ಕ್ರೈಸ್ತರ ಪ್ರಮುಖ ಹಬ್ಬವಾದ ‘ಈಸ್ಟರ್ ಭಾನುವಾರ’ವನ್ನು (ಮಾರ್ಚ್ 31) ಕೆಲಸದ ದಿನವಾಗಿ ಮಣಿಪುರ ಸರ್ಕಾರ ಘೋಷಿಸಿದೆ. ಅಂದು ಎಲ್ಲ ಸರ್ಕಾರಿ ಇಲಾಖೆಗಳಲ್ಲಿಯೂ ಸಿಬ್ಬಂದಿಗಳು ಕರ್ತರ್ವ ನಿರ್ವಹಿಸಬೇಕೆಂದು ಸೂಚಿಸಿದೆ. ಸರ್ಕಾರದ ಈ ನಿರ್ಧಾರ ವಿರುದ್ಧ ಕ್ರಿಶ್ಚಿಯನ್ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವಿನ ಹಿಂಸಾಚಾರದಿಂದ ಕಂಗೆಟ್ಟಿರುವ ಮಣಿಪುರದಲ್ಲಿ, ಅಲ್ಲಿನ ಬಿಜೆಪಿ ಸರ್ಕಾರ ಹೊಸ ವಿವಾದವನ್ನು ಹುಟ್ಟುಹಾಕಿದೆ. ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆಯು ‘ಈಸ್ಟರ್ ಸಂಡೇ’ ಕುರಿತು ಆದೇಶ ಹೊರಡಿಸಿದ್ದು, “ಶನಿವಾರ (ಮಾರ್ಚ್ 30) ಮತ್ತು ಭಾನುವಾರ (ಮಾರ್ಚ್ 31) ಎಲ್ಲ ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಹಾರೂ ರಾಜ್ಯ ಸರ್ಕಾರದ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಹಣಕಾಸು ವರ್ಷದ (2023-24) ಕೊನೆಯ ದಿನಗಳಲ್ಲಿ ಕಚೇರಿ ಕೆಲಸಗಳನ್ನು ಪೂರ್ಣಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಹೇಳಿದೆ.
2011ರ ಜನಗಣತಿಯ ಪ್ರಕಾರ, ಮಣಿಪುರದ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು 40.1% (2.8 ಮಿಲಿಯನ್) ರಷ್ಟಿದ್ದಾರೆ. ಅವರಲ್ಲಿ ಹೆಚ್ಚಿನವರು ಕುಕಿ, ಝೋ ಮತ್ತು ನಾಗಾ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.
ಸರ್ಕಾರದ ಈ ಆದೇಶವು ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಬುಡಕಟ್ಟು ಸಮುದಾಯಗಳ ಒಕ್ಕೂಟ ಸಂಸ್ಥೆ – ಇಂಡಿಜಿನಸ್ ಟ್ರೈಬಲ್ ಲೀಡರ್ಸ್ ಫೋರಂ (ಐಟಿಎಲ್ಎಫ್) ಹೇಳಿದೆ. “ಮಣಿಪುರದಲ್ಲಿ ಅನೇಕ ಕ್ರೈಸ್ತರಿದ್ದಾರೆ. ಭಾನುವಾರವು ರಜೆಯ ದಿನವಾಗಿದೆ. ಅಲ್ಲದೆ, ‘ಈಸ್ಟರ್’ ದಿನವೂ ಆಗಿದೆ” ಎಂದು ಐಟಿಎಲ್ಎಫ್ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ನಾಗಾ ಸಮುದಾಯದ ವಿದ್ಯಾರ್ಥಿ ಸಂಘಟನೆ ‘ಪೌಮೈ ನಾಗಾ ತ್ಸೈಡೌಮೈ ಮಿ’ ಕೂಡ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದೆ.
ಈ ಆದೇಶವು ಹಿಂದೂ-ಬಹುಸಂಖ್ಯಾತ ಮೈಥೇಯಿ ಮತ್ತು ಕ್ರೈಸ್ತ ಬಹುಸಂಖ್ಯಾತ ಕುಕಿ-ನಾಗಾ ಸಮುದಾಯಗಳ ನಡುವಿನ ಹಳೆಯ ಹಿಂಸಾಚಾರಕ್ಕೆ ಮತ್ತೆ ಪ್ರಚೋದನೆ ನೀಡುವಂತಿದೆ ಎಂದು ಆರೋಪಿಸಲಾಗಿದೆ.
ಕಳೆದ ವರ್ಷ ಮೇ 3 ರಂದು ಮಣಿಪುರದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರದಲ್ಲಿ ಈವರೆಗೆ 200ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಕುಕಿ ಸಮುದಾಯದ ಮಹಿಲೆಯವರ ಮೇಲೆ ಅಮಾನವೀಯ ದೌರ್ಜನ್ಯ, ಅತ್ಯಾಚಾರಗಳು ನಡೆದಿವೆ. ಹಿಂಸಾಚಾರದ ಕಾರಣದಿಂದಾಗಿ 50,000ಕ್ಕೂ ಹೆಚ್ಚು ಜನರನ್ನು ತಮ್ಮೂರುಗಳನ್ನು ತೊರೆದು, ವಲಸೆ ಹೋಗಿದ್ದಾರೆ ಮತ್ತು ಸ್ಥಳಾಂತರಗೊಂಡಿದ್ದಾರೆ.