”ಆತ 14 ಅಥವಾ 15 ವರ್ಷದವನಿರುವಾಗ ಆತನನ್ನು ಇಂಗ್ಲೆಂಡ್ಗೆ ಕರೆದುಕೊಂಡು ಹೋಗಿದ್ದೆ. ನಮಗೆಲ್ಲ ತಿಳಿದಿರುವಂತೆ ಈತ ಸಣ್ಣ ಕುಟುಂಬದ ಹಿನ್ನೆಲೆಯಿಂದ ಬಂದವನು. ಇಂಗ್ಲೆಂಡ್ನಲ್ಲಿ ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮವಾಗಿ ಸ್ಕೋರ್ ಮಾಡುತ್ತಿದ್ದ. ಅವನಲ್ಲಿರುವ ಕ್ರಿಕೆಟ್ ಉತ್ಸಾಹವನ್ನು ಆಗಲೇ ಗಮನಿಸಿದೆವು. ನಂತರ ಈ ಪ್ರತಿಭೆ ಅಂಡರ್ 19 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿ ಹಲವು ರನ್ ಬಾರಿಸಿದ. ಈತನ ಆಟದ ಶೈಲಿ ಹಾಗೂ ಅತ್ಯುತ್ತಮ ಆಟದಿಂದಿಂದಾಗಿಯೇ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಈ ಆಟಗಾರನನ್ನು ಆಯ್ಕೆ ಮಾಡಿಕೊಂಡಿತು. ಎಲ್ಲ ಮಾದರಿಯ ಕ್ರಿಕೆಟ್ನಲ್ಲಿಯೂ ಉತ್ತಮವಾಗಿ ಆಟವಾಡುತ್ತಿದ್ದಾನೆ. ನಾನು 25 ವರ್ಷ ಆಟವಾಡಿರುವ ಮುಂಬೈನ ಪ್ರತಿಷ್ಠಿತ ದಾದರ್ ಯೂನಿಯನ್ ಕ್ರಿಕೆಟ್ ಕ್ಲಬ್ನ ನಾಯಕನನ್ನಾಗಿ ಈತನನ್ನು ಆಯ್ಕೆ ಮಾಡಿರುವುದಕ್ಕೆ ನನಗೆ ತುಂಬ ಸಂತೋಷವಾಗಿದೆ. ಕ್ರಿಕೆಟ್ನಲ್ಲಿರುವ ಈತನ ಬದ್ಧತೆ, ಸ್ಥಿರ ಪ್ರದರ್ಶನದಿಂದಾಗಿಯೆ ಇವನೀಗ ಭಾರತ ತಂಡದ ಸ್ಟಾರ್ ಆಟಗಾರನಾಗಿ ಹೊರಹೊಮ್ಮುತ್ತಿದ್ದಾನೆ.”
1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸ್ಟಾರ್ ಆಟಗಾರ ದಿಲೀಪ್ ವೆಂಗ್ ಸರ್ಕಾರ್ ಈ ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಟೀಂ ಇಂಡಿಯಾದ ಅಮೋಘ ಪ್ರದರ್ಶನ ನೀಡುತ್ತಿರುವ ಉತ್ತರ ಪ್ರದೇಶದ 22 ವರ್ಷದ ಯಶಸ್ವಿ ಜೈಸ್ವಾಲ್ ಬಗ್ಗೆ.
ಫೆ. 3ರಂದು ವಿಶಾಖಪಟ್ಟಣದಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನಿಂಗ್ಸ್ನ ಎರಡನೇ ದಿನದಾಟದಲ್ಲಿ 209 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಯಶಸ್ವಿ ಜೈಸ್ವಾಲ್. ದ್ವಿಶತಕದ ಅಮೋಘ ಆಟ ಕೋಟ್ಯಂತರ ಅಭಿಮಾನಿಗಳಲ್ಲದೆ ದಿಗ್ಗಜ ಕ್ರಿಕೆಟ್ ಆಟಗಾರರಿಂದ ಶ್ಲಾಘನೆಗೆ ಒಳಗಾಗಿತ್ತು. ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಮೂರನೇ ಯುವ ಆಟಗಾರನೆಂಬ ಶ್ರೇಯಕ್ಕೆ ಪಾತ್ರವಾಗಿತ್ತು.
2001 ಡಿಸೆಂಬರ್ 28ರಂದು ಎಸ್ ಆರ್ ನಗರ ಜಿಲ್ಲೆಯ ಸೂರ್ವವಾನ್ ಎಂಬ ಪಟ್ಟಣದಲ್ಲಿ ಜನಿಸಿದ ಜೈಸ್ವಾಲ್ ಶ್ರೀಮಂತ ಹಿನ್ನಲೆಯನ್ನು ಹೊಂದಿರಲಿಲ್ಲ. ತಂದೆ ಭೂಪೇಂದ್ರ ಜೈಸ್ವಾಲ್ ಜೀವನೋಪಾಯಕ್ಕಾಗಿ ಸಣ್ಣ ಹಾರ್ಡ್ವೇರ್ ಅಂಗಡಿ ಇಟ್ಟುಕೊಂಡಿದ್ದರು. ತಾಯಿ ಕಾಂಚನ್ ಗೃಹಿಣಿಯಾಗಿದ್ದರು.
ಕ್ರಿಕೆಟ್ಗಾಗಿ ಜೈಸ್ವಾಲ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ
ಕ್ರಿಕೆಟ್ನಲ್ಲಿದ್ದ ಆಸಕ್ತಿಯಿಂದಾಗಿ ತರಬೇತಿಯನ್ನು ಪಡೆದುಕೊಳ್ಳಲು 10ನೇ ವಯಸ್ಸಿಗೆ ಯಶಸ್ವಿ ಜೈಸ್ವಾಲ್ ಮುಂಬೈಗೆ ತೆರಳಿದರು. ಕ್ರಿಕೆಟ್ನಲ್ಲಿ ಏನಾದರೂ ಸಾಧಿಸಬೇಕೆನ್ನುವ ಛಲದಿಂದಾಗಿ ಜೀವನೋಪಾಯಕ್ಕಾಗಿ ಹಲವು ಕಡೆ ಕೆಲಸ ಮಾಡಿದ್ದಾರೆ. ಎರಡು, ಮೂರು ವರ್ಷ ಜೋಪಡಿಯಲ್ಲಿ ವಾಸಿಸಿದ್ದಾರೆ. ನಂತರ ಸಾಂತಾಕ್ರೂಜ್ ಕ್ರಿಕೆಟ್ ಅಕಾಡೆಮಿಗೆ ಸೇರಿ ತರಬೇತಿ ಪಡೆದಿದ್ದಾರೆ.
ಇದನ್ನು ಓದಿದ್ದೀರಾ?: ಮಗ ಕ್ರಿಕೆಟಿಗನಾಗದೇ ಇದ್ದರೆ ಚೆನ್ನಾಗಿರುತ್ತಿತ್ತು: ಬೇಸರ ಹೊರಹಾಕಿದ ರವೀಂದ್ರ ಜಡೇಜಾ ತಂದೆ
ಅಲ್ಲಿ ಜೈಸ್ವಾಲ್ ಸಾಧನೆ ಗುರುತಿಸಿದ್ದು ಸಾಂತಾಕ್ರೂಜ್ ಕ್ರಿಕೆಟ್ ಅಕಾಡಮಿಯ ಮುಖ್ಯಸ್ಥ ಹಾಗೂ ಮುಂಬೈ ಕ್ರಿಕೆಟ್ ಕ್ಲಬ್ನ ಮುಖ್ಯ ಕೋಚ್ ಆಗಿರುವ ಜ್ವಾಲಾ ಸಿಂಗ್. ಎಲ್ಲ ಕ್ರಿಕೆಟ್ ಪ್ರತಿಭೆಗಳಂತೆ ಯಶಸ್ವಿ ಜೈಸ್ವಾಲ್ ಅವರ ಶ್ರಮ ಹಾಗೂ ಸಾಧನೆಯ ಹಿಂದೆ ಜ್ವಾಲಾ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಕ್ಲಬ್ ಕ್ರಿಕೆಟ್ನಲ್ಲಿ ಉತ್ತಮ ಆಟವಾಡಿದ ಕಾರಣ 2018 ರಲ್ಲಿ ಮುಂಬೈ ರಣಜಿ ತಂಡಕ್ಕೆ ಆಯ್ಕೆಯಾಗುತ್ತಾರೆ.
ಮುಂಬೈ ರಣಜಿ ತಂಡದಲ್ಲಿ ಕೇವಲ 21 ಪಂದ್ಯಗಳನ್ನು ಆಡಿದರೂ 73 ರನ್ ಸರಾಸರಿಯಲ್ಲಿ 2,482 ರನ್ ಗಳಿಸಿದರು. 11 ಶತಕ ಹಾಗೂ 4 ಅರ್ಧ ಶತಕದೊಂದಿಗೆ ಒಟ್ಟಾರೆ ರನ್ ಖಾತೆಯಲ್ಲಿ 265 ಅತ್ಯಧಿಕ ಸ್ಕೋರ್ ಆಗಿತ್ತು. ಯಶಸ್ವಿ ಜೈಸ್ವಾಲ್ನ ಯಶಸ್ವಿ ಪ್ರದರ್ಶನದಿಂದಾಗಿ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಆಡಿರುವ ಕೇವಲ 6 ಟೆಸ್ಟ್ಗಳಲ್ಲಿ 57.90 ಸರಾಸರಿಯಲ್ಲಿ ಒಂದು ದ್ವಿಶತಕ, ಒಂದು ಶತಕ ಹಾಗೂ ಎರಡು ಅರ್ಧ ಶತಕಗಳೊಂದಿಗೆ 637 ರನ್ ಸ್ಕೋರ್ ಮಾಡಿದ್ದಾರೆ. ಟಿ20 ಯಲ್ಲೂ ಕೂಡ ಅವಕಾಶ ಸಿಕ್ಕಾಗೆಲ್ಲ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರ ಅಮೋಘ ಆಟಕ್ಕೆ 2023ರ ಆವೃತ್ತಿಯ ಐಪಿಎಲ್ ಆಟವೇ ಸಾಕ್ಷಿ. ರಾಜಸ್ಥಾನ ರಾಯಲ್ಸ್ ಪರ 163.61 ಬ್ಯಾಟಿಂಗ್ ಸ್ಟ್ರೇಕ್ ರೇಟ್ನಲ್ಲಿ 48.08 ಸರಾಸರಿಯಂತೆ ಈ ಎಡಗೈ ಆಟಗಾರ 625 ರನ್ ಬಾರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಚಿನ್ ದಾಸ್: ತೆಂಡೂಲ್ಕರ್, ವಿರಾಟ್ ಸ್ಥಾನ ತುಂಬುವ ಹಾದಿಯಲ್ಲಿ ಉದಯೋನ್ಮುಖ ಪ್ರತಿಭೆ!
”ಸಣ್ಣ ಹುಡುಗನಾಗಿದ್ದಾಗ ನಾನು ಆತನಿಗೆ ತರಬೇತಿ ನೀಡುವ ಸಮಯದಲ್ಲಿ ಕ್ರಿಕೆಟ್ ಯಾವಾಗಲು ಎಸೆಯುವ ಚೆಂಡಿಗೆ ಬ್ಯಾಟ್ ಬೀಸಿ ಚುರುಕಾಗಿ ರನ್ ಗಳಿಸುವುದಿಲ್ಲ ಎಂದು ಹೇಳುತ್ತಿದ್ದೆ. ಕ್ರಿಕೆಟ್ ಬೌಲರ್ನೊಂದಿಗೆ ಯಾವ ರೀತಿ ಆಟವಾಡುವುದು ಎಂಬುದಾಗಿದೆ. ನೀವು ಉತ್ತಮ ಫಾರ್ಮ್ನಲ್ಲಿರುವಾಗ ಎದುರಾಳಿ ತಂಡದ ಬಲಾಢ್ಯ ಬೌಲರ್ ವಿರುದ್ಧ ಸರಾಗವಾಗಿ ಆಡಿ ವಿಕೆಟ್ ಒಪ್ಪಿಸದೆ ಇರುವಾಗ ನಿಮ್ಮ ಸಾಮರ್ಥ್ಯ ತಿಳಿಯುತ್ತದೆ ಎಂದು ಆತನಿಗೆ ಮನದಟ್ಟು ಮಾಡುತ್ತಿದ್ದೆ. ನನ್ನ ಅರಿವಿಗೆ ಬಂದಂತೆ ಜೈಸ್ವಾಲ್ ಕ್ರಿಕೆಟ್ನ ಹಲವು ಪಟ್ಟುಗಳನ್ನು ಕಲಿತ್ತಿದ್ದಾನೆ. ಅದನ್ನು ತನ್ನ ಆಟದಲ್ಲಿ ತೋರಿಸುತ್ತಿದ್ದಾನೆ” ಎಂದು ಕೋಚ್ ಜ್ವಾಲಾ ಸಿಂಗ್ ಹೇಳುತ್ತಾರೆ.
”ಸಣ್ಣವನಿದ್ದಾಗ ನನ್ನ ಬಳಿ ತರಬೇತಿಗೆ ಬಂದಾಗ ಆತನ ಆಟವನ್ನು ಗಮನಿಸುತ್ತಿದ್ದೆ. ಮುಖದಲ್ಲೇ ಆತನ ಕ್ರಿಕೆಟ್ ಅಪ್ಪಟ ಆಸಕ್ತಿ ಕಾಣಿಸುತ್ತಿತ್ತು. ಸಂಕಷ್ಟದ ಸಮಯದಲ್ಲಿ ಸವಾಲುಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದೆ. ಇದು ಕೇವಲ ಪ್ರತಿಭೆ ಮಾತ್ರವಲ್ಲ, ಕಲಿಕೆ, ಹೊಂದಿಕೊಳ್ಳುವುದು, ಕೌಶಲ್ಯ ಎಲ್ಲವು ಒಳಗೊಂಡಿವೆ. ಇವೆಲ್ಲವನ್ನು ತನ್ನ ಆಟದಲ್ಲಿ ಪ್ರದರ್ಶಿಸುತ್ತಿದ್ದಾನೆ. ಕ್ಲಬ್ ಕ್ರಿಕೆಟ್ನಲ್ಲಿ ಆಡುವ ಸಂದರ್ಭದಲ್ಲಿಯೇ ತಾನು ಒಂದಲ್ಲ ಒಂದು ದಿನ ಭಾರತ ತಂಡಕ್ಕೆ ಆಯ್ಕೆಯಾಗುತ್ತೇನೆ ಎಂದು ಹೇಳಿದ್ದ. ಆತನ ಆರಂಭಿಕ ಗುರಿ ನೆರವೇರಿದೆ” ಎಂದು ಕೋಚ್ ಜ್ವಾಲಾ ಸಿಂಗ್ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತಾರೆ.

ಸ್ಟಾರ್ ಆಟಗಾರನಾಗುವ ಭರವಸೆಯ ಆಟಗಾರ
ಟೀಂ ಇಂಡಿಯಾ ಮೊದಲ ಟೆಸ್ಟ್ ಸೋತು ಎರಡನೇ ಟೆಸ್ಟ್ ಆಡಲು ಕಣಕ್ಕಿಳಿದಾಗ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅನುಪಸ್ಥಿತಿ ತಂಡಕ್ಕಿತ್ತು. ಬ್ಯಾಟಿಂಗ್ ಹೆಚ್ಚಾಗಿ ಅವಲಂಬಿಸಿದ್ದು ಯುವ ಆಟಗಾರರಾದ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ಅವರನ್ನು. ಇಬ್ಬರು ತಮ್ಮ ಬ್ಯಾಟಿಂಗ್ ಮೂಲಕ ಭಾರತಕ್ಕೆ ಗೆಲುವಿನ ಉಡುಗೊರೆ ನೀಡಿದರು. 19 ಬೌಂಡರಿ ಹಾಗೂ 7 ಸಿಕ್ಸರ್ ಮೂಲಕ ದ್ವಿಶಕ ಬಾರಿಸಿದ ಯಶಸ್ವಿ ಜೈಸ್ವಾಲ್ ಆಟ ಮಾತ್ರ ಅಚ್ಚಳಿಯದೆ ಉಳಿಯಿತು.
ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಗೆಲುವಿಗೆ ಜೈಸ್ವಾಲ್ ಅವರ ಆಟ ಪ್ರಮುಖ ಕೊಡುಗೆ ನೀಡಿತು ಎಂದು ಭಾರತ ತಂಡದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಹೇಳಿದರೆ, ಮತ್ತೊಬ್ಬ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಪ್ರಜ್ಞಾನ್ ಓಜಾ ಭಾರತದ ಮತ್ತೊಬ್ಬ ವೀರೇಂದ್ರ ಸೆಹ್ವಾಗ್ ಆಗುವ ಎಲ್ಲ ಲಕ್ಷಣಗಳು ಜೈಸ್ವಾಲ್ ಅವರಲ್ಲಿದೆ ಎಂದು ಭವಿಷ್ಯ ನುಡಿಯುತ್ತಾರೆ.