- 2010ರ ಸೆಪ್ಟೆಂಬರ್ನಲ್ಲಿ ತನಗೆ ಈ ವಿವಾಹ ಇಷ್ಟವಿಲ್ಲ ಎಂದ ಲಕ್ಷ್ಮಿ
- ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ರಾಜೇಶ್
ಪತ್ನಿಯನ್ನು ಕೊಲೆ ಮಾಡಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿಗೆ ಏಳು ವರ್ಷಗಳ ಕಠಿಣ ಶಿಕ್ಷೆಗೆ ಮಾರ್ಪಾಡು ಮಾಡಿ ಹೈಕೋರ್ಟ್ ಆದೇಶಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿಯ ಬೊಮ್ಮನಹಳ್ಳಿಯ ರಾಜೇಶ್ (39) ಎಂಬುವರು ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಕ್ರಮ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ಕೆ.ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿದೆ.
ಪತ್ನಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸಿ ಏಳು ವರ್ಷಗಳ ಕಠಿಣ ಶಿಕ್ಷೆ ನೀಡಿದೆ ಹಾಗೂ ಅಪರಾಧಿಯೂ ತನ್ನ ಹೆಣ್ಣು ಮಕ್ಕಳ ಹೆಸರಿಗೆ ₹3 ಲಕ್ಷ ಮೊತ್ತವನ್ನು ಠೇವಣಿಯಾಗಿ ಇರಿಸಬೇಕು ಎಂದು ಆದೇಶ ನೀಡಿದೆ.
ಆರೋಪಿಗೆ ಪತ್ನಿಯನ್ನು ಕೊಲೆ ಮಾಡಬೇಕೆಂಬ ಯಾವುದೇ ಉದ್ದೇಶ ಇರಲಿಲ್ಲ. ಇದು ಮುಂಚಿತವಾಗಿ ಕೊಲೆ ಮಾಡಲು ನಿರ್ಧರಿಸಿದ್ದಲ್ಲ. ಆರೋಪಿಯ ಪತ್ನಿ ಮತ್ತೊಬ್ಬರೊಂದಿಗೆ ಇರುವುದನ್ನು ಕಂಡು ಹಠಾತ್ ಪ್ರಚೋದನೆಯಿಂದ ಸ್ವಯಂ ನಿಯಂತ್ರಣ ಹಾಗೂ ಮಾನಸಿಕ ಸಮತೋಲನ ಕಳೆದುಕೊಂಡು ಈ ಹತ್ಯೆ ಮಾಡಿದ್ದಾರೆ. ಇದನ್ನು ಕೊಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷೆ ರದ್ದು ಮಾಡಬೇಕು ಎಂದು ಅಪರಾಧಿಯ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಅಪರಾಧಿಯ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಪೀಠ ಇದನ್ನು ಪರಿಗಣಿಸಿ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಆದೇಶಿಸಿದೆ.
ಏನಿದು ಹಿನ್ನೆಲೆ?
ಏಳು ವರ್ಷದ ಕಠಿಣ ಕಾರಾಗ್ರಹ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ ರಾಜೇಶ್ ಮೂಲತಃ ದೊಡ್ಡಬಳ್ಳಾಪುರದ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಬೊಮ್ಮನಹಳ್ಳಿ ನಿವಾಸಿ. 2010ರ ಅಕ್ಟೋಬರ್ 22ರಂದು ದೊಡ್ಡಬಳ್ಳಾಪುರದ ತಪಸೀಹಳ್ಳಿಯ ಲಕ್ಷ್ಮೀ ಎಂಬ ಮಹಿಳೆಯೊಂದಿಗೆ ವಿವಾಹವಾಗಿದ್ದನು.
2010ರ ಸೆಪ್ಟೆಂಬರ್ನಲ್ಲಿ ಲಕ್ಷ್ಮಿ ತನಗೆ ಈ ವಿವಾಹ ಇಷ್ಟವಿಲ್ಲ, ರಾಜೇಶನೊಂದಿಗೆ ಜೀವನ ನಡೆಸುವುದಿಲ್ಲ ಎಂದು ಹಿರಿಯರ ಸಮ್ಮುಖದಲ್ಲಿ ನಡೆದಿದ್ದ ಪಂಚಾಯಿತಿಯಲ್ಲಿ ಹೇಳಿದ್ದರು.
ಹಾಗೇಯೇ, ರಾಜೇಶ್ ಎರಡನೇ ಮದುವೆಯಾಗಲೂ ನನಗೆ ಯಾವುದೇ ಅಭ್ಯಂತರವಿಲ್ಲ ಎಂದು ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದರು. ಈ ವೇಳೆಗಾಗಲೇ ಲಕ್ಷ್ಮೀಗೆ ಒಂದು ಹೆಣ್ಣು ಮಗು ಜನಿಸಿತ್ತು. ಬಳಿಕ ರಾಜೇಶ್ ಎರಡನೇ ಮದುವೆಯಾಗಿದ್ದನು.
ಕೌಟುಂಬಿಕ ವ್ಯಾಜ್ಯದಲ್ಲಿ ರಾಜೇಶ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ ಸೆಕ್ಷನ್ 498ಎ ಅನುಸಾರ 2015ರಲ್ಲಿ ಲಕ್ಷ್ಮಿ ಪ್ರಕರಣ ದಾಖಲಿಸಿದ್ದರು. ಜೀವನ ನಿರ್ವಹಣೆಗಾಗಿ ಲಕ್ಷ್ಮಿ ಸಲ್ಲಿಸಿದ್ದ ಅರ್ಜಿಗೆ ಅನುಗುಣವಾಗಿ ನ್ಯಾಯಾಲಯ ಪ್ರತಿ ತಿಂಗಳೂ ₹2 ಸಾವಿರ ನೀಡುವಂತೆ ಆದೇಶಿಸಿತ್ತು.
ಬಳಿಕ ಗ್ರಾಮದ ಹಿರಿಯರು ಹಾಗೂ ಲಕ್ಷ್ಮೀ ಮನೆಯವರು ಲಕ್ಷ್ಮಿಗೆ ಬೇರೆ ಮನೆ ಕಟ್ಟಿಸಿಕೊಡುವಂತೆ ರಾಜೇಶ್ನಿಗೆ ಹೇಳಿ ರಾಜಿ ಪಂಚಾಯಿತಿ ಮಾಡಿದ್ದರು. ಅದರಂತೆ ರಾಜೇಶ್ ಲಕ್ಷ್ಮಿಗೆ ಹೊಸ ಮನೆ ಕಟ್ಟಿಸಿಕೊಟ್ಟಿದ್ದನು. ಇಬ್ಬರ ಜೊತೆಗೂ ಸಂಸಾರ ನಡೆಸುತ್ತಿದ್ದರು.
2018ರ ಫೆಬ್ರುವರಿ 8ರಂದು ಲಕ್ಷ್ಮಿ ತವರು ಮನೆಯಿಂದ ರಾಜೇಶ್ ಮನೆಗೆ ಬಂದಿದ್ದಳು. ಬೆಳಗಿನ ಜಾವ 4 ಗಂಟೆಯಲ್ಲಿ ಲಕ್ಷ್ಮಿ ಪಕ್ಕದಲ್ಲಿ ಇಲ್ಲದೇ ಇದ್ದುದನ್ನು ಗಮನಿಸಿದ್ದ ರಾಜೇಶ್ ಹೆಂಡತಿಯನ್ನು ಹುಡುಕಿಕೊಂಡು ಹೊರಟಿದ್ದನು.
ಈ ವೇಳೆ, ವಾಣಿಗರಹಳ್ಳಿ ಬಳಿ ಹೊಲದಲ್ಲಿ ಯಾರೋ ಮಾತನಾಡುವುದು ಕೇಳಿಸಿದೆ. ಒಳ ಹೋಗಿ ನೋಡಿದಾಗ, ಲಕ್ಷ್ಮಿ ಪರಪುರುಷನ ಜೊತೆಯಲ್ಲಿ ಇರುವುದನ್ನು ಕಂಡು ಕೋಪಗೊಂಡು ಮಹಿಳೆ ತೊಟ್ಟಿದ್ದ ವೇಲ್ನಿಂದಲೇ ಅವಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದನು.
ಈ ಸಂದರ್ಭದಲ್ಲಿ ಮಹಿಳೆಯ ಜೊತೆಗಿದ್ದ ಪರಪುರುಷ ಸ್ಥಳದಿಂದ ಪರಾರಿಯಾದನು. ಮೃತ ಲಕ್ಷ್ಮಿಯ ದೇಹವನ್ನು ರಾಜೇಶ್ ಅಲ್ಲೇ ಮರದ ಬುಡದಲ್ಲಿ ಎಲೆಗಳನ್ನು ಮುಚ್ಚಿ ಮನೆಗೆ ಬಂದಿದ್ದನು.
ಮರುದಿನ ಬೆಳಗ್ಗೆ ತನ್ನ ಬಾಲ್ಯದ ಗೆಳೆಯನ ಬಳಿ ಹೋಗಿ ನನ್ನ ಹೆಂಡತಿ ಕಾಣಿಸುತ್ತಿಲ್ಲ ಎಂದು ಹೇಳಿ, ಹೆಂಡತಿ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದನು. ಬಳಿಕ ಹೆಣವಿದ್ದ ಜಾಗಕ್ಕೆ ತೆರಳಿ ಅಡಿಕೆ ಸುಲಿಯುವ ಕತ್ತಿಯಿಂದ ಹೆಣವನ್ನು ನಾಲ್ಕು ಭಾಗಗಳಾಗಿ ತುಂಡರಿಸಿ ಅಲ್ಲೇ ಇದ್ದ ಗುಂಡಸಂದ್ರ ಕೆರೆ ಪೈಪ್ಲೈನ್ ಜಾಗದಲ್ಲಿ ನೆಲ ಅಗೆದು ಮಣ್ಣಿನಲ್ಲಿ ಹೂತು ಹಾಕಿದ್ದನು.
ಬಳಿಕ, ಮಾಡಿದ ಅಪರಾಧವನ್ನು ಮುಚ್ಚಿಡಲು ಮನಸಿಲ್ಲದೆ, ಪುನಃ ತನ್ನ ಗೆಳೆಯ ರಾಜಣ್ಣನ ಬಳಿ ಹೋಗಿ ನಡೆದ ಸಂಗತಿಯನ್ನೆಲ್ಲ ವಿವರಿಸಿ, ಇದನ್ನು ಪೊಲೀಸರಿಗೆ ತಿಳಿಸುವಂತೆ ಹೇಳಿದ್ದನು. ರಾಜಣ್ಣ ದಾಖಲಿಸಿದ ದೂರಿನ ಮೇರೆಗೆ ದೊಡ್ಡಬೆಳವಂಗಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿ ರಾಜೇಶನನ್ನು ಬಂಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ‘ಇಂದಿರಾ ಕ್ಯಾಂಟೀನ್’ನಲ್ಲಿ ಇನ್ಮುಂದೆ ರಾಗಿ ಮುದ್ದೆ, ರೋಟಿ ಕರಿ!
ನಂತರ ಮ್ಯಾಜಿಸ್ಟ್ರೇಟ್ ಸಮಕ್ಷಮದಲ್ಲಿ ಆರೋಪಿ ತುಂಡರಿಸಿ ಹೂತು ಹಾಕಿದ್ದ ದೇಹದ ಭಾಗಗಳನ್ನು ಹೊರ ತೆಗೆದು ತನಿಖೆ ಕೈಗೊಳ್ಳಲಾಗಿತ್ತು. ತನಿಖೆ ಪೂರ್ಣಗೊಂಡ ನಂತರ ಆರೋಪಿಯ ವಿರುದ್ಧ ಐಪಿಸಿ ಕಲಂ 302, 201 ಮತ್ತು 203ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ವಿಚಾರಣೆ ನಡೆಸಿದ್ದ ದೊಡ್ಡಬಳ್ಳಾಪುರ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಐಪಿಸಿ ಸೆಕ್ಷನ್ 302, 201 ಹಾಗೂ 203 ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹45 ಸಾವಿರ ದಂಡ ವಿಧಿಸಿ ಆದೇಶಿಸಿದ್ದರು. ಈ ಕುರಿತಂತೆ ರಾಜೇಶ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.