಸಾಗಿಸಲು ಮಂಡ್ಯದಿಂದ 250 ಕಿ.ಮೀ ದೂರದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಕೊಳಹಾಲ್ ಗ್ರಾಮಕ್ಕೆ ಆಗಮಿಸಿ ಒಂದು ತುಂಡು ಭೂಮಿಯನ್ನು ಗುತ್ತಿಗೆ ಪಡೆದು ಮನೆಯ ಜೊತೆಗೆ ಶೆಡ್ಅನ್ನು ನಿರ್ಮಿಸಿಕೊಂಡು ಮೇಕೆ ಸಾಕಾಣಿಕೆ ಆರಂಭಿಸಿದರು.
ಬದ್ಧತೆ ಹಾಗೂ ಸಾಕಷ್ಟು ಕಠಿಣ ಶ್ರಮದಿಂದ ಅರುಂಧತಿ ಅವರು ತಮ್ಮ ಶೆಡ್ನಲ್ಲಿ ಕೆಲವೇ ಮೇಕೆಗಳಿಂದ 43 ಮೇಕೆಗಳು ಮತ್ತು 5 ಕುರಿಗಳಿಗೆ ಹೆಚ್ಚಿಸಿದರು. ಕುರಿ ಸಾಕಣಿಕೆ ಉದ್ಯಮದಿಂದ ಬಂದ ಆದಾಯದಲ್ಲಿ ತಮ್ಮ ಜೀವನ ನಿರ್ವಹಣೆಯ ಜೊತೆ ತಮ್ಮದೇ ಸಮುದಾಯದ ಇತರ ಲಿಂಗತ್ವ ಅಲ್ಪಸಂಖ್ಯಾತರ ಬದುಕಿಗೂ ಸಹಾಯ ಹಸ್ತ ಚಾಚುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಮಳೆ: ಜನರಿಗೆ ನರಕದಿಂದ ಮುಕ್ತಿ ಸಿಗುವುದೆಂದು?
ಆದರೆ ನಮ್ಮ ನಾಗರಿಕ ಸಮಾಜ ಇಂಥವರು ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಬಿಡುತ್ತಿಲ್ಲ. ಕಳೆದ ತಿಂಗಳ ಅಕ್ಟೋಬರ್ 25 ರಂದು ಅರುಂಧತಿ ಅವರು ಕಾರ್ಯಕ್ರಮವೊಂದಕ್ಕೆ ಚಿಕ್ಕಮಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಅಂದು ರಾತ್ರಿ ಆಕೆಯ ಎಲ್ಲ 43 ಮೇಕೆಗಳು ಮತ್ತು 5 ಕುರಿಗಳನ್ನು ಕಳ್ಳರ ಗುಂಪು ಕದ್ದೊಯ್ದಿದೆ.
ಅರುಂಧತಿಯ ಜೀವನಕ್ಕೆ ಆಧಾರವಾಗಿದ್ದ ಮೇಕೆ ಮತ್ತು ಕುರಿಗಳ ಬೆಲೆ 8 ಲಕ್ಷ ರೂ.ಗಳಿಗೂ ಹೆಚ್ಚು. ಆದರೆ ಕಳ್ಳರ ಕ್ರೂರ ಕೃತ್ಯವು ಮೇಕೆಗಳಿಗಿಂತ ಆಕೆಯ ಬದುಕುವ ಭರವಸೆಯನ್ನು ಕಿತ್ತುಕೊಂಡಿದೆ. ಸ್ವತಂತ್ರ ಜೀವನ ನಡೆಸುವ ಆಕೆಯ ಕನಸಿನ ಬುನಾದಿಯನ್ನು ಅದು ಅಲ್ಲಾಡಿಸಿದೆ.
ತಮ್ಮ ಕುರಿ ಮತ್ತು ಮೇಕೆ ಕಳ್ಳತನವಾದ ನಂತರ ಅರುಂಧತಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಕಳುವಿನ ಬಗ್ಗೆ ದೂರು ನೀಡಿದ್ದಾರೆ. ಜೊತೆಗೆ ತಮ್ಮ ಕುರಿಗಳನ್ನು ಹುಡುಕಲು ಸಾಕಷ್ಟು ಪ್ರಯತ್ನ ಕೂಡ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ತಮ್ಮ ಕುರಿ,ಮೇಕೆ ಕಳುವಾದ 15 ದಿನಗಳ ನಂತರವೂ ಕಳ್ಳರು ಸಿಕ್ಕಿಬಿದ್ದಿಲ್ಲ.
ಈ ಘಟನೆಯಿಂದ ಕಳೆದ 15 ದಿನಗಳಿಂದ ಅರುಧಂತಿ ಅವರು ತುಂಬ ನಿರಾಸೆಗೊಂಡಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಸ್ವಾವಲಂಬಿ ಉದ್ಯಮವನ್ನು ಮರುನಿರ್ಮಾಣ ಮಾಡಲು ಆರ್ಥಿಕ ಬೆಂಬಲದ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ ಸಂಗಮ ಎಂಬ ಸರ್ಕಾರೇತರ ಸಂಸ್ಥೆಯು ಅರುಂಧತಿಯ ಉದ್ಯಮವನ್ನು ಮರುನಿರ್ಮಾಣ ಮಾಡಲು ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ಅಭಿಯಾನದಿಂದ ಸಂಗ್ರಹಿಸಿದ ಎಲ್ಲ ಹಣವನ್ನು https://milaap.org(ಮಿಲಾಪ್) ಎಂಬ ಸಂಸ್ಥೆ ನೇರವಾಗಿ ಅರುಂಧತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಅಲ್ಲದೆ ಈ ಅಭಿಯಾನವು ಆರ್ಥಿಕ ಬೆಂಬಲದ ಬಗ್ಗೆ ಮಾತ್ರವಲ್ಲ, ಸಂಕಷ್ಟದ ಸಮಯದಲ್ಲಿ ನೊಂದವರಿಗೆ ಸಹಾಯ ಮಾಡುವ ಪ್ರಮುಖ ಉದ್ದೇಶವಾಗಿದೆ. ದೊಡ್ಡ ಮೊತ್ತವಾಗಿರುವ ಕಾರಣ ಸರ್ಕಾರೇತರ ಸಂಸ್ಥೆಯ ಜೊತೆ ಸಾರ್ವಜನಿಕರ ನೆರವಿನ ಅಗತ್ಯ ಕೂಡ ಇದೆ. ಸಾರ್ವಜನಿಕರ ನೆರವು ಅರುಂಧತಿಯಂಥ ಹಲವು ಲಿಂಗತ್ವ ಅಲ್ಪಸಂಖ್ಯಾತರನ್ನು ಉದ್ಯಮಿಗಳನ್ನಾಗಿಸಲು ಪ್ರೇರೇಪಿಸಬಹುದು. ಅರುಂಧತಿಗೆ ಆರ್ಥಿಕ ಸಹಾಯ ಮಾಡುವವರು ಮಿಲಾಪ್ ವೆಬ್ಸೈಟ್ನ ಕೆಳಗಿನ ಲಿಂಕ್ಅನ್ನು ಪ್ರವೇಶಿಸಿ ಮಾಹಿತಿ ಪಡೆಯಬಹುದು.