- ಕಾಂಗ್ರೆಸ್ಸಿಗರ ನಾಮಪತ್ರ ತಿರಸ್ಕಾರ ಮಾಡಲು ಆಯೋಗಕ್ಕೆ ಬಿಜೆಪಿ ಮನವಿ
- ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೇಣಿಗೆಯ ದೂರು ನೀಡಿದ ಕರಂದ್ಲಾಜೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಎದುರಾಗಿದ್ದ ನಾಮಪತ್ರ ತಿರಸ್ಕಾರದ ಭೀತಿ ಈಗ ಕಾಂಗ್ರೆಸ್ ಅಭ್ಯರ್ಥಿಗಳೆಲ್ಲರಿಗೂ ಎದುರಾಗಿದೆ.
ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ನೀಡಿರುವ ದೂರು ಇಂತಹದ್ದೊಂದು ಆತಂಕವನ್ನು ಸೃಷ್ಟಿಸಿದೆ.
ದೇಶದಲ್ಲಿ ಯಾವುದೇ ಪಕ್ಷದಿಂದ ತನ್ನ ಅಭ್ಯರ್ಥಿಗಳಿಂದ ಹಣವನ್ನು ಪಡೆದು ಬಿ ಫಾರಂ ನೀಡುವಂತಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಕೆಲಸ ಮಾಡಿದ್ದಾರೆ.
ಚುನಾವಣೆಗೆ ನಿಂತ ಪಕ್ಷದ ಎಲ್ಲ ಅಭ್ಯರ್ಥಿಗಳಿಂದ ತಲಾ 2 ಲಕ್ಷ ರೂ. ಹಣವನ್ನು ಪಡೆದು ಬಿ ಫಾರಂ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದೂರು ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಹಣವನ್ನ ತೆಗೆದುಕೊಂಡು ಅಪ್ಲಿಕೇಶನ್ ಕೊಟ್ಟು, ಬಿ ಫಾರಂ ವಿತರಿಸಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬಿ ಫಾರಂ ಕೊಡಲು ನಿಯೋಜಿತರಾಗಿದ್ದರು.
ಯಾರಿಗೆ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಬೇಕು, ಅವರು ಅರ್ಜಿ ಹಾಕಬೇಕು ಎಂದು ಹೇಳಿದ್ದರು. ಹಾಗೆಯೇ ಇದರ ವಿತರಣೆ ವೇಳೆ ಪ್ರತಿ ಅರ್ಜಿಗೆ 2ಲಕ್ಷ ಹಣ ಪಾವತಿಸಿಕೊಂಡಿದ್ದಾರೆ.
ಇಲ್ಲಿಯವರೆಗೆ ಆ ಪಕ್ಷ 1,350 ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದೆ. ಇದು ಜನಪ್ರತಿನಿಧಿ ಕಾಯ್ದೆ 171ಡಿ ಪ್ರಕಾರ ಅಪರಾಧ. ಈ ಕಾಯ್ದೆಯನ್ನು ಮುಂದಿಟ್ಟುಕೊಂಡು ನಾವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ ಎಂದು ಕೇಂದ್ರ ಸಚಿವೆ ಮಾಹಿತಿ ನೀಡಿದರು.
ಕಾಂಗ್ರೆಸ್ ಪಕ್ಷಾಧ್ಯಕ್ಷರೇ ಹೇಳಿಕೊಂಡಿರುವಂತೆ ಅರ್ಜಿ ವಿತರಣೆಯಿಂದ 23 ಕೋಟಿ ಹಣ ಸಂಗ್ರಹ ಆಗಿದೆ. ಕಾನೂನಾತ್ಮಕವಾಗಿ ಇದು ತಪ್ಪಾಗಲಿದೆ. ಯಾರು ಹಣ ಕೊಟ್ಟು ಬಿ ಫಾರಂ ಪಡೆದಿರುವುದು ಹಣಕ್ಕೆ ಬಿ ಫಾರಂ ವಿತರಿಸುವುದೂ ಅಪರಾಧವಾಗಲಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ 224 ಅಭ್ಯರ್ಥಿಗಳ ಬಿ ಫಾರಂಗಳನ್ನು ಪೀಪಲ್ ರೆಪ್ರೆಸೆಂಟೇಟಿವ್ಸ್ ಕಾಯ್ದೆ ಪ್ರಕಾರ ತಿರಸ್ಕಾರ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಈ ಸುದ್ದಿ ಓದಿದ್ದೀರಾ?:ಡಿಕೆಶಿ ನಾಮಪತ್ರ ಅಂಗೀಕಾರ; ಕನಕಪುರದಲ್ಲಿ ಡಿ ಕೆ ಶಿವಕುಮಾರ್ ಸ್ಪರ್ಧೆ ಖಚಿತ
ಕಾಂಗ್ರೆಸ್ ಹಣ ಪಡೆದಿದ್ದೇಕೆ?:
ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಾಣದ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಅರ್ಜಿ ಪಡೆಯಲು ತಲಾ 1 ಸಾವಿರ ರೂಪಾಯಿ ದರ ನಿಗದಿ ಮಾಡಿದ್ದರು.
ಅರ್ಜಿ ಸಲ್ಲಿಕೆ ವೇಳೆ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ತಲಾ 2 ಲಕ್ಷ ರೂಪಾಯಿ ದೇಣಿಗೆ ಕೊಡಲು ಸೂಚಿಸಿದ್ದರು. ಅದರಂತೆ ಅಭ್ಯರ್ಥಿಗಳೆಲ್ಲ ದೇಣಿಗೆ ನೀಡಿ ಭಿ ಪಾರಂ ಪಡೆದುಕೊಂಡಿದ್ದರು.
ಕಾಂಗ್ರೆಸ್ನ ಈ ದೇಣಿಗೆ ಸಂಗ್ರಹ ವಿಚಾರವೇ ಬಿಜೆಪಿ ಪಾಲಿನ ಚುನಾವಣಾ ಅಸ್ತ್ರವಾಗಿ ಬದಲಾಗಿದೆ. ವಿಪಕ್ಷದ ಮೇಲೆ ಪ್ರಯೋಗಿಸಿರುವ ಕಮಲ ಪಕ್ಷದ ದೂರಿನ ಬಾಣಕ್ಕೆ ಚುನಾವಣಾ ಆಯೋಗ ಯಾವ ಉತ್ತರ ನೀಡುತ್ತದೆ ಎನ್ನುವುದೇ ಈಗ ಕುತೂಹಲದ ಸಂಗತಿ.