- ಬೊಮ್ಮಾಯಿ ಅವರಿಗೆ ಕಡಿಮೆ ಸಮಯ ಸಿಕ್ಕಿದೆ ಎಂದ ಸುದೀಪ್
- ʼಬೊಮ್ಮಾಯಿ ಸರ್ಕಾರದಲ್ಲಿ ಅಪರಾಧ ಸಂಖ್ಯೆ ಕಡಿಮೆ ಆಗಿದೆʼ
ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ನಾಮಪತ್ರ ಕೇವಲ ಶಾಸಕ ಸ್ಥಾನಕ್ಕೆ ಮಾತ್ರವಲ್ಲ, ಮುಂದಿನ ಐದು ವರ್ಷಗಳ ಕಾಲ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದರು.
ಬುಧವಾರ ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
“ಬೊಮ್ಮಾಯಿ ಅವರು ಬಡವರಿಗೆ 12 ಸಾವಿರ ಮನೆ ನಿರ್ಮಾಣ ಹಾಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಸುದೀಪ್ ಅವರು ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಮೆಚ್ಚಿದ್ದಾರೆ. ಅಲ್ಲದೇ ಬೊಮ್ಮಾಯಿ ಅವರಿಗೆ ಕಡಿಮೆ ಸಮಯ ಸಿಕ್ಕಿದೆ ಇನ್ನಷ್ಟು ಸಮಯ ಬೇಕಿದೆ ಎಂದೂ ಸುದೀಪ್ ಬಯಕೆ ವ್ಯಕ್ತಪಡಿಸಿದ್ದಾರೆ” ಎಂದರು.
ಕಾಂಗ್ರೆಸ್ ಅಂದ್ರೆ ಕಮಿಷನ್, ಕರಪ್ಷನ್
ಕಾಂಗ್ರೆಸ್ ಅಂದ್ರೆ ಕರಪ್ಷನ್, ಕಮಿಷನ್, ಕ್ರಿಮಿನಲೈಸೇಷನ್. ಕಾಂಗ್ರೆಸ್ ನಾಯಕರು ನಾಯಕರಲ್ಲ. ಅವರು ಎಟಿಎಂ ಮಷಿನ್ ನಡೆಸೋ ಜನರು. ಎಟಿಎಂ ಅಂದರೆ ಆಟೋಮ್ಯಾಟಿಕ್ ಟ್ರಾನ್ಸಫರ್ ಆಫ್ ಮನಿ. ಕಾಂಗ್ರೆಸ್ ಅವರನ್ನು ಇಲ್ಲಿ ಕೂರಿಸಿದರೆ ಮೋದಿ ಅವರು ರಾಜ್ಯಕ್ಕೆ ಕಳಿಸಿದ ಹಣವನ್ನು ಇವರು ಡೆಲ್ಲಿ ಕಾಂಗ್ರೆಸ್ಗೆ ಕಳುಹಿಸುತ್ತಾರೆ. ಇಂತಹ ಸರ್ಕಾರ ನಿಮಗೆ ಬೇಕಾ? ಮೋದಿ ಕಳಿಸೋ ಹಣ ರಾಜ್ಯದ ಅಭಿವೃದ್ಧಿಗೆ ಸದ್ಬಳಕೆ ಆಗಬೇಕು ಅಂದರೆ ನೀವು ಬಿಜೆಪಿಗೆ ಮತ ಹಾಕಿ” ಎಂದು ಜೆ ಪಿ ನಡ್ಡಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಚಾಮರಾಜನಗರದಲ್ಲಿ ವಾಟಾಳ್ ಸ್ಪರ್ಧೆ; ಸೋಮಣ್ಣಗೆ ಮತ್ತೊಂದು ಸವಾಲು!
ರಾಜ್ಯದಲ್ಲಿ ಶಾಂತ ವಾತಾವರಣ ಇದೆ
“ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿದೆ. ಸಿದ್ದರಾಮಯ್ಯ ಪಿಎಫ್ಐ ಬ್ಯಾನ್ ಮಾಡಿದ್ದನ್ನು ಹಿಂಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಪಿಎಫ್ಐ ಬ್ಯಾನ್ ಮುಂದುವರೆಯಬೇಕು ಅಂದರೆ ಕಮಲದ ಗುರುತಿಗೆ ಮತ ನೀಡಿ. ಬೊಮ್ಮಾಯಿ ಸರ್ಕಾರದಲ್ಲಿ ಅಪರಾಧ ಸಂಖ್ಯೆ ಕಡಿಮೆ ಆಗಿದೆ. ಇಂದು ರಾಜ್ಯದಲ್ಲಿನ ಅನೇಕ ಕ್ರಿಮಿನಲ್ಗಳು ಜೈಲಿನಲ್ಲಿದ್ದಾರೆ. ರಾಜ್ಯದಲ್ಲಿ ಶಾಂತಿ ಮತ್ತು ವಿಕಾಸಕ್ಕಾಗಿ ಕಮಲಕ್ಕೆ ಮತ ಹಾಕಬೇಕು. ಬೊಮ್ಮಾಯಿ ಅವರನ್ನು ನೀವು ಈಗಾಗಲೇ ಗೆಲ್ಲಿಸಿದ್ದೀರಿ” ಎಂದರು.