ನಟ ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ಮನನೊಂದಿದ್ದ ಯುವತಿ, ಅದೇ ಚಿಂತೆಯಲ್ಲಿ ಕ್ರಮೇಣ ಆಹಾರ ಸೇವನೆಯನ್ನೇ ತೊರೆದಿದ್ದರು. ಪರಿಣಾಮ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಯುವತಿ ಕೊನೆಯುಸಿರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ನಿವಾಸಿ ಕುಮಾರ ಹಾಗೂ ಮಂಜುಳಾ ದಂಪತಿ ಪುತ್ರಿ ಪ್ರೀತಿ ಮೃತ ದುರ್ದೈವಿ. ಪುನೀತ್ ಸಾವನ್ನಪ್ಪಿದ ನಂತರ ಯುವತಿ, ಪ್ರತಿ ದಿನ ಅಪ್ಪು ಫೋಟೋಗೆ ಪೂಜೆ ಮಾಡುತ್ತಿದ್ದರು. ಊಟ ಮಾಡುವುದನ್ನೂ ಬಿಟ್ಟಿದ್ದರು. ಇದರಿಂದಾಗಿ, ದೇಹದಲ್ಲಿ ರಕ್ತ ಕಡಿಮೆ ಆಗಿ ಕ್ರೇಟಿನ್ ಅಂಶ ಹೆಚ್ಚಾಗಿತ್ತು. ಅನಾರೋಗ್ಯಕ್ಕೆ ತುತ್ತಾಗಿದ್ದ ಆಕೆಯನ್ನು ಪೋಷಕರು ಆಸ್ಪತ್ರೆಗೆ ಸೇರಿಸಿದ್ದರು. ಆದರೂ, ಆಕೆ ಬದುಕುಳಿಯಲಿಲ್ಲ.
2017ರಲ್ಲಿ ಆರನೇ ತರಗತಿಯಲ್ಲಿ ಓದುತಿದ್ದ ಪ್ರೀತಿ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಎರಡೂ ಕಿಡ್ನಿಗಳು ವೈಫಲ್ಯವಾಗಿದ್ದರಿಂದ ಆಕೆಗೆ ಒಂದಾದರೂ ಕಿಡ್ನಿಯನ್ನು ಹಾಕಬೇಕೆಂದು ವೈದ್ಯರು ಹೇಳಿದ್ದರು. ಆದರೆ, ಪೋಷಕರು ಬಡವರಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿಸುವುದು ಸವಾಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಪುನೀತ್ ರಾಜ್ಕುಮಾರ್, ಆಕೆಯನ್ನು ಬೆಂಗಳೂರಿಗೆ ಕರೆಸಿಕೊಂಡು 12.5 ಲಕ್ಷ ರೂ. ಆಸ್ಪತ್ರೆ ವೆಚ್ಚ ಭರಿಸಿ, ಶಸ್ತ್ರಚಿಕಿತ್ಸೆ ಮಾಡಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಬಾಲಿವುಡ್ನಲ್ಲಿ ಆಂತರಿಕ ರಾಜಕಾರಣ ಕೊನೆಗೊಳ್ಳಬೇಕು: ಪ್ರಿಯಾಂಕಾ ಚೋಪ್ರಾ
ಪುನೀತ್ ಅಭಿಮಾನಿಗಳನ್ನು ಅಗಲಿದ ಬಳಿಕ ಆಕೆ ವಿಪರೀತ ದುಃಖಿತಳಾಗಿದ್ದಳು. ಅದೇ ಚಿಂತೆಯಲ್ಲಿ ದಿನಕಳೆದಂತೆ ಊಟ ಮಾಡುವುದನ್ನು ಕಡಿಮೆ ಮಾಡಿದ್ದ ಪ್ರೀತಿ, ಆಹಾರ ಸೇವನೆಯನ್ನು ತ್ಯಜಿಸಿದ್ದರು. ಇದೀಗ, ಆಕೆ ಕೊನೆಯುಸಿರೆಳೆದಿದ್ದಾರೆ.