- ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆ
- ಮಂಗಳೂರು ಉತ್ತರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ
ಹಣಬಲಕ್ಕಾಗಿ ನನ್ನ ಟಿಕೆಟ್ ತಪ್ಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಿಷ್ಠರಿಗೆ ಮಂಗಳೂರು ಉತ್ತರದ ಟಿಕೆಟ್ ಕೊಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮೊಯಿದ್ದೀನ್ ಬಾವಾ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ವಿರುದ್ಧ ಮುನಿಸಿಕೊಂಡಿರುವ ಮೊಯಿದ್ದೀನ್ ಬಾವಾ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ.
ಬುಧವಾರ ರಾತ್ರಿ ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆವರೆಗೂ ಕಾದು ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅವರು ಜೆಡಿಎಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.
ಇಂದು (ಏಪ್ರಿಲ್ 20) ತಮ್ಮ ಶಾಸಕ ಸ್ಥಾನದೊಂದಿಗೆ ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡಲಿದ್ದಾರೆ.
ಹಾಗೆಯೇ ಮಧ್ಯಾಹ್ನದ ವೇಳೆಗೆ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಬಳಿಕ ಆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಕಳೆದ ರಾತ್ರಿ ಪಟ್ಟಿ ಬಿಡುಗಡೆಯಾದ ವೇಳೆಯೇ ಜೆಡಿಎಸ್ ಪ್ರಮುಖರ ಜೊತೆ ಮಾತುಕತೆ ನಡೆಸಿದ ಮೊಯಿದ್ದೀನ್ ಬಾವಾ, ಪಕ್ಷ ಸೇರುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಒಪ್ಪಿದ ಜಾತ್ಯತೀತ ಪಕ್ಷ ಪ್ರಮುಖರು ಅವರಿಗೆ ಮಂಗಳೂರು ಉತ್ತರದ ಟಿಕೆಟ್ ಘೋಷಿಸಿ ನಾಮಪತ್ರ ಸಲ್ಲಿಸಲು ತಿಳಿಸಿದ್ದಾರೆ.
ಈದಿನ.ಕಾಮ್ನೊಂದಿಗೆ ಮಾತನಾಡಿದ ಮೊಯಿದ್ದೀನ್ ಬಾವಾ ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿದು, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದರೂ ಟಿಕೆಟ್ ನೀಡದೆ ಇರುವುದು ಬೇಸರ ತರಿಸಿದೆ.
ನಾನು ಈ ರಂಝಾನ್ ಮಾಸದಲ್ಲಿ ಉಪವಾಸ ಹಿಡಿದು ಟಿಕೆಟ್ಗಾಗಿ ಎಲ್ಲ ನಾಯಕರ ಬಳಿ ಬೇಡಿದೆ. ಮನೆಯಲ್ಲಿ ಕುಳಿತು ಸಣ್ಣ ಸಣ್ಣ ಜಖಾತ್ ಕೊಡುವ ಈ ತಿಂಗಳಿನಲ್ಲಿ ನನಗೆ ಬೇಡುವ ರೀತಿ ಮಾಡಿದ್ರು. ಕಾಂಗ್ರೆಸ್ ನನ್ನನ್ನು ಬಳಸಿಕೊಂಡು ಕೈಬಿಟ್ಟಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?:ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ; ಮಂಗಳೂರು ಉತ್ತರದಲ್ಲಿ ಮೊಯಿದ್ದೀನ್…
78% ಜನರು, ಕಾರ್ಯಕರ್ತರು ನನಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದರು. ಆದರೆ 7% ಬೆಂಬಲ ಇದ್ದವರಿಗೆ ಟಿಕೆಟ್ ಕೊಡಲಾಗಿದೆ. ಎರಡೆರಡು ಭಾರೀ ಬಿ ಫಾರಂನಿಂದ ನನ್ನ ಹೆಸರನ್ನು ತಪ್ಪಿಸಿದ್ದಾರೆ. ಹಣ ಬಲಕ್ಕೆ ಟಿಕೆಟ್ ನೀಡಲಾಗಿದೆ ಎಂದು ಬಾವಾ ಆರೋಪಿಸಿದರು.
ಹೀಗಾಗಿ ಮನನೊಂದು ಜೆಡಿಎಸ್ ಸೇರುತ್ತಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ಘೋಷಿಸಿದ ಪಕ್ಷಕ್ಕಾಗಿ ನಾನು ದುಡಿಯುವೆ ಎಂದು ಅವರು ಹೇಳಿದರು.