- ಸಂತ್ರಸ್ತ ನಿವಾಸಿಗಳು ₹10,000 ಧನ ಸಹಾಯ ಪಡೆಯಿರಿ ;ಬಿಬಿಎಂಪಿ
- ಕಳೆದ ವರ್ಷ ಸಂಪೂರ್ಣ ಜಲಾವೃತವಾಗಿದ್ದ ಬೆಂಗಳೂರು ಪೂರ್ವ ಭಾಗ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜನವರಿಯಲ್ಲಿ ರಾಜಕಾಲುವೆ ಚರಂಡಿಯ ಎರಡು ಬದಿಯಲ್ಲಿ ಕಾಂಕ್ರೀಟ್ ಗೋಡೆಗಳನ್ನು ಮರು ನಿರ್ಮಾಣ ಮಾಡುವ ಕಾಮಗಾರಿ ಆರಂಭಿಸಿದೆ. ಇದೀಗ 39ರಷ್ಟು ಕಾಮಗಾರಿ ಪೂರ್ಣವಾಗಿದೆ.
ಈ ವರ್ಷ ಮುಂಗಾರು ಮಳೆ ಆರಂಭಕ್ಕೂ ಮುನ್ನ ಮಳೆ ಆರಂಭವಾಗಿದ್ದು, ಬೆಂಗಳೂರಿನ ಹಲವು ಮನೆಗಳು ಮಳೆ ನೀರಿನಿಂದ ಜಲಾವೃತವಾಗಿವೆ. ಕಳೆದ ವರ್ಷ ಬೆಂಗಳೂರು ಪೂರ್ವ ಭಾಗ ಸಂಪೂರ್ಣ ಜಲಾವೃತವಾಗಿತ್ತು.
“ಕಳೆದ ವರ್ಷ ಮಳೆಯಿಂದ ಬೆಂಗಳೂರಿನ ಪೂರ್ವ ಭಾಗದಲ್ಲಿ ಪ್ರವಾಹ ಉಂಟಾಗಿತ್ತು. ನಂತರ ರಾಜ್ಯ ಸರ್ಕಾರವೂ ₹1500 ಕೋಟಿ ಯೋಜನೆಯನ್ನು ರೂಪಿಸಿತ್ತು. ಇದೀಗ ಮುಂದಿನ ಆರು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲ್ಲಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನಾಲ್ಕು ದೊಡ್ಡ ಕಾಲುವೆಗಳನ್ನು ಒಳಗೊಂಡಿರುವ ನಗರವು 859 ಕಿಲೋಮೀಟರ್ ಪ್ರಾಥಮಿಕ ಚರಂಡಿಗಳನ್ನು ಹೊಂದಿದೆ. ಅದರಲ್ಲಿ 491 ಕಿಮೀ ಉದ್ದಕ್ಕೂ ಕೆಲಸ ಪೂರ್ಣಗೊಂಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ₹1,500 ಕೋಟಿಯಲ್ಲಿ 195 ಕಿಲೋಮೀಟರ್ ರಾಜಕಾಲುವೆಗಳನ್ನು ಪುನರ್ ಅಭಿವೃದ್ಧಿ ಮಾಡಲು ಸೂಚಿಸಿದೆ. ಅಂದಾಜಿನ ಪ್ರಕಾರ, 173 ಕಿಮೀ ದೊಡ್ಡ ಚರಂಡಿಗಳಿಗೆ ಅಡ್ಡಗೋಡೆಗಳಿಲ್ಲ” ಎಂದು ಹೇಳಿದರು.
ಪ್ರವಾಹದಿಂದ ಪೀಡಿತವಾಗಿರುವ ಪ್ರದೇಶದ ನಿವಾಸಿಗಳು ಈ ಮರು ನಿರ್ಮಾಣದ ಕಾಮಗಾರಿಯನ್ನು ಅನಗತ್ಯ ಹಾಗೂ ಅಪೂರ್ಣವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನಿವಾಸಿ ಸತೀಶ್ ಮಾತನಾಡಿ, “ಈ ಹಿಂದೆ ನಮ್ಮ ಮನೆಗೆ ಒಂದು ಹನಿ ನೀರು ಕೂಡ ಬಂದಿರಲಿಲ್ಲ. ಬಿಬಿಎಂಪಿ ಇತ್ತೀಚೆಗೆ ಕಲ್ಲುಗಳಿಂದ ನಿರ್ಮಿಸಿದ ಚರಂಡಿಯನ್ನು ಒಡೆದು ಕಾಂಕ್ರೀಟ್ ಸಿಮೆಂಟ್ ಬಳಸಿ ಗೋಡೆ ನಿರ್ಮಿಸಲು ಆರಂಭಿಸಿದೆ. ಮುಂಗಾರು ಮಳೆ ಆರಂಭ ಆಗುವ ಮುನ್ನ ಈ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ, ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ನಮ್ಮ ಮನೆಯೊಳಗೆ ಪ್ರವಾಹದ ನೀರು ನುಗ್ಗಿ ತೊಂದರೆ ಅನುಭವಿಸಿದೇವು” ಎಂದು ಹೇಳಿದರು.
“ಬಿಬಿಎಂಪಿ ಚರಂಡಿ ನಿರ್ಮಿಸುವಾಗ ರಾಜಕಾಲುವೆಗಳ ಅಗಲವನ್ನು ಕಿರಿದುಗೊಳಿಸುತ್ತಿದೆ. ಬಿಬಿಎಂಪಿ ಎಂಜಿನಿಯರ್ಗಳು ಯೋಜನೆಯನ್ನು ಮೇಲ್ವಿಚಾರಣೆ ಮಾಡುತ್ತಿಲ್ಲ” ಎಂದು ಮಹದೇವಪುರ, ಕೆಆರ್ ಪುರಂ ಮತ್ತು ಹೆಣ್ಣೂರಿನ ನಿವಾಸಿಗಳು ಆರೋಪಿಸಿದರು.
ಮಂಗಳವಾರ ನಡೆದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚರಂಡಿಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ
ಧರೆಗುರುಳಿದ 350 ಮರಗಳು
ಕಳೆದ ಮೂರು ದಿನಗಳಲ್ಲಿ ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ 350 ಮರಗಳು ಧರೆಗುರುಳಿವೆ.
“ಭಾರೀ ಮಳೆಯಿಂದ ಬಿದ್ದಿರುವ ಮರ ಹಾಗೂ ಮರದ ಕೊಂಬೆಗಳನ್ನು ಪಾಲಿಕೆಯ ಅರಣ್ಯ ಇಲಾಖೆ ವತಿಯಿಂದ ತಂಡ ರಚಿಸಿ ಕ್ರೇನ್ಗಳ ಮೂಲಕ ತೆರವು ಕಾರ್ಯ ನಡೆಸಲಾಗುತ್ತಿದೆ. ಮರದ ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
“ಕಳೆದ 5 ದಿನಗಳಿಂದ ಗಾಳಿ ಮಳೆಗೆ ಅಂದಾಜು ಒಟ್ಟಾರೆ 255 ಮರಗಳು ಹಾಗೂ ಸುಮಾರು 1050 ರೆಂಬೆ, ಕೊಂಬೆಗಳು ಬಿದ್ದಿದ್ದು, ಅವುಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದಿರುವ ಸ್ವಲ್ಪ ಪ್ರಮಾಣದ ಕೊಂಬೆಗಳನ್ನು ತೆರವುಗೊಳಿಸಲಾಗುವುದು” ಎಂದರು.
“ಬೆಂಗಳೂರಿನ ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಸಂಜಯ್ ನಗರ, ಮಹಾಲಕ್ಷ್ಮಿ ಲೇಔಟ್, ಡಿ.ಜಿ.ಹಳ್ಳಿ ಸೇರಿದಂತೆ ನಗರದೆಲ್ಲೆಡೆ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಸುಮಾರು 73 ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಸಂತ್ರಸ್ತ ನಿವಾಸಿಗಳು ₹10,000 ಪರಿಹಾರ ಧನವನ್ನು ಪಡೆಯಬಹುದು” ಎಂದು ತಿಳಿಸಿದರು.