ಭೂ ದರೋಡೆಕೋರರಿಗೆ ನಮ್ಮ ಸಮುಚ್ಚಯದೊಳಗೆ ಪ್ರವೇಶ ನೀಡುವುದಿಲ್ಲ ಎಂದು ಬೆಂಗಳೂರಿನ ಹೆಮ್ಮಿಗೆಪುರ ವಾರ್ಡ್ ನಿವಾಸಿಗಳು ಸಂಕಲ್ಪ ಮಾಡಿದ್ದಾರೆ. ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಭೂಗಳ್ಳತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಮ್ಮಿಗೆಪುರದ ಮಂತ್ರಿ ಕೋರ್ಟ್ ಯಾರ್ಡ್ನಲ್ಲಿ ಸುಮಾರು 400 ಜನರು ಒಗ್ಗೂಡಿ ಜಾಗೃತಿ ಜಾಥಾ ನಡೆಸಿದ್ದಾರೆ. ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಸರ್ಕಾರಿ ಭೂಮಿಯ ಒತ್ತುವರಿ ವಿರುದ್ಧ ಜಾಥಾದಲ್ಲಿ ಅರಿವು ಮೂಡಿಸಿದ್ದಾರೆ.
“ಅಕ್ರಮಗಳ ವಿರುದ್ಧ ಹೋರಾಡಲು ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗವನ್ನು ಬಳಸಿಕೊಂಡು ಸಮರ್ಥವಾಗಿ ಹೋರಾಡುತ್ತೇವೆ. ಯು.ಎಂ ಕಾವಲ್, ಹೆಮ್ಮಿಗೆಪುರ ಸೇರಿದಂತೆ ಬೆಂಗಳೂರಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ನಮ್ಮ ಮುಂದಿನ ಪೀಳಿಗೆಗೆ ಪಾರ್ಕ್, ಪಾದಚಾರಿ ಮಾರ್ಗ, ಸುಸಜ್ಜಿತ ನಗರವನ್ನು ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ನಿವಾಸಿಗಳು ಸಂಕಲ್ಪ ಮಾಡಿದ್ದಾರೆ.
ಅಲ್ಲದೆ, ‘ಭೂಗಳ್ಳರಿಗೆ ನಮ್ಮ ಸಮುಚ್ಚಯದೊಳಗೆ ಪ್ರವೇಶವಿಲ್ಲ’ ಎಂಬ ಬೋರ್ಡ್ ಮತ್ತು’ಅಕ್ರಮ ಕಟ್ಟುವಿಕೆ ವಿರುದ್ಧ ಬೆಂಗಳೂರು’ ಎಂಬ ಸಂಘಟನೆಯ ಲೋಗೋವನ್ನೂ ಕೂಡ ಹಿರಿಯ ನಿವಾಸಿಗಳು ಅನಾವರಣ ಮಾಡಿದ್ದಾರೆ.
ಸಂಘಟನೆಯ ಉದ್ದೇಶಗಳು:
1. ಸರ್ಕಾರಿ ಭೂಮಿ ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಎಂದು ಸ್ಥಳೀಯರಲ್ಲಿ ಜಾಗೃತಿ ಮೂಡಿಸುವುದು.
2. ಸಂಬಂಧಿಸಿದ ಸಂಸ್ಥೆಗಳಿಂದ ಮುಂದಿನ ಕ್ರಮ ಕೈಗೊಳ್ಳಲು ಸ್ಥಳೀಯರನ್ನು ತೊಡಗಿಸಿಕೊಳ್ಳುವುದು.
3. ರಾಜಕಾರಣಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ನಾವು ಸಾರ್ವಜನಿಕರು ಈ ರೀತಿ ಅಕ್ರಮದ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ ಎಂಬ ಸಂದೇಶ ಸಾರುವುದು.