- ಪ್ರಜಾವಾಣಿಯ ಹಿರಿಯ ಪತ್ರಕರ್ತ ತಾಜುದ್ದೀನ್ ಆಜಾದ್ ಅವರಿಗೆ ಪ್ರಥಮ ಬಹುಮಾನ
- ಬಾಗಲಕೋಟಯ ಸುದ್ದಿ ಪತ್ರಿಕೆಯ ಛಾಯಾಗ್ರಾಹಕ ಇಂದ್ರ ಕುಮಾರ್ ಅವರಿಗೆ ದ್ವಿತೀಯ ಬಹುಮಾನ
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ವಿಷಯ ಕುರಿತು ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರಿಗೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ವಿಜೇತರ ಹೆಸರನ್ನು ಗುರುವಾರ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮೇ 10ರಂದು ನಡೆದ ಮತದಾನ ದಿನದ ವಿಷಯಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗೆ ಛಾಯಾಚಿತ್ರಗಳನ್ನು ಕಳುಹಿಸಲು ಮೇ 20 ಕೊನೆಯ ದಿನವಾಗಿತ್ತು. ಸ್ಪರ್ಧೆಯಲ್ಲಿ ರಾಜ್ಯದ ನಾನಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 63 ಪತ್ರಿಕಾ ಛಾಯಾಗ್ರಾಹಕರು/ಹವ್ಯಾಸಿ ಛಾಯಾಗ್ರಹಕರು ಭಾಗವಹಿಸಿದ್ದರು ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಸೂಕ್ತ ಶೀರ್ಷಿಕೆಯೊಂದಿಗೆ 5 ಛಾಯಾಚಿತ್ರಗಳನ್ನು ಕಳುಹಿಸಲು ತಿಳಿಸಲಾಗಿತ್ತು. ಸ್ಪರ್ಧೆಯಲ್ಲಿ ಸಲ್ಲಿಕೆಯಾಗಿದ್ದ ಛಾಯಾಚಿತ್ರಗಳನ್ನು ಸೂಕ್ತ ಮಾರ್ಗಸೂಚಿಗಳ ಅನ್ವಯ ಕೂಲಂಕುಷವಾಗಿ ಪರಿಶೀಲಿಸಿ ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಗುರುವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಉತ್ತಮ ಛಾಯಾಚಿತ್ರಗಳಿಗೆ ಬಹುಮಾನಗಳನ್ನು ನೀಡಿ, ವಿಜೇತರನ್ನು ಘೋಷಿಸಿದೆ.
ಬಹುಮಾನಗಳ ವಿವರ
- ಪ್ರಥಮ ಬಹುಮಾನವೂ ₹25000 ಮೊತ್ತದಾಗಿದ್ದು, ಪ್ರಜಾವಾಣಿಯ ಹಿರಿಯ ಪತ್ರಕರ್ತ ತಾಜುದ್ದೀನ್ ಆಜಾದ್ ಅವರಿಗೆ ದೊರಕಿದೆ.
- ದ್ವಿತೀಯ ಬಹುಮಾನ ₹15000 ಇದ್ದು, ಬಾಗಲಕೋಟ ಹಳ್ಳಿ ಸಂದೇಶ ಸುದ್ದಿ ಪತ್ರಿಕೆಯ ಛಾಯಾಗ್ರಾಹಕ ಇಂದ್ರ ಕುಮಾರ್ ದಸ್ತೇನವರ್ ಅವರಿಗೆ ಲಭಿಸಿದೆ.
- ತೃತೀಯ ಬಹುಮಾನ ₹10000 ಇದೆ. ಈ ಬಹುಮಾನವೂ ಮಂಗಳೂರಿನ ಪ್ರಜಾವಾಣಿ ಛಾಯಾಗ್ರಾಹಕ ಫಕ್ರುದ್ದೀನ್ ಹೆಚ್ ಅವರಿಗೆ ದೊರಕಿದೆ.
- ಇನ್ನೂ ₹3000 ಸಮಾಧಾನಕರ ಬಹುಮಾನವನ್ನು ಕನ್ನಡಫ್ರಭದ ಛಾಯಾಗ್ರಾಹಕ ಸುರೇಶ್ ಪಿ ಹಾಗೂ ದಿ ಎಕನಾಮಿಕ್ಸ್ ಟೈಮ್ಸ್ನ ಛಾಯಾಗ್ರಾಹಕ ಎನ್ ನರಸಿಂಹಮೂರ್ತಿ ಅವರಿಗೆ ದೊರಕಿದೆ.
- ₹5000 ಮೊತ್ತದ ವಿಶೇಷ ಬಹುಮಾನವನ್ನು ಹವ್ಯಾಸಿ ಛಾಯಾಗ್ರಾಹಕ ಕೆ ವೆಂಕಟೇಶ್ ಅವರಿಗೆ ಲಭಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಇದೇ ರೀತಿ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಛಾಯಾಚಿತ್ರಗಳು ಪ್ರಶಂಸೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ 2023ರ ಸಾರ್ವತ್ರಿಕ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ; 39% ಕಾಮಗಾರಿ ಪೂರ್ಣ
ಶೀಘ್ರದಲ್ಲಿಯೇ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗಳಿಗೆ ಆಯ್ಕೆಯಾದ ಛಾಯಾಗ್ರಾಹಕರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.