- ಆಸಕ್ತರು ಜೂನ್ 8ರೊಳಗೆ ಅವರ ಹೆಸರು ನೋಂದಾಯಿಸಿಕೊಳ್ಳಬೇಕು
- ಜೂನ್ 12 ರಿಂದ 18ವರೆಗೆ ಜಯದೇವ ಆಸ್ಪತ್ರೆಯಲ್ಲಿ ಕಾರ್ಯಾಗಾರ
ಬಡತನ ರೇಖೆಗಿಂತ ಕೆಳಗಿರುವ ಹಾಗೂ ಹಣಕಾಸಿನ ಮುಗ್ಗಟ್ಟಿನಿಂದ ಚಿಕಿತ್ಸೆ ಮಾಡಿಸಿಕೊಳ್ಳಲು ನಿಸ್ಸಾಹಯಕವಾಗಿರುವ 200 ಮಂದಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸ್ಟಂಟ್ ಅಳವಡಿಸುವ ಆಂಜಿಯೋಪ್ಲಾಸ್ಟಿ ಮಾಡಲಾಗುವುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ತಿಳಿಸಿದೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಅಮೆರಿಕದ ಮೆಡ್ಟ್ರಾನಿಕ್ಸ್, ವಿಸ್ಕಿನ್ಸನ್ ಸಂಸ್ಥೆ ಹಾಗೂ ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಶನ್ ಸಹಯೋಗದೊಂದಿಗೆ 200 ರೋಗಿಗಳಿಗೆ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಮಾಡಲಾಗುವುದು ಎಂದು ಹೇಳಿದೆ.
ಈ ಕಾರ್ಯಗಾರವೂ ಜೂನ್ 12 ರಿಂದ 18ವರೆಗೆ ಜಯದೇವ ಆಸ್ಪತ್ರೆಯಲ್ಲಿ ನಡೆಯಲಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಜೂನ್ 12 ರಿಂದ 14ರವರೆಗೆ, ಮೈಸೂರು ಶಾಖೆಯ ಜಯದೇವ ಆಸ್ಪತ್ರೆಯಲ್ಲಿ ಜೂನ್ 15 ರಿಂದ 16 ರವರೆಗೆ, ಕಲಬುರಗಿ ಶಾಖೆಯ ಜಯದೇವ ಆಸ್ಪತ್ರೆಯಲ್ಲಿ ಜೂನ್ 17 ರಿಂದ 18ರವರೆಗೆ ಕಾರ್ಯಾಗಾರ ನಡೆಯಲಿದೆ.
“ಬಡ ರೋಗಿಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಹಿರಿಯರ ನಾಗರಿಕರಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಪ್ರತಿ ರೋಗಿಗೂ ಉನ್ನತ ಮಟ್ಟದ ಮೆಡಿಕೇಟೆಡ್ ಸ್ಟಂಟ್ಗಳನ್ನು ಅಳವಡಿಸಲಾಗುವುದು. ಈಗಾಗಲೇ ಆ್ಯಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟ ರೋಗಿಗಳು ಈ ಸೌಲಭ್ಯ ಪಡೆಯಬಹುದು. ರೋಗಿಗಳು ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಹೊಂದಿರಬೇಕು” ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಜೂನ್ 8ರೊಳಗೆ ಅವರ ಹೆಸರು ನೋಂದಾಯಿಸಿಕೊಳ್ಳಬೇಕು. ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಸಮಯಾವಕಾಶ ಇರಲಿದೆ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ₹2,000 ನೋಟು ವಾಪಸ್; ಹವಾಲಾ ದಂಧೆ ಹೆಚ್ಚುವ ಬಗ್ಗೆ ಪೊಲೀಸರ ಶಂಕೆ
ಹೆಸರು ದಾಖಲಾತಿಗಾಗಿ ಇಲ್ಲಿ ಸಂಪರ್ಕಿಸಿ
ನಿರ್ದೇಶಕರ ಕಚೇರಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್ ಬೆಂಗಳೂರು.
ಬೆಂಗಳೂರು ಶಾಖೆ: ಮೊ. 9480827888, 080-26944874
ಮೈಸೂರು ಶಾಖೆ: 8660105492, 0821-2263255
ಕಲಬುರಗಿ ಶಾಖೆ: 9482114611, 08472-230511