ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ 500ರಿಂದ 1000 ಎಕರೆ ಪ್ರದೇಶದಲ್ಲಿ ನಗರಾಭಿವೃದ್ದಿ ಇಲಾಖೆಯಿಂದಲೇ ಲೇಔಟ್ ಅಭಿವೃದ್ದಿಗೊಳಿಸಿ ಕಡಿಮೆ ದರದಲ್ಲಿ ನಿವೇಶನ ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ಒದಗಿಸಲು ಈಗಾಗಲೇ ಮೊದಲ ಸಭೆ ನಡೆಸಲಾಗಿದೆ. ರಾಯಚೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಪ್ರಾಧಿಕಾರದಿಂದ ಲೇಔಟ್ ಅಭಿವೃದ್ದಿಗೆ ಉದ್ದೇಶಿಸಲಾಗಿದೆ” ಎಂದರು.
ಖಾಸಗಿ ಲೇಔಟ್ಗಳಿಂದ ಗ್ರಾಹಕರಿಗೆ ಆಗುತ್ತಿರುವ ಮೋಸ ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮೂಲ ಸೌಕರ್ಯಗಳಿಲ್ಲದೇ ಲೇಔಟ್ ಅಭಿವೃದ್ದಿ ಪಡಿಸಿ ಮಾರಾಟ ಮಾಡಿದಲ್ಲಿ ಪರವಾನಗಿ ರದ್ದುಗೊಳಿಸಲೂ ಕೂಡ ಸೂಚನೆ ನೀಡಲಾಗಿದೆ. ಸರ್ಕಾರ ನಿಗದಿಪಡಿಸಿರುವ ಮಾನದಂಡ ಉಲ್ಲಂಘನೆ ಕುರಿತು ಜಿಲ್ಲಾವಾರು ಪರಿಶೀಲನೆ ನಡೆಸಲು ಸೂಚಿಸಲಾಗಿದೆ” ಎಂದರು.
“ಹಿಂದಿನ ಸರ್ಕಾರದ ಅವಧಿಯಲ್ಲಿ 98 ಸಾವಿರ ಕೋಟಿ ರೂ ಅನುದಾನದಲ್ಲಿ ರಾಜ್ಯದ ಎಲ್ಲ ನಗರಗಳಿಗೆ ಕುಡಿಯುವ ನೀರಿನ ಯೋಜನೆ ಜಾರಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಲಿದ್ದಾರೆ. ಆರ್ಥಿಕ ಸಂಪನ್ಮೂಲ ಆಧಾರದ ಮೇಲೆ ಯೋಜನೆ ಜಾರಿಯ ಕುರಿತು ನಿರ್ಧರಿಸಬೇಕಿದೆ. ಸಿಎಂ ವಿವೇಚನೆ ನಂತರ ನಿರ್ಧರಿಸಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಮೋದಿ ವಚನ ಭ್ರಷ್ಟರಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
“ನಗರದ ಪ್ರದೇಶಗಳಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಆದ್ಯತೆ ಮೇಲೆ ಯೋಜನೆಗಳ ಜಾರಿಗೆ ಕ್ರಮ ವಹಿಸಲಾಗುತ್ತದೆ” ಎಂದರು.
ಶಾಸಕರ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, “ಶಾಸಕರು ಯಾವುದೇ ಅಸಮಧಾನ ಹೊಂದಿಲ್ಲ. ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪಕ್ಷದ ನಾಯಕರು ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳೇ ಎಲ್ಲ ಸಚಿವರ ಸಭೆಗಳನ್ನು ನಡೆಸಿ ಶಾಸಕರುಗಳ ಬೇಡಿಕೆಗಳ ಪರಿಹಾರಕ್ಕೆ ಮುಂದಾಗಿದ್ದಾರೆ” ಎಂದರು.