- 243 ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲು ಸಿದ್ಧತೆ ನಡೆಸಿದ ಬಿಬಿಎಂಪಿ
- ಕ್ಯಾಂಟೀನ್ನಲ್ಲಿ ಇನ್ನುಮುಂದೆ ರಾಗಿ ಮುದ್ದೆ, ರೋಟಿ ಕರಿ ನೀಡಲು ಸರ್ಕಾರ ಚಿಂತನೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೆಚ್ಚಿನ ಯೋಜನೆಯಾದ ಇಂದಿರಾ ಕ್ಯಾಂಟೀನ್ 2013ರಲ್ಲಿ ಜಾರಿಗೆ ಬಂದಿತು. ಕಾಂಗ್ರೆಸ್ ಸರ್ಕಾರದ ಅಧಿಕಾರದ ಅವಧಿಯಲ್ಲಿ ಮುನ್ನೆಲೆ ಇದ್ದ ಈ ಕ್ಯಾಂಟೀನ್ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮಲತಾಯಿ ಧೋರಣೆಗೆ ಒಳಗಾಯಿತು. ಇದೀಗ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದು, ಇಂದಿರಾ ಕ್ಯಾಂಟೀನ್ ಹೊಸ ರೂಪದೊಂದಿಗೆ ಮತ್ತೆ ಅಸ್ತಿತ್ವಕ್ಕೆ ಬರಲು ಸಜ್ಜಾಗಿದೆ.
ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅತೀ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ಈ ಯೋಜನೆ ಇಂದಿರಾ ಕ್ಯಾಂಟೀನ್. ಇಲ್ಲಿ ಹಲವು ಜನರಿಗೆ ನೆಚ್ಚಿನ ತಿಂಡಿ ಎಂದರೆ ಇಡ್ಲಿ. ಗುತ್ತಿಗೆದಾರರಿಗೆ ಕೋಟ್ಯಂತರ ಬಿಲ್ ಪಾವತಿ ಮಾಡದ ಹಿನ್ನೆಲೆ, ಗುತ್ತಿಗೆ ಪಡೆದ ಕಂಪನಿಗಳು ಕ್ಯಾಂಟೀನ್ಗಳಿಗೆ ಇಡ್ಲಿ ಸರಬರಾಜು ಮಾಡುವುದನ್ನು ನಿಲ್ಲಿಸಿದ್ದವು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ಕ್ಯಾಂಟೀನ್ಗಳಿಗೆ ಮರುಜೀವ ಸಿಕ್ಕಿದೆ. ಇದೀಗ, ಹೊಸ ಮೆನು ತಯಾರಾಗುತ್ತಿದ್ದು, ಕ್ಯಾಂಟೀನ್ನಲ್ಲಿ ಇನ್ನುಮುಂದೆ ರಾಗಿ ಮುದ್ದೆ, ರೋಟಿ ಕರಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆದೇಶದ ಬೆನ್ನಲ್ಲೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ಯಾಂಟೀನ್ಗಳನ್ನು ಮರು ಸ್ಥಾಪಿಸಲು ಸಿದ್ಧತೆ ನಡೆಸಿದ್ದು, ರಾಜಧಾನಿಯಲ್ಲಿ ವಾರ್ಡ್ವಾರು ಒಟ್ಟು 243 ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಡವರ ಫೈವ್ ಸ್ಟಾರ್ ಹೋಟೆಲ್ ಹಾಗೂ ಅಗ್ಗದ ದರದಲ್ಲಿ ನಗರದ ಜನತೆಗೆ ಆಹಾರಗಳನ್ನು ಒದಗಿಸುತ್ತಿದ್ದ ಇಂದಿರಾ ಕ್ಯಾಂಟಿನ್ನಲ್ಲಿ ರಾಗಿ ಮುದ್ದೆ, ರೋಟಿ ಕರಿ ನೀಡಲು ಚಿಂತನೆ ನಡೆದಿದ್ದು, ಇನ್ನು ಮುಂದೆ ಗ್ರಾಹಕರು ವೈವಿಧ್ಯ ಆಹಾರಗಳನ್ನು ಸವಿಯಬಹುದು.
ಈ ಹಿಂದೆ ಬೆಳಗ್ಗೆ ಉಪಾಹಾರಕ್ಕೆ ಇಡ್ಲಿ, ಉಪ್ಪಿಟ್ಟು, ರೈಸ್ ಬಾತ್, ಪೊಂಗಲ್, ಬಿಸಿಬೇಳೆ ಬಾತ್ ನೀಡಲಾಗುತ್ತಿದ್ದು, ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬರ್, ಮೊಸರನ್ನ ಇತ್ತು. ಇನ್ಮುಂದೆ ಇಂದಿರಾ ಕ್ಯಾಂಟೀನ್ನಲ್ಲಿ ಮೆನುಗಳ ಸಂಖ್ಯೆ ಏರಿಕೆಯಾಗಲಿದೆ. ಮೆನುವಿನಲ್ಲಿ ರಾಗಿ ಮುದ್ದೆ, ರೋಟಿ ಕರಿ ಇರಲಿದೆ.
ಇಂದಿರಾ ಕ್ಯಾಂಟೀನ್ನಲ್ಲಿ ರಾಗಿ ಮುದ್ದೆ ನೀಡಬೇಕು ಎಂಬುದು ಅನೇಕರ ಬೇಡಿಕೆ ಆಗಿತ್ತು. ಅದರಂತೆ ಕೊನೆಗೂ ಸಿದ್ದರಾಮಯ್ಯನವರ ಸರ್ಕಾರ ಜನರ ಬೇಡಿಕೆ ಈಡೇರಿಸಲು ಮುಂದಾಗಿದ್ದು, ಆಹಾರದ ಪ್ರಮಾಣ (ಕ್ವಾಂಟಿಟಿ), ಗುಣಮಟ್ಟ ಹೆಚ್ಚಿಸಲಿದೆ. ಇದರಿಂದ ಬೆಲೆ ಸಹ 5-10 ರೂಪಾಯಿ ಹೆಚ್ಚಾಗಬಹುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರ ಘೋಷಣೆ
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ವಿಜಯನಗರ ನಿವಾಸಿ ಲೋಕೇಶ್, “ಕಳೆದ ಹಲವು ವರ್ಷಗಳಿಂದ ಕಡಿಮೆ ಬೆಲೆಯಲ್ಲಿ ನಮಗೆ ಇಂದಿರಾ ಕ್ಯಾಂಟೀನ್ ಆಹಾರ ಒದಗಿಸುತ್ತಿತ್ತು. ಬೇರೆ ಊರಿನಿಂದ ದುಡಿಮೆಗಾಗಿ ಬೆಂಗಳೂರಿಗೆ ಬಂದಿದ್ದೆವು. ಹೊರಗಡೆ ಹೋಟೆಲ್ಗಳಲ್ಲಿ ಟೀ ಕುಡಿಯೋಣವೆಂದರೆ ₹15 ರಿಂದ ₹20 ನೀಡಬೇಕು. ಅದೇ ಕ್ಯಾಂಟೀನ್ನಲ್ಲಿ ₹5ಕ್ಕೆ ಹೊಟ್ಟೆ ತುಂಬ ತಿಂಡಿ ಸಿಗುತ್ತದೆ” ಎಂದರು.
“ಕಳೆದ ಕೆಲವು ತಿಂಗಳಿನಿಂದ ಇಡ್ಲಿ ಸಿಗುತ್ತಿರಲಿಲ್ಲ. ನನಗೆ ಇಡ್ಲಿ ತುಂಬಾ ಇಷ್ಟ. ₹5 ನೀಡಿದರೇ ನಾಲ್ಕು ಇಡ್ಲಿ ಕೊಡುತ್ತಾರೆ. ಅದೇ ಹೊರಗಡೆ ₹30 ಇದೆ. ಹಾಗಾಗಿ, ಮತ್ತೆ ಇಡ್ಲಿ ನೀಡಬೇಕು. ಜತೆಗೆ ರಾಗಿ ಮುದ್ದೆ, ರೋಟಿ ಕರಿ ನೀಡಿದರೆ ಅನುಕೂಲವಾಗುತ್ತದೆ” ಎಂದು ತಿಳಿಸಿದರು.
ಸುಂಕದಕಟ್ಟೆ ನಿವಾಸಿ ಆಟೋ ಚಾಲಕ ಮಂಜುನಾಥ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ನಮಗೆ ಇಂದಿರಾ ಕ್ಯಾಂಟೀನ್ ಫೈವ್ ಸ್ಟಾರ್ ಹೋಟೆಲ್ ದೊಡ್ಡ ಹೋಟೆಲ್ಗಳಿಗೆ ಹೋಗಿ ತಿನ್ನುವಷ್ಟು ಸ್ಥಿತಿವಂತರು ನಾವಲ್ಲ. ಕ್ಯಾಂಟೀನ್ನಲ್ಲಿ ಇಡ್ಲಿ ನೀಡುವುದನ್ನು ಮತ್ತೆ ಆರಂಭಿಸಬೇಕು. ಟೀ ನೀಡಿದರೇ ಇನ್ನೂ ಉತ್ತಮ” ಎಂದರು.