ನಾಲ್ಕು ಅಂತಸ್ತಿನ ಕಟ್ಟಡದ ಮೇಲಿಂದ ನೀರಿನ ಟ್ಯಾಂಕ್ ಕುಸಿದು ಬಿದ್ದು ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಟ್ಟಡದ ಮಾಲೀಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ಎ ಅಡಿಯಲ್ಲಿ ನಿರ್ಲಕ್ಷ್ಯ ಪ್ರಕರಣವನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
“ನಾಲ್ಕನೇ ಮಹಡಿಯಿಂದ ವಾಟರ್ ಟ್ಯಾಂಕರ್ ಜತೆಗೆ ಗೋಡೆಯು ಕುಸಿದು ಬಿದ್ದಿದೆ. ಇದರ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್ಎಸ್ಎಲ್ ತಜ್ಞರು ಹಾಗೂ ಪ್ರಮಾಣಿಕೃತ ಸಿವಿಲ್ ಎಂಜಿನಿಯರ್ ಅವರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಡಿಸಿಪಿ (ಪೂರ್ವ) ಭೀಮಾಶಂಕರ್ ಎಸ್ ಗುಳೇದ್ ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಟ್ಟಡದ ಮೇಲಿಂದ ನೀರಿನ ಟ್ಯಾಂಕ್ ಕುಸಿದು ಇಬ್ಬರು ಸಾವು
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು, “ವಾಟರ್ ಟ್ಯಾಂಕರ್ ಹೆಚ್ಚಿನ ನೀರು ತುಂಬಿ ಒತ್ತಡ ತಡೆಯಲಾಗದೆ ಟ್ಯಾಂಕರ್ ಬಿದ್ದಿದೆ. ಈ ವೇಳೆ, ಗೋಡೆಯು ಕುಸಿದು ಬಿದ್ದಿದೆ. ಟ್ಯಾಂಕರ್ ಇರುವ ಕೆಳಗೆ ಎಗ್ರೈಸ್ ಅಂಗಡಿಯೊಂದಿತ್ತು. ಗ್ರಾಹಕರು ಅಂಗಡಿಯ ಬಳಿ ಇದ್ದರು. ನೀರಿನ ಟ್ಯಾಂಕರ್ ಬಿದ್ದ ಪರಿಣಾಮ ಅಂಗಡಿಯಲ್ಲಿ ಕೆಲಸ ಮಾಡುವ ಓರ್ವ ಯುವಕ ಸೇರಿದಂತೆ ಇಬ್ಬರು ಗ್ರಾಹಕರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ” ಎಂದು ತಿಳಿಸಿದ್ದಾರೆ.