ಮೋದಿ ಬಗ್ಗೆ ಎಲ್ಲರಿಗೂ ಅಭಿಮಾನವಿದೆ. ಆದರೆ, ಹಾಸನ ಜಿಲ್ಲೆಗೆ ಯಾರೇ ಬಂದು ಹೋದರು ನಮ್ಮ ಜೆಡಿಎಸ್ ಶಕ್ತಿ ಕುಗ್ಗಿಸಲು ಅಸಾಧ್ಯವೆಂದು ಶಾಸಕ ಕೆ.ಎಸ್ ಲಿಂಗೇಶ್ ಹೇಳಿದರು.
ವಿಧಾನಸಭಾ ಚುನಾವಣೆಯ ಹಿನ್ನೆಲೆ ಜೆಡಿಎಸ್ ವತಿಯಿಂದ ಬೇಲೂರು ಪುರಸಭೆ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಈ ದೇಶಕ್ಕೆ ಎಚ್.ಡಿ ದೇವೇಗೌಡರು ಪ್ರಧಾನಿಯಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅಲ್ಪಾವಧಿಯಲ್ಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಜಿಲ್ಲೆಗೆ ಅಲ್ಲದೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅದರಂತೆ ಮೋದಿ ಬಗ್ಗೆ ಗೌರವವಿದೆ. ಜಿಲ್ಲೆಗೆ ಯಾರೇ ಬಂದು ಹೋಗಲಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರ ಶಕ್ತಿಯನ್ನು ಕುಗ್ಗಿಸಲು ಅಸಾಧ್ಯ” ಎಂದರು.
“ಮೋದಿ ಜಿಲ್ಲೆಗೆ ಬಂದಾಕ್ಷಣ ಬೇಲೂರು ಬಿಜೆಪಿ ಪಾಲಾಗುತ್ತದೆ ಎನ್ನುವುದು ಅವರ ಭ್ರಮೆ. ಮೋದಿ ಭಾಷಣ ಏನಿದ್ದರೂ ಕೇಂದ್ರಕ್ಕೆ ಸೀಮಿತ. ಇಲ್ಲಿ ಕುಮಾರಸ್ವಾಮಿ, ರೇವಣ್ಣ ಅವರೇ ನಾಯಕರು. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಂಚರತ್ನ ಯಾತ್ರೆಯಿಂದ ರಾಜ್ಯದ ಜನತೆಗೆ ಅನುಕೂಲವಾಗುತ್ತದೆ. ನೀರಾವರಿ, ಶಿಕ್ಷಣ, ಕೃಷಿ, ಆರೋಗ್ಯ ಸೇರಿದಂತೆ ಜನಸಾಮಾನ್ಯರಿಗೆ ಅವಶ್ಯಕತೆ ಇರುವ ಹಲವಾರು ಯೋಜನೆಗಳನ್ನು ಕುಮಾರಣ್ಣ ಗಮನದಲ್ಲಿಟ್ಟುಕೊಂಡಿದ್ದಾರೆ. ಅವುಗಳನ್ನು ಜಾರಿಗೆ ತರಲು ಜೆಡಿಎಸ್ ಬೆಂಬಲಿಸಬೇಕು” ಎಂದು ಮನವಿ ಮಾಡಿದರು.
“ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ನನ್ನನ್ನು ಮತ್ತೊಮ್ಮೆ ಶಾಸಕನಾಗಲು ನಿಮ್ಮ ಸಹಕಾರ, ಬೆಂಬಲ ಅಗತ್ಯ, ಬೇಲೂರು ತಾಲೂಕನ್ನು ಇನ್ನೂ ಅಭಿವೃದ್ಧಿಪಡಿಸಬೇಕಿದೆ. ಹಾಗಾಗಿ ಮತ್ತೊಮ್ಮೆ ಅವಕಾಶ ಕೋರುತ್ತಿದ್ದೇನೆ. ಅಲ್ಲದೆ ನಾನು ಸ್ಥಳೀಯ ಅಭ್ಯರ್ಥಿ, ಬೇಲೂರಿನವನು ನಿಮ್ಮ ಮನೆಮಗನಾದ ನನ್ನನ್ನು ಆಶೀರ್ವದಿಸಿ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಭಾಲ್ಕಿ ಕ್ಷೇತ್ರ | ‘ಕೈ’ ಭ್ರದಕೋಟೆಯಲ್ಲಿ ‘ಕಮಲ’ ಕಮಾಲ್; ದಾಯಾದಿಗಳ ಕಾಳಗ
“ಜೆಡಿಎಸ್ ಅಧಿಕಾರಕ್ಕೆ ಬಂದರೆ ಇಡೀ ಜಿಲ್ಲೆ ಅಲ್ಲದೆ ರಾಜ್ಯದ ಅಭಿವೃದ್ಧಿ ಸಾಧ್ಯ. ಕುಮಾರಸ್ವಾಮಿ ಅಲ್ಪ ಅವಧಿಯಲ್ಲಿ ಆಡಳಿತ ನಡೆಸಿದರೂ ರಾಜ್ಯದ ಜನತೆ ಮೆಚ್ಚುವ ಕೆಲಸ ಮಾಡಿದ್ದಾರೆ. ನೀವು ಕಾಂಗ್ರೆಸ್ಸಿಗೆ ವೋಟ್ ಹಾಕಿದರೆ ಬಿಜೆಪಿಗೆ ಹಾಕಿದಂತೆ ಇದನ್ನು ಯಾರು ಮರೆಯಬಾರದು” ಎಂದು ಪುರಸಭೆ ಮಾಜಿ ಅಧ್ಯಕ್ಷ ತಜ್ಜಮುಲ್ಲಪಾರ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಟಿ.ಎ. ಶ್ರೀನಿಧಿ, ಸದಸ್ಯ ಜಗದೀಶ್, ನಗರ ಪ್ರಧಾನ ಕಾರ್ಯದರ್ಶಿ ಖಾದರ್, ಸುರೇಶ್, ಮಂಜುನಾಥ್, ಅಸ್ಲಾಂಪಾಷ, ಆರೀಫ್, ನವೀದ್, ಜಮೀಲ್ ಇತರರು ಇದ್ದರು.