- ಬೆಂಗಳೂರಿನಲ್ಲಿ ವಾರ್ಡ್ಗೊಂದರಂತೆ 243 ‘ನಮ್ಮ ಕ್ಲಿನಿಕ್’
- ಕೆಲವೊಂದು ಕ್ಲಿನಿಕ್ಗಳಲ್ಲಿ ಶುಶ್ರೂಷಕರಿಂದ ರೋಗಿಗಳ ಆರೈಕೆ
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 438 ‘ನಮ್ಮ ಕ್ಲಿನಿಕ್’ ತೆರೆಯಲು ಹಿಂದಿನ ಬಿಜೆಪಿ ಸರ್ಕಾರ ಯೋಜಿಸಿತ್ತು. ಅದರಂತೆಯೇ ಬೆಂಗಳೂರಿನಲ್ಲಿ ಪ್ರಸ್ತುತವಾಗಿ 224 ನಮ್ಮ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 19 ಕ್ಲಿನಿಕ್ಗಳು ಆರಂಭವಾಗಬೇಕಿದೆ. ಈ ತಿಂಗಳಲ್ಲಿ ಬಾಕಿ ಉಳಿದ ಕ್ಲಿನಿಕ್ಗಳನ್ನು ತೆರೆಯಲು ಬಿಬಿಎಂಪಿ ಯೋಜಿಸಿದೆ.
ಬೆಂಗಳೂರಿನಲ್ಲಿ ವಾರ್ಡ್ಗೊಂದರಂತೆ 243 ನಮ್ಮ ಕ್ಲಿನಿಕ್ಗಳನ್ನು ತೆರೆಯಲು ಈ ಹಿಂದಿನ ಬಿಜೆಪಿ ಸರ್ಕಾರ ಯೋಜನೆ ರೂಪಿಸಿತ್ತು. ಇದು ದೆಹಲಿಯ ಮೊಹಲ್ಲಾ ಕ್ಲಿನಿಕ್ ಮಾದರಿಯ ಯೋಜನೆಯಾಗಿತ್ತು.
2022ರ ಡಿ. 14ರಂದು ಆಗಿನ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಎಲ್ಲ 438 ನಮ್ಮ ಕ್ಲಿನಿಕ್ಗಳನ್ನು ಜನವರಿ ಅಂತ್ಯದೊಳಗೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದರು.
ಪ್ರತಿಯೊಂದು ನಮ್ಮ ಕ್ಲಿನಿಕ್ನಲ್ಲಿ ಒಬ್ಬ ವೈದ್ಯ, ಒಬ್ಬರು ನರ್ಸಿಂಗ್ ಸಿಬ್ಬಂದಿ, ಒಬ್ಬ ಲ್ಯಾಬ್ ಟೆಕ್ನಿಷಿಯನ್ ಮತ್ತು ಒಬ್ಬರು ಡಿ-ಗ್ರೂಪ್ ನೌಕರರು ಇರಬೇಕಿತ್ತು. ಆದರೆ, ನಗರದ ಕೆಲವೊಂದು ಕ್ಲಿನಿಕ್ಗಳಲ್ಲಿ ಶುಶ್ರೂಷಕರೇ ರೋಗಿಗಳಿಗೆ ಆರೈಕೆ ಮಾಡುತ್ತಿದ್ದಾರೆ. ವೈದ್ಯರ ಕೊರತೆ ಹೆಚ್ಚಾಗಿದೆ. ಇನ್ನೂ ಕೆಲವು ಕ್ಲಿನಿಕ್ಗಳಲ್ಲಿ ವೈದ್ಯರು ದೀರ್ಘ ಅವಧಿ ರಜೆ ತೆಗೆದುಕೊಳ್ಳುತ್ತಿದ್ದಾರೆ.
ಪ್ರಸವಪೂರ್ವ ಆರೈಕೆ, ಹದಿಹರೆಯದವರ ಆರೈಕೆ, ಕುಟುಂಬ ಯೋಜನೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಗಾಯಗಳು, ಎನ್ಸಿಡಿಗಳಿಗೆ ತಡೆಗಟ್ಟುವ ಆರೈಕೆ, ಮೌಖಿಕ ಆರೈಕೆ, ಕಣ್ಣಿನ ಆರೈಕೆ, ಇಎನ್ಟಿ, ಮಾನಸಿಕ ಆರೋಗ್ಯ, ವೃದ್ಧಾಪ್ಯ ಆರೈಕೆ ಮತ್ತು ಪ್ರಯೋಗಾಲಯ ಸೇವೆಗಳು ಸೇರಿದಂತೆ ಹಲವಾರು ಆರೋಗ್ಯ ರಕ್ಷಣಾ ಪ್ಯಾಕೇಜ್ಗಳನ್ನು ಈ ಕ್ಲಿನಿಕ್ನಲ್ಲಿ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಜೊತೆಗೆ, ಟೆಲಿ-ಕನ್ಸಲ್ಟೇಶನ್, ಯೋಗ ಮತ್ತು ರೆಫರಲ್ ಸೇವೆಗಳಂತಹ ಕ್ಷೇಮ ಚಟುವಟಿಕೆಗಳು ಸಹ ಚಿಕಿತ್ಸಾಲಯಗಳ ಮೂಲಕ ಲಭ್ಯವಾಗಬೇಕಿತ್ತು. ಆದರೆ, ಇದರಲ್ಲಿ ಹಲವಾರು ಚಿಕಿತ್ಸೆಗಳು ಜನರಿಗೆ ತಲುಪುತ್ತಿಲ್ಲ ಎಂಬುದು ಅನೇಕರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಯುವಕ ಆತ್ಮಹತ್ಯೆ
“ನಗರದಲ್ಲಿ 224 ನಮ್ಮ ಕ್ಲಿನಿಕ್ಗಳಿದ್ದು ಇನ್ನೂ 19 ಕ್ಲಿನಿಕ್ಗಳು ಆರಂಭವಾಗಬೇಕಿದೆ. ವೆಬ್ಸೈಟ್ನಲ್ಲಿ 109 ಕ್ಲಿನಿಕ್ಗಳ ಮಾಹಿತಿಯನ್ನು ಅಪ್ಡೇಟ್ ಮಾಡಲಾಗಿದ್ದು, ಬಾಕಿ ಕ್ಲಿನಿಕ್ಗಳ ಪಟ್ಟಿಯನ್ನು ಕೂಡಲೇ ಅಪ್ಡೇಟ್ ಮಾಡಲಾಗುವುದು. ಉಳಿದ ಕ್ಲಿನಿಕ್ಗಳ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಶೀಘ್ರವೇ ಅವುಗಳನ್ನು ಆರಂಭಿಸಲು ಸ್ಥಳಗಳನ್ನು ಅಂತಿಮಗೊಳಿಸಲಾಗುವುದು” ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ತ್ರೀಲೋಕ್ ಚಂದ್ರ ಹೇಳಿದರು.
“ಈಗಾಗಲೇ ಅಸ್ತಿತ್ವದಲ್ಲಿರುವ ಕ್ಲಿನಿಕ್ಗಳಲ್ಲಿ ನಿಯಮಿತ ವೈದ್ಯರಿದ್ದಾರೆ. 50 ಕ್ಲಿನಿಕ್ಗಳಿಗೆ ಮಾತ್ರ ವೈದ್ಯಕೀಯ ಕಾಲೇಜುಗಳಿಂದ ಸ್ನಾತಕೋತ್ತರ ಪದವೀಧರರನ್ನು ನೇಮಿಸಲಾಗಿದೆ” ಎಂದರು.