- ಹೊಸಕೆರೆಹಳ್ಳಿ ಬಳಿ ಎಂಡಿಎಂಎ ಎಕ್ಸ್’ಟೆಸಿ ಪಿಲ್ಸ್ ಮಾರಾಟ ಮಾಡುವಾಗ ಬಂಧನ
- ಆರೋಪಿಯಿಂದ ₹1.25 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದ ಪೊಲೀಸರು
ಕೆಂಗೇರಿ ಬಳಿ ಪೂರ್ಣ ಪ್ರಜ್ಞಾ ಫೌಂಡೇಶನ್ನ ಹೆಸರಿನಲ್ಲಿ ಮದ್ಯ ಮತ್ತು ಮಾದಕ ವ್ಯಸನ ಮುಕ್ತ ಕೇಂದ್ರ ನಡೆಸುತ್ತಿದ್ದ ಮುಖ್ಯಸ್ಥ ಸ್ವತಃ ತಾನೇ ಮಾದಕ ವ್ಯಸನಕ್ಕೆ ದಾಸನಾಗಿದ್ದು, ಜತೆಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಗಿರಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪದವೀಧರನಾಗಿದ್ದ ಸೂರಜ್ ಗೌಡ ಬಂಧಿತ ಆರೋಪಿ. ಹೊಸಕೆರೆಹಳ್ಳಿ ಬಳಿ ಎಂಡಿಎಂಎ ಎಕ್ಸ್’ಟೆಸಿ ಪಿಲ್ಸ್ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈತ ಸ್ವತಃ ತಾನೇ ಮಾದಕ ವ್ಯಸನಕ್ಕೆ ತುತ್ತಾಗಿದ್ದನು. ಈ ಹಿಂದೆ ಆತ್ಮಹತ್ಯೆಗೂ ಕೂಡ ಪ್ರಯತ್ನಿಸಿದ್ದನು. ಬಳಿಕ ಮಾದಕ ವ್ಯಸನದಿಂದ ಮುಕ್ತಿಯನ್ನು ಹೊಂದಲು ಸ್ವತಃ ತಾನೇ ಮದ್ಯ ಮತ್ತು ಮಾದಕ ವ್ಯಸನ ಮುಕ್ತ ಕೇಂದ್ರವನ್ನು ನಡೆಸುತ್ತಿದ್ದನು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಮಾದಕ ವ್ಯಸನದಿಂದ ಹೊರಬರಲಾರದೇ ತಾನು ಮಾದಕ ಪದಾರ್ಥಗಳನ್ನ ಸೇವಿಸುವುದಲ್ಲದೇ, ವ್ಯಸನದಿಂದ ಮುಕ್ತರಾಗಲು ದಾಖಲಾಗಿದ್ದವರಿಗೂ ಸಹ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಕೆಐಎನಲ್ಲಿ ಪ್ರಯಾಣಿಕರೊಬ್ಬರ ಎರಡು ಐಫೋನ್ ಕದ್ದ ಸಿಬ್ಬಂದಿ
ಬೆಂಗಳೂರಿನಲ್ಲಿ ಮಾದಕ ಪದಾರ್ಥಗಳಿಗೆ ಕಡಿವಾಣ ಹಾಕಲು ಬೆಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಯಿಂದ ಪೊಲೀಸರು ₹1.25 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.