ಕೊರೊನಾ ಲಾಕ್ಡೌನ್ ಸಮಯದಲ್ಲಿ ಆರಂಭವಾದ ಕೃಪಾಂಕ ನೀಡುವ ಯೋಜನೆಯನ್ನು ಮತ್ತೆ ಜಾರಿ ಮಾಡಲು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಈಗಾಗಲೇ ಮಾ.31ರಿಂದ ಆರಂಭವಾಗಿದೆ. ಈ ಬಾರಿಯ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಭಾಷಾ ವಿಷಯಗಳಿಗೆ ಶೇ.10 ಮತ್ತು ಐಚ್ಛಿಕ ವಿಷಯಗಳಿಗೆ ಶೇ.8ರಷ್ಟು ಕೃಪಾಂಕ ನೀಡುವುದಾಗಿ ಮಂಡಳಿ ತಿಳಿಸಿದೆ.
ಫಲಿತಾಂಶ ಉತ್ತಮಗೊಳಿಸುವ ಕಾರಣದಿಂದ ಗರಿಷ್ಠ ಮೂರು ವಿಷಯಗಳಿಗೆ ಶೇ.10ರಷ್ಟು ಕೃಪಾಂಕ ನೀಡುವ ಮಾನದಂಡ ಅನುಸರಿಸಿಕೊಂಡು ಜಾರಿ ಮಾಡಲಾಗುತ್ತಿದೆ.
ಈ ಹಿಂದೆ ಕೋವಿಡ್ನಿಂದಾಗಿ ಶಾಲೆಗಳು ಆರಂಭವಾಗದೆ, ಭೌತಿಕ ತರಗತಿಗಳು ನಡೆಯದಿದ್ದ ಕಾರಣ ಮಕ್ಕಳ ಕಲಿಕೆಯಲ್ಲಿ ಹಿನ್ನಡೆ ಉಂಟಾಗಿತ್ತು. ಹಾಗಾಗಿ, 2021ರಲ್ಲಿ ಮಂಡಳಿಯು ಶೇ.5ರಷ್ಟು ನಿಡುತ್ತಿದ್ದ ಕೃಪಾಂಕವನ್ನು ಶೇ.10ಕ್ಕೆ ಹೆಚ್ಚಿಸಿತ್ತು.
2021ರ ವಾರ್ಷಿಕ ಪರೀಕ್ಷೆಯನ್ನು ಎರಡೇ ದಿನದಲ್ಲಿ ಮುಗಿಸಿ ಸಾಮೂಹಿಕವಾಗಿ ಎಲ್ಲರನ್ನೂ ಉತ್ತೀರ್ಣಗೊಳಿಸಿದ್ದರಿಂದ ಆಗ ಕೃಪಾಂಕ ನೀಡುವ ಪ್ರಶ್ನೆ ಉದ್ಭವಿಸಿರಲಿಲ್ಲ. ಆದರೆ, ನಂತರ ನಡೆದ ಪೂರಕ ಪರೀಕ್ಷೆಯಲ್ಲಿ ಶೇ.10 ಕೃಪಾಂಕ ನೀಡಲಾಗಿತ್ತು.ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಕೃಪಾಂಕ ನೀಡುವ ವಿಚಾರ ನಿಯಮಾವಳಿಯಲ್ಲೇ ಇದೆ. ಅದು ಈ ವರ್ಷವೂ ಮುಂದುವರೆಯುತ್ತದೆ.
ಕೃಪಾಂಕವನ್ನು ನೀಡುವುದು ಹೇಗೆ?
ವಿದ್ಯಾರ್ಥಿಯು 625 ಅಂಕಕ್ಕೆ 219ಕ್ಕಿಂತ ಕಡಿಮೆ ಅಂಕ ಗಳಿಸಿ ಶೇ.35 ಪಡೆಯದೆ ಅನುತ್ತೀರ್ಣನಾಗಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ತೇರ್ಗಡೆಯಾಗುವಂತೆ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಯ ಸೂಚನೆಯಂತೆ ಈ ನಿಯಮ ಜಾರಿ ಮಾಡಲಾಗಿದೆ ಎಂದು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೇಳಿದೆ.
ಈ ಸುದ್ದಿ ಓದಿದ್ದೀರಾ?: ಮೊದಲ ದಿನದ ಎಸ್ಎಸ್ಎಲ್ಸಿ ಪರೀಕ್ಷೆ; ಶೇ 98.48 ಹಾಜರಾತಿ