- ಬೃಹತ್ ರ್ಯಾಲಿಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
- ಚೆಕ್ಪೋಸ್ಟ್ಗಳಲ್ಲಿ ನಡೆಯುತ್ತಿರುವ ವಾಹನಗಳ ತಪಾಸಣೆ
ವಿಧಾನಸಭಾ ಚುನಾವಣೆಯ ದಿನಾಂಕ ಈಗಾಗಲೇ ನಿಗದಿಯಾಗಿದ್ದು, ನೀತಿ ಸಂಹಿತೆಯೂ ಜಾರಿಯಲ್ಲಿದೆ. ಈ ವೇಳೆ ಯಾವ ಅಕ್ರಮವೂ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹಾಸನ ಜಿಲ್ಲೆಯ ಹಲವೆಡೆ ಚೆಕ್ಪೋಸ್ಟ್ಗಳನ್ನು ತೆರೆದು ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಚೆಕ್ಪೋಸ್ಟ್ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಈ ನಡುವೆ, ಹಾಸನ ನಗರದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ, ಶಾಸಕ ಪ್ರೀತಂ ಗೌಡ ಬೃಹತ್ ರ್ಯಾಲಿ ನಡೆಸಿದ್ದಾರೆ. ರ್ಯಾಲಿಗೆ ಸರಿಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನ ಸೇರಿರುವುದಾಗಿ ಮಾತುಗಳು ಕೇಳಿಬರುತ್ತಿವೆ. ಐವತ್ತು ಸಾವಿರಕ್ಕೂ ಅಧಿಕ ಮಂದಿ ಸುಮ್ಮನೇ ಬಂದಿಲ್ಲ. ಒಬ್ಬರಿಗೆ ₹500ರಿಂದ ₹1000 ಹಣ ಕೊಟ್ಟು ಕರೆದುಕೊಂಡು ಬಂದಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
“ಐವತ್ತು ಸಾವಿರಕ್ಕೂ ಹೆಚ್ಚಿನ ಜನಕ್ಕೆ ಹಂಚುವ ಹಣ ಎಲ್ಲಿಂದ ಬಂತು..? ಈಗ ಇರುವ ಚೆಕ್ ಪೋಸ್ಟ್ಗಳನ್ನು ದಾಟಿಕೊಂಡು ಅಕ್ರಮ ಹಣ ಕ್ಷೇತ್ರಕ್ಕೆ ಬಂದಿತೇ..? ಅಷ್ಟೂ ಮಂದಿಗೂ ಹಂಚಿರುವ ಟೋಪಿಗಳು ಎಲ್ಲಿಂದ ಬಂದವು” ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಹೆಸರು ಹೇಳಲಿಚ್ಛಿಸದ ಹಾಸನ ನಿವಾಸಿಯೊಬ್ಬರು ಈ ದಿನ.ಕಾಮ್ ಜೊತೆ ಮಾತನಾಡಿದ್ದು, “ಟೋಪಿಗಳನ್ನು ಕ್ಷಣದಲ್ಲೇ ತರಿಸಿದ್ದಾರೆ ಅಂದರೆ ಸಹಸ್ರಾರು ಟೋಪಿಗಳನ್ನು ಹೇಗೆ ತರಿಸಲಾಯಿತು? ಅಥವಾ ಈ ಮೊದಲೇ ಎಲ್ಲಾದರೂ ಸ್ಟಾಕ್ ಮಾಡಿದ್ದರಾ? ಹಾಗೆ ಮಾಡಿದ್ದರೆ ಯಾಕೆ ಅದನ್ನು ಅಧಿಕಾರಿಗಳು ಪತ್ತೆ ಹಚ್ಚಿಲ್ಲ?” ಎಂದು ಪ್ರಶ್ನಿಸಿದ್ದಾರೆ.
“ಹಳೆಬೀಡು, ಬೇಲೂರುಗಳಲ್ಲಿ ಇದೇ ಪಕ್ಷದ ಅಭ್ಯರ್ಥಿಯದ್ದು ಎಂದು ತಿಳಿದುಬಂದಿದ್ದ ವಸ್ತುಗಳನ್ನು ಗೊಡೌನ್ಗಳಲ್ಲಿ ವಶ ಪಡಿಸಿಕೊಳ್ಳಲಾಗಿತ್ತು. ಪುನಃ ಇಲ್ಲಿ ಹೇಗೆ ಬಂದವು? ಟೋಪಿಗಳನ್ನು ಕೊಂಡು ತಂದ ಬಿಲ್ ತೋರಿಸಬಲ್ಲರೇ? ಊಟ ಕೂಡ ಪ್ಯಾಕೆಟ್ ಮೂಲಕ ಹಂಚುವುದು ಎಲ್ಲೆಡೆ ಕಾಣುತ್ತಿತ್ತು. ಅದರ ಖರ್ಚಿನ ವಿವರವೇನು?” ಎಂದು ಅವರು ಕೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ : ಹಾಸನಕ್ಕೆ ಅಭ್ಯರ್ಥಿಯಾದ ಸ್ವರೂಪ್
ಒಟ್ಟಾರೆಯಾಗಿ ಕೋಟಿಗಳ ಲೆಕ್ಕದಲ್ಲಿ ಹಣ ಖರ್ಚು ಮಾಡಲಾಗಿದೆ. ಈ ಚುನಾವಣಾ ನೀತಿಸಂಹಿತೆ ಕಾಲದಲ್ಲಿ ಹೀಗೆ ಲೆಕ್ಕವಿಲ್ಲದೇ ಕಾರ್ಯಕ್ರಮ ನಡೆಸಲು ಸಾಧ್ಯವೇ? ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ.
“ಹೇಗಾದರೂ ರಾಜಕೀಯ ಪ್ರಚಾರ ಮಾಡಿಕೊಳ್ಳಲಿ. ಆದರೆ, ಕೋಟಿಗಟ್ಟಲೆ ಹಣದ ಲೆಕ್ಕ ಪತ್ರಗಳು ತಿಳಿಯದಿದ್ದಲ್ಲಿ ಚುನಾವಣೆ ಹಿಡಿತಕ್ಕೆ ಸಿಗದಂತಾಗುತ್ತದೆ” ಎಂಬುದು ಹಾಸನ ನಗರದ ಜನಸಾಮಾನ್ಯರ ಅಭಿಪ್ರಾಯವಾಗಿದೆ.