- ಮಳೆನೀರು ಕೆರೆಗಳ ನೀರಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ
- ಗೌಡನಪಾಳ್ಯ ಕೆರೆಯಲ್ಲಿ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಂಡು ಒಂದು ವರ್ಷ ಕಳೆದಿದೆ
ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಬರಲಿದೆ. ಮಳೆಗಾಲಕ್ಕೂ ಮುನ್ನ ಕೆರೆಗಳ ಪುನಶ್ಚೇತನ ಕಾಮಗಾರಿ, ಮಳೆನೀರು ಚರಂಡಿ ಹಾಗೂ ಮಳೆನೀರಿನ ಒಳಹರಿವುಗಳ ಸ್ವಚ್ಛತೆಯನ್ನು ಮಾಡಿ ಎಂದು ಆಕ್ಷನ್ ಏಡ್ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಒತ್ತಾಯಿಸಿದೆ.
ಆಕ್ಷನ್ ಏಡ್ ಸಂಸ್ಥೆಯ ರಾಘವೇಂದ್ರ ಬಿ ಪಾಚ್ಚಾಪುರ ಮಾತನಾಡಿ, “ಮಳೆ ನೀರು ಸರಾಗವಾಗಿ ಹರಿಯಲು ಕೆರೆಗಳ ಒಳಹರಿವಿನ ಸುತ್ತ ಪ್ಲಾಸ್ಟಿಕ್ ಸೇರಿದಂತೆ ಹೂಳು ಮತ್ತು ಘನತ್ಯಾಜ್ಯವನ್ನು ತೆರವುಗೊಳಿಸಬೇಕು. ಮಳೆ ನೀರನ್ನು ಕೆರೆಗಳ ಕಡೆಗೆ ಹರಿಸುವ ಗುರಿ ಹೊಂದಬೇಕು. ಕೆರೆಗಳ ನೀರಿನ ಗುಣಮಟ್ಟವನ್ನು ಸುಧಾರಿಸಲು ಮಳೆನೀರು ಸಹಾಯ ಮಾಡುತ್ತದೆ” ಎಂದರು.
“ದೊಡ್ಡಕಲ್ಲಸಂದ್ರ ಕೆರೆಯಲ್ಲಿ ಹೂಳು ತುಂಬಿದ್ದು, ನಿರ್ವಹಣೆ ಅಗತ್ಯವಿದೆ. ಕೆರೆಗಳಿಗೆ ನೀರು ಹರಿಯುವ ಚಾನಲ್ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಮಳೆಗಾಲದ ಸಮಯದಲ್ಲಿ ಕೆರೆಗಳನ್ನು ಮತ್ತು ನೀರು ಹರಿಯುವ ಚಾನಲ್ಗಳನ್ನು ಸ್ವಚ್ಛಗೊಳಿಸದಿದ್ದರೇ, ಕೆರೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಏಕೆಂದರೆ ಮಳೆ ಬಾರದಿದ್ದರೂ ಕೊಳಚೆ ನೀರು ಕೆರೆಗೆ ಸೇರಲು ಪ್ರಾರಂಭಿಸುತ್ತದೆ”ಎಂದು ಪಾಚ್ಚಾಪುರ ಹೇಳಿದರು.
“ಬಿಬಿಎಂಪಿ ಗೌಡನಪಾಳ್ಯ ಕೆರೆಯಲ್ಲಿ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಂಡು ಸುಮಾರು ಒಂದು ವರ್ಷ ಕಳೆದಿದೆ. ಮಳೆಗಾಲದ ಆರಂಭಕ್ಕೂ ಮುನ್ನ ಎಲ್ಲ ಕೆರೆಗಳ ಪುನರುಜ್ಜೀವನ ಕಾಮಗಾರಿ ಮುಗಿಯಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ‘ಗಾಲ್ಫ್ ಕ್ಲಬ್’ ತೆರವುಗೊಳಿಸುವ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ
”ಬಿಬಿಎಂಪಿಯ ಕೆರೆಗಳ ಇಲಾಖೆಯು ಮಳೆಗಾಲದಲ್ಲಿ ಸ್ಥಳೀಯ ಸಮುದಾಯಗಳ ಕರೆಗಳಿಗೆ ಸ್ಪಂದಿಸಬೇಕು. ಒತ್ತುವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸಬೇಕು. ಮಳೆಗಾಲದಲ್ಲಿ ವಿಶೇಷ 24*7 ಸಹಾಯವಾಣಿ ಸಕ್ರಿಯವಾಗಿರಬೇಕು. ಪ್ರತಿಯೊಂದು ಕೆರೆಯ ವಿವರಗಳು, ಅದರಲ್ಲಿರುವ ಜೀವವೈವಿಧ್ಯತೆ ಮತ್ತು ನಿರ್ವಹಣೆ ಗುತ್ತಿಗೆದಾರರ ಮತ್ತು ಕೆರೆ-ಸಹಾಯಕ ಎಂಜಿನಿಯರ್ ಅವರ ಸಂಪರ್ಕ ಸಂಖ್ಯೆಗಳೊಂದಿಗೆ ಮಾಹಿತಿ ಫಲಕವನ್ನು ಹೊಂದಿರಬೇಕು. ಇದರಿಂದ ಕೆರೆಯಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಲು ಅನುಕೂಲವಾಗುತ್ತದೆ. ಎರಡು ಇಲಾಖೆಗಳ ಸಮನ್ವಯಕ್ಕಾಗಿ ಬಿಬಿಎಂಪಿ ಆಯುಕ್ತರು ಮಳೆನೀರು ಚರಂಡಿ ಎಂಜಿನಿಯರ್ಗಳು ಮತ್ತು ಕೆರೆ ಎಂಜಿನಿಯರ್ಗಳ ಸಭೆ ಕರೆಯಬೇಕು” ಎಂದು ಅವರು ಹೇಳಿದರು.