ನಾನಾ ಬೇಡಿಕೆಗಳ ಈಡೇರಿಕೆಗಾಗಿ ಖಾಸಗಿ ಸಾರಿಗೆ ಒಕ್ಕೂಟ ಸೆ.11 ರಂದು ಬೆಂಗಳೂರು ಬಂದ್ಗೆ ಕರೆ ನೀಡಿದೆ. ಈ ಹಿನ್ನೆಲೆ, ಭಾನುವಾರ ಮಧ್ಯರಾತ್ರಿಯಿಂದಲೇ ಹಲವು ಖಾಸಗಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ರಸ್ತೆಗಿಳಿದ ಕೆಲವು ಖಾಸಗಿ ವಾಹನಗಳ ಚಾಲಕರ ಮೇಲೆ ಪ್ರತಿಭಟನಾನಿರತರು ಹಲ್ಲೆ ಮಾಡುತ್ತಿದ್ದಾರೆ. ಕೆಲವೆಡೆ ಟ್ಯಾಕ್ಸಿ ಹಾಗೂ ಚಾಲಕರ ಮೇಲೆ ಮೊಟ್ಟೆ ಎಸೆಯಲಾಗುತ್ತಿದೆ. ಕೆಂಪೇಗೌಡ ನಿಲ್ದಾಣಕ್ಕೆ ಪ್ರಯಾಣಿಕರೊಬ್ಬರನ್ನು ಸಾಗಿಸುತ್ತಿದ್ದ ಟ್ಯಾಕ್ಸಿಯೊಂದಕ್ಕೆ ಪ್ರತಿಭಟನಾನಿರತರು ಕಲ್ಲೆಸೆದಿದ್ದಾರೆ.
ಭಾನುವಾರ ರಾತ್ರಿಯಿಂದಲೇ ಬಂದ್ ಇದ್ದರೂ ರಸ್ತೆಗೆ ಖಾಸಗಿ ವಾಹನಗಳನ್ನು ತಂದ ಚಾಲಕರಿಗೆ ಹಾರ ಹಾಕಿ ಸನ್ಮಾನ ಮಾಡಲಾಗುತ್ತಿದೆ. ಇನ್ನು ಕೆಲವೆಡೆ ಪ್ರತಿಭಟನಾನಿರತರು ಚಾಲಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ.
ಬೆಂಗಳೂರು ಬಂದ್ ಹಿನ್ನೆಲೆ, ಖಾಸಗಿ ವಾಹನಗಳಾದ ಆಟೋ, ಟ್ಯಾಕ್ಸಿ ಸೇರಿದಂತೆ ಇನ್ನಿತರೆ ವಾಹನಗಳು ಓಡಾಟ ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿವೆ. ಕೆಲವು ಆಟೋ ಹಾಗೂ ರ್ಯಾಪಿಡೋ ಬೈಕ್ಗಳು ಪ್ರಯಾಣಿಕರಿಗೆ ಎಂದಿನಂತೆ ಸೇವೆ ನೀಡುತ್ತಿವೆ. ಈ ನಡುವೆ ಬೈಕ್ ಚಾಲಕನನ್ನು ತರಾಟೆಗೆ ತೆಗೆದುಕ್ಕೊಳ್ಳುತ್ತಿರುವ ಪ್ರತಿಭಟನಾನಿರತರು ಹೆಲ್ಮೆಟ್ ತೆಗಿಸಿ ದೌರ್ಜನ್ಯ ನಡೆಸುತ್ತಿರುವ ಘಟನೆ ರೆಸಿಡೆನ್ಸಿ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿಯೂ ಖಾಸಗಿ ವಾಹನ ಚಾಲಕರ ಪ್ರತಿಭಟನೆ ನಡೆಯುತ್ತಿದೆ. ಈ ರ್ಯಾಲಿ ಕೇಂದ್ರ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೂ ನಡೆಯಲಿದೆ. ಹಲವು ಸಂಘಟನೆಗಳು ಫ್ರೀಡಂ ಪಾರ್ಕ್ ತಲುಪಿದ್ದು, ಪ್ರತಿಭಟನೆ ನಡೆಸುತ್ತಿವೆ.
ಖಾಸಗಿ ಸಾರಿಗೆ ಒಕ್ಕೂಟಗಳ ಬೇಡಿಕೆಗಳೇನು?
- ಖಾಸಗಿ ಬಸ್ಗಳನ್ನ ಶಕ್ತಿಯೋಜನೆ ವ್ಯಾಪ್ತಿಗೆ ತರಬೇಕು
- 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ ₹10 ಸಾವಿರ ನೀಡಬೇಕು
- ರ್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧ ಮಾಡಬೇಕು
- 10-15 ಲಕ್ಷ ಮೌಲ್ಯದ ವಾಹನಗಳಿಗೆ ಜೀವಿತಾವಧಿ ತೆರಿಗೆ ಬದಲು ಈ ಹಿಂದಿನ ನಿಯಮವೇ ಜಾರಿಗೆ ತರಬೇಕು
- ಏರ್ಪೋರ್ಟ್ ಟ್ಯಾಕ್ಸಿಗಳಿಗೆ ಒಂದೇ ದರ ನಿಗದಿ ಮಾಡಬೇಕು
- ಅಸಂಘಟಿತ ವಾಣಿಜ್ಯ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು
- ಚಾಲಕರಿಗೆ ವಸತಿ ಯೋಜನೆ ನೀಡಬೇಕು
ಬಂದ್ನಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಸಾರಿಗೆಯ ಮುಷ್ಕರದಿಂದ ಬಿಎಂಟಿಸಿ ಬಸ್ ಹಾಗೂ ಮೆಟ್ರೋಗಳಲ್ಲಿ ಜನದಟ್ಟಣೆ ಉಂಟಾಗಿದೆ.