ತನ್ನನ್ನು ದೂರಮಾಡುತ್ತಿದ್ದ ಪ್ರಿಯಕರನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ 38 ವರ್ಷದ ಮಹಿಳೆಯನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಹಿಳೆಯನ್ನು ಜುಂಟಿ ದಾಸ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಜೋಗೇಶ್ ಪೆಗು (35) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಅಸ್ಸಾಂ ಮೂಲದವರು ಎಂದು ತಿಳಿದುಬಂದಿದೆ.
ಜುಂಟಿ ಎಂಬ ಮಹಿಳೆ ತನ್ನ ಪತಿಯನ್ನು ತೊರೆದು 17 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದಳು. ಡೇ ಕೇರ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಎರಡು ವರ್ಷಗಳ ಹಿಂದೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜೋಗೇಶ್ ಎಂಬಾತನ ಸಂಪರ್ಕಕ್ಕೆ ಜುಂಟಿ ಬಂದಿದ್ದು, ಅವರಿಬ್ಬರ ನಡುವೆ ಸಂಬಂಧವಿತ್ತು. ಆದರೂ, ಜೋಗೇಶ್ ಜುಂಟಿಯನ್ನು ದೂರ ಮಾಡುತ್ತಿದ್ದರು. ಜುಂಟಿಯ ಕರೆಗಳಿಗೆ ಉತ್ತರಿಸುತ್ತಿರಲಿಲ್ಲ ಎಂದು ವರದಿಯಾಗಿದೆ. ಜೋಗೇಶ್ ಜುಂಟಿಯಿಂದ ಸ್ವಲ್ಪ ಹಣವನ್ನೂ ಪಡೆದಿದ್ದ ಎನ್ನಲಾಗಿದೆ.
“ಜುಲೈ 21 ರಂದು ಜುಂಟಿ ಈಜಿಪುರದಲ್ಲಿರುವ ಜೋಗೇಶ್ ಅವರ ಮನೆಗೆ ತೆರಳಿದ್ದಳು. ಈ ವೇಳೆ, ಇಬ್ಬರೂ ಜಗಳವಾಡಿದ್ದರು. ನಂತರ ಅವಳು ಜೋಗೇಶ್ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಳು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜೋಗೇಶ್ನನ್ನು ಆತನ ಸ್ನೇಹಿತ ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೋಗೇಶ್ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯಿಂದ ಸಾಲವಾಗಿ ಪಡೆದಿದ್ದ ಹಣವನ್ನು ಹಿಂದಿರುಗಿಸದ ಕಾರಣ ಆಕೆಯನ್ನು ದೂರ ಮಾಡುತ್ತಿದ್ದನು” ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಫ್ಲೋರ್ ಕ್ಲೀನರ್ ಕುಡಿದು ಅನ್ನನಾಳ ಕಳೆದುಕೊಂಡಿದ್ದ 6 ವರ್ಷದ ಮಗು; ಯಶಸ್ವಿ ಮರುನಿರ್ಮಾಣ
ಸದ್ಯ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.