- ₹150 ಕೋಟಿ ವೆಚ್ಚದಲ್ಲಿ 75 ಜಂಕ್ಷನ್ ಅಭಿವೃದ್ಧಿಪಡಿಸಲು ಮತ್ತೊಂದು ಯೋಜನೆ
- ದೂರದ ಬಸ್ಗಳಿಗಾಗಿ ಕಾಯುವ ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಮಾಡಲು ಬಿಬಿಎಂಪಿ ಮುಂದು
₹50.70 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಆರು ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ದೊಡ್ಡನೆಕುಂದಿ ಮುಖ್ಯರಸ್ತೆ (₹9.60 ಕೋಟಿ), ಬಾಣಸವಾಡಿ 8ನೇ ಮುಖ್ಯರಸ್ತೆ (₹23.54 ಕೋಟಿ), ಆನಂದ್ ರಾವ್ ವೃತ್ತ (₹2.16 ಕೋಟಿ), ಮೈಸೂರು ರಸ್ತೆಯ ಬಿಎಚ್ಇಎಲ್ ಜಂಕ್ಷನ್ (₹3.28 ಕೋಟಿ), ಸುಮನಹಳ್ಳಿ ಜಂಕ್ಷನ್ (₹2.70 ಕೋಟಿ) ಹಾಗೂ ಶಿವಾನಂದ ವೃತ್ತ (₹4.36 ಕೋಟಿ)ವನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿಗೆ ಸರ್ಕಾರದಿಂದ ಅನುಮೋದನೆ ದೊರಕಿದೆ. ಇದಲ್ಲದೇ, ಒಟ್ಟು ₹150 ಕೋಟಿ ವೆಚ್ಚದಲ್ಲಿ 75 ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಇನ್ನೊಂದು ಯೋಜನೆಯನ್ನು ರೂಪಿಸಿದೆ.
ಇವುಗಳಲ್ಲಿ, ಎರಡು ಪ್ರಸ್ತಾವನೆಗಳನ್ನು ಸೆನ್ಸಿಂಗ್ ಲೋಕಲ್ ಮತ್ತು ಯಂಗ್ ಲೀಡರ್ಸ್ ಫಾರ್ ಆಕ್ಟಿವ್ ಸಿಟಿಜನ್ಸ್ ಎಂಬ ಎರಡು ಎನ್ಜಿಒಗಳು ಸಲ್ಲಿಸಿವೆ.
ಅವರ ವಿನ್ಯಾಸದ ಪ್ರಕಾರ, ಬಾಣಸವಾಡಿಯ 8ನೇ ಮೇನ್ ಅನ್ನು ಕೋರಮಂಗಲ ಕಣಿವೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ದೊಡ್ಡನೆಕುಂದಿ ಗ್ರಾಮದಲ್ಲಿ 16.4 ಕಿ.ಮೀ ರಸ್ತೆಯನ್ನು ಸಮರ್ಪಕ ಪಾದಚಾರಿ ಸೌಲಭ್ಯ ಕಲ್ಪಿಸುವ ಮೂಲಕ ಸೌಂದರ್ಯೀಕರಿಸಲಾಗುತ್ತದೆ.
ಈ ಪಟ್ಟಿಯಲ್ಲಿ ಮೂರು ಮೇಲ್ಸೇತುವೆಗಳೂ ಸೇರಿದ್ದು, ಈ ಮೇಲ್ಸೇತುವೆಗಳ ಕೆಳಗಿರುವ ಖಾಲಿ ಜಾಗಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಮುಂದಾಗಿದೆ.
ಶಿವಾನಂದ ವೃತ್ತದ ಮೇಲ್ಸೇತುವೆಯಲ್ಲಿ ಸ್ಕೇಟಿಂಗ್ ರಿಂಕ್ ಮತ್ತು ಬಾಸ್ಕೆಟ್ಬಾಲ್ ಅಂಕಣ, ವಿಜಯನಗರ ವೃತ್ತದಲ್ಲಿ ಚನ್ನಪಟ್ಟಣದ ಆಟಿಕೆಗಳ ಪ್ರದರ್ಶನ, ಆನಂದ್ ರಾವ್ ಮೇಲ್ಸೇತುವೆ ಮತ್ತು ಜಂಕ್ಷನ್ನಲ್ಲಿ ದೂರದ ಬಸ್ಗಳಿಗಾಗಿ ಕಾಯುವ ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಮಾಡಲು ಬಿಬಿಎಂಪಿ ಮುಂದಾಗಿದೆ.
ಶಿವಾನಂದ ವೃತ್ತದಲ್ಲಿ ಸ್ಕೇಟಿಂಗ್ ರಿಂಕ್ ಮತ್ತು ಬಾಸ್ಕೆಟ್ಬಾಲ್ ಅಂಕಣ ನಿರ್ಮಾಣದ ಯೋಜನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು, ಖಾಲಿ ಜಾಗವನ್ನು ಪಾರ್ಕಿಂಗ್ ಮಾಡಲು ನಿವಾಸಿಗಳು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅನಿಲ ಸೋರಿಕೆಯಿಂದ ಗ್ಯಾಸ್ ಸಿಲಿಂಡರ್ ಸ್ಫೋಟ; ವ್ಯಕ್ತಿಗೆ ಗಾಯ
ಈ ಮೇಲ್ಸೇತುವೆಗಳು ಮತ್ತು ಸರ್ಕಲ್ಗಳು ಮಾತ್ರವಲ್ಲದೆ, ₹5.06 ಕೋಟಿ ವೆಚ್ಚದಲ್ಲಿ ನಗರದಲ್ಲಿ ಪ್ರಮುಖ ಸ್ಥಳಗಳ ಮಾರ್ಗ, ಹತ್ತಿರದ ಕ್ರೀಡಾ ಮೈದಾನಗಳು ಹಾಗೂ ಪ್ರಮುಖ ಸ್ಥಳಗಳ ಮಹತ್ವವನ್ನು ತಿಳಿಸುವ ಮಾಹಿತಿ ಫಲಕಗಳನ್ನು ಹಾಕಲು ಬಿಬಿಎಂಪಿ ಮುಂದಾಗಿದೆ.