ರಾಜ್ಯ ಪೊಲೀಸ್ ಉಖ್ಯಸ್ಥ ಪ್ರವೀಣ್ ಸೂದ್ ಅವರು ಈ ತಿಂಗಳ ಕೊನೆಯಲ್ಲಿ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ನಿರ್ಗಮನದಿಂದ ತೆರವಾಗುವ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿ ಮತ್ತು ಐಜಿಪಿ) ಹುದ್ದೆಗೆ ಹೊಸ ಸರ್ಕಾರವು ಮತ್ತೊಬ್ಬರನ್ನು ಆಯ್ಕೆ ಮಾಡಬೇಕಾಗಿದೆ. ಅದಕ್ಕಾಗಿ, ಅಧಿಕಾರ ವಹಿಸಿಕೊಂಡು ಅರ್ಹ ಹಿರಿಯ ಐಪಿಎಸ್ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಲು ಮತ್ತು ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಲು ಕಾಂಗ್ರೆಸ್ ನಾಯಕರು ಕಾಯುತ್ತಿದ್ದಾರೆ.
ರಾಜ್ಯದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ಗೆ ಸ್ಪಷ್ಟ ಜನಾದೇಶ ನೀಡಿದ ಒಂದು ದಿನದ ನಂತರ ಸಿಬಿಐ ಉನ್ನತ ಹುದ್ದೆಗೆ ಸೂದ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಯ ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸೂದ್ ಅವರನ್ನು ಟೀಕಿಸಿದ್ದರು. ಸೂದ್ ಬಿಜೆಪಿ ಪರ ಅಧಿಕಾರಿಯಾಗಿರುವುದರಿಂದ ಅವರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದರು.
ಪಕ್ಷ ಅಧಿಕಾರಕ್ಕೆ ಬಂದ ನಂತರ ಸೂದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಶಿವಕುಮಾರ್, “ಸೂದ್ ಅವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ 25ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿಯವರ ವಿರುದ್ಧ ಒಂದೇ ಒಂದು ಪ್ರಕರಣವನ್ನು ದಾಖಲಿಸಿಲ್ಲ” ಎಂದು ಕಿಡಿಕಾರಿದ್ದರು.
ಸೂದ್ ಅವರ ವರ್ಗಾವಣೆ ಬೆನ್ನಲ್ಲೇ, ಹೊಸ ರಾಜ್ಯ ಸರ್ಕಾರವು ಕರ್ನಾಟಕದ ಡಿಜಿ ಮತ್ತು ಐಜಿಪಿ ಹುದ್ದೆಗೆ ಹಿರಿಯ ಅರ್ಹ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ. ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮೂರರಿಂದ ಐದು ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸುವ ಅವಕಾಶವನ್ನು ಹೊಂದಿದೆ. ಅವರಲ್ಲಿ ಒಬ್ಬರನ್ನು ನೇಮಕ ಮಾಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ?: ಸಾರ್ವಜನಿಕವಾಗಿ ಖಡ್ಗ ಜಳಪಿಸಿದ್ದ ಯತ್ನಾಳ್ ಬೆಂಬಲಿಗನ ಬಂಧನ: ಅಲೋಕ್ ಕುಮಾರ್
ರಾಜ್ಯ ಪೊಲೀಸ್ ಅಧಿಕಾರಿಗಳ ಜೇಷ್ಠತಾ ಪಟ್ಟಿಯ ಪ್ರಕಾರ, 1987ರ ಬ್ಯಾಚ್ನ ಐಪಿಎಸ್ ಅಧಿಕಾರಿ ಅಲೋಕ್ ಮೋಹನ್ ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ, ಮೋಹನ್ ಅವರು ಗೃಹರಕ್ಷಕರ ಡಿಜಿಪಿಯಾಗಿದ್ದಾರೆ. ಅವರು ಏಪ್ರಿಲ್ 2025ರಲ್ಲಿ ನಿವೃತ್ತರಾಗಲಿದ್ದಾರೆ.
ಪ್ರಸ್ತುತ ಡಿಜಿಪಿ (ತರಬೇತಿ) ಆಗಿ ಸೇವೆ ಸಲ್ಲಿಸುತ್ತಿರುವ 1989ರ ಬ್ಯಾಚ್ನ ಐಪಿಎಸ್ ಅಧಿಕಾರಿ ಪಿ ರವೀಂದ್ರನಾಥ್ ಅವರು ಎರಡನೇ ಹಿರಿಯ ಅಧಿಕಾರಿಯಾಗಿದ್ದಾರೆ. ಅವರು ಈ ವರ್ಷದ ಸೆಪ್ಟೆಂಬರ್ನಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಒಂದು ವೇಳೆ, ಅವರು ಆಯ್ಕೆಯಾದರೆ, ಅವರಿಗೆ ಡಿಜಿಪಿಯಾಗಿ ಐದು ತಿಂಗಳ ಅಧಿಕಾರಾವಧಿ ಮಾತ್ರ ಸಿಗಲಿದೆ.
ಬೆಂಗಳೂರು ನಗರ ಮಾಜಿ ಪೊಲೀಸ್ ಕಮಿಷನರ್ ಮತ್ತು ಡಿಜಿಪಿ (ನೇಮಕಾತಿ) ಕಮಲ್ ಪಂತ್ ನಂತರದ ಸಾಲಿನಲ್ಲಿದ್ದಾರೆ. ಅವರು ಜೂನ್ 2024ರಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಈ ವರ್ಷದ ಜನವರಿಯಲ್ಲಿ ಅವರು ಡಿಜಿಪಿಯಾಗಿ ಬಡ್ತಿ ಪಡೆದಿದ್ದಾರೆ. ಹೀಗಾಗಿ, ಸರ್ಕಾರವು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸಿ.ಎಚ್ ಪ್ರತಾಪ್ ರೆಡ್ಡಿ ಅವರನ್ನು ಪಟ್ಟಿಗೆ ಸೇರಿಸುವ ಸಾಧ್ಯತೆಗಳಿವೆ.