ಇಬ್ಬರು ದಲಿತ ಯುವಕರ ಮೇಲೆ ಹಲ್ಲೆಗೈದು, ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿ ದೌರ್ಜನ್ಯವೆಸಗಿರುವ ಅಮಾನವೀಯ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಅ. 30ರಂದು ತಿರುನೆಲ್ವೇಲಿಯ ಬಳಿ ಈ ಘಟನೆ ನಡೆದಿದ್ದು, ಪರಿಶಿಷ್ಟ ಜಾತಿಯ ಮನೋಜ್ ಕುಮಾರ್ ಮತ್ತು ಅವರ ಸ್ನೇಹಿತ ಮಣಿಮೂರ್ತೇಶ್ವರಂ ಮೂಲದ ಮರಿಯಪ್ಪನ್ ಎಂಬ ಇಬ್ಬರು ಯುವಕರ ಮೇಲೆ ಈ ದೌರ್ಜನ್ಯ ಎಸಗಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ತಚ್ಚನಲ್ಲೂರು ಪೊಲೀಸರು, ಪ್ರಕರಣದ ಸಂಬಂಧ ಆರು ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತರನ್ನು ಪಾಳಯಂಕೊಟ್ಟೈ ಸಮೀಪದ ತಿರುಮಲೈಕೊಝುಂತುಪುರಂ ನಿವಾಸಿಗಳಾದ ಪೊನ್ನುಮಣಿ (25), ನಲ್ಲಮುತ್ತು (21), ಆಯಿರಾಮ್ (19), ರಾಮರ್ (22), ಶಿವ (22), ಮತ್ತು ಲಕ್ಷ್ಮಣನ್ (22) ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಕಳಮಶ್ಶೇರಿ ಸ್ಫೋಟ ಪ್ರಕರಣ | ‘ನಾನೇ ವಾದಿಸುತ್ತೇನೆ, ವಕೀಲರು ಬೇಡ’ ಎಂದ ಆರೋಪಿ ಡೊಮಿನಿಕ್ ಮಾರ್ಟಿನ್
ದಲಿತ ಯುವಕರಾದ ಮನೋಜ್ ಕುಮಾರ್ ಮತ್ತು ಮರಿಯಪ್ಪನ್ ನದಿಯಲ್ಲಿ ಸ್ನಾನ ಮಾಡಿ ಹಿಂದಿರುಗುತ್ತಿದ್ದಾಗ, ನದಿಯ ಬಳಿ ಮದ್ಯ ಸೇವಿಸುತ್ತಿದ್ದ ಆರೋಪಿಗಳು ಇಬ್ಬರನ್ನು ತಡೆದು ನಿಲ್ಲಿಸಿದ್ದಾರೆ. ಆ ಬಳಿಕ ನಿಮ್ಮ ಜಾತಿ ಯಾವುದು ಎಂದು ಪ್ರಶ್ನಿಸಿದಾಗ, ತಾವು ದಲಿತರ ಕುಗ್ರಾಮದಿಂದ ಬಂದವರು ಎಂದು ಬಹಿರಂಗಪಡಿಸಿದ್ದಾರೆ. ಆ ಬಳಿಕ ಗುಂಪು ಹಲ್ಲೆ ನಡೆಸಿ, ದೌರ್ಜನ್ಯವೆಸಗಿದೆ ಎಂದು ವರದಿಯಾಗಿದೆ.
‘ಗುಂಪು ನಮಗೆ ಇಬ್ಬರಿಗೂ ಹಲ್ಲೆ ನಡೆಸಿದ್ದಲ್ಲದೇ, ವಿವಸ್ತ್ರಗೊಳಿಸಿದ್ದಾರೆ. ಆ ಬಳಿಕ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗಳು ತಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
”ಅವರು ನಮ್ಮನ್ನು ಸ್ಥಳದಿಂದ ಓಡಿಸುವ ಮೊದಲು ನಮ್ಮ ಬಳಿಯಲ್ಲಿದ್ದ ಐದು ಸಾವಿರ ನಗದು, ಎರಡು ಮೊಬೈಲ್ ಫೋನ್ ಮತ್ತು ಎಟಿಎಂ ಕಾರ್ಡ್ಗಳನ್ನು ಕಸಿದುಕೊಂಡರು. ಹತ್ತಿರದ ಸಂಬಂಧಿಕರ ಮನೆಗೆ ಹೋಗಿ, ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದೆವು. ಅವರು ನಮ್ಮನ್ನು ತಿರುನಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ” ಎಂದು ಸಂತ್ರಸ್ತರು ಪೊಲೀಸರಿಗೆ ತಿಳಿಸಿದ್ದಾರೆ.
ಘಟನೆ ಸಂಬಂಧ ಅಟ್ರಾಸಿಟಿ ಪ್ರಕರಣ ದಾಖಲಿಸಿ, ಆರು ಮಂದಿಯನ್ನು ಬಂಧಿಸಿದ್ದೇವೆ. ಅಮಾನುಷವಾಗಿ ಹಲ್ಲೆಗೊಳಗಾಗಿರುವ ಮನೋಜ್ ಮತ್ತು ಮರಿಯಪ್ಪನ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಿರುನಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.