ಬಳ್ಳಾರಿ ಜಿಲ್ಲೆಯನ್ನು ಕಳೆದುಕೊಂಡಿರುವುದು ರೆಡ್ಡಿಗಳ ಪಾಲಿಗೆ ದೊಡ್ಡ ನಷ್ಟವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ರೆಡ್ಡಿ ಸಹೋದರರು ಹಿಡಿತ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಹಿಡಿತ ಸಾಧಿಸಿರುವುದರಿಂದ ಆರ್ಥಿಕವಾಗಿ ಮಾತ್ರವಲ್ಲ ರಾಜಕೀಯವಾಗಿಯೂ ನಷ್ಟವಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
2008ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಸಂಯುಕ್ತ ಬಳ್ಳಾರಿ ಜಿಲ್ಲೆಯ ಒಂಬತ್ತು ಸ್ಥಾನಗಳಲ್ಲಿ 8 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದರೆ, 2023ರಲ್ಲಿ ಬಳ್ಳಾರಿಯ ಎಲ್ಲ ಐದು ಸ್ಥಾನಗಳನ್ನು ಮತ್ತು ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಯಲ್ಲಿ ಎರಡು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಬಿಜೆಪಿಗೆ ಒಂದು ಸ್ಥಾನಕ್ಕಷ್ಟೇ ಸೀಮಿತವಾಗಿದೆ.
ಬಳ್ಳಾರಿ ಜಿಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ 1999ರ ಲೋಕಸಭೆ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸಿದ್ದರು. ನಂತರ ರೆಡ್ಡಿ ಸಹೋದರರು ಜಿಲ್ಲೆಯಲ್ಲಿ ಪ್ರಬಲರಾದರು. ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ, ಸಹೋದರರಾದ ಸೋಮಶೇಖರ್ ರೆಡ್ಡಿ ಮತ್ತು ಕರುಣಾಕರ್ ರೆಡ್ಡಿ ಹಾಗೂ ನಿಕಟವರ್ತಿ ಬಿ ಶ್ರೀರಾಮುಲು ಜೊತೆಗೂಡಿ ಪಕ್ಷವನ್ನು ಮತ್ತು ತಮ್ಮ ವರ್ಚಸ್ಸನ್ನೂ ಬಲಪಡಿಸಿಕೊಂಡಿದ್ದರು. ಇದು 2008ರ ಚುನಾವಣೆಯಲ್ಲಿ ಜಿಲ್ಲೆಯ ಒಂಬತ್ತು ಸ್ಥಾನಗಳ ಪೈಕಿ ಬಿಜೆಪಿ ಎಂಟು ಸ್ಥಾನಗಳಲ್ಲಿ ಗೆಲ್ಲಲು ಸಹಾಯ ಮಾಡಿತು. ಗಣಿಗಾರಿಕೆಯು ಎಗ್ಗು-ತಗ್ಗಿಲ್ಲದೆ ನಡೆಯಲಾರಂಭಿಸಿತು.
2013ರ ಚುನಾವಣೆ ವೇಳೆಗೆ ರಾಜಕೀಯ ಸನ್ನಿವೇಶವೇ ಬದಲಾಯಿತು. 2010ರ ಆಗಸ್ಟ್ನಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಬೃಹತ್ ಪಾದಯಾತ್ರೆ ನಡೆಸಿದರು. 2011ರಲ್ಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧನಕ್ಕೊಳಗಾದರು. ಅವರು ಬಳ್ಳಾರಿ ಜಿಲ್ಲೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ನಿಂದ ಆದೇಶಿಸಿತು. ಈ ನಿರ್ಬಂಧವು ಬಳ್ಳಾರಿಯ ರಾಜಕೀಯವನ್ನು ನಿಯಂತ್ರಿಸುವ ರೆಡ್ಡಿಯ ಮಹತ್ವಾಕಾಂಕ್ಷೆಗೆ ಸಮಾಧಿಕಟ್ಟಿತು. ಅಲ್ಲದೆ, ಸಾರ್ವಜನಿಕ ವಲಯದಲ್ಲಿ ರೆಡ್ಡಿ ಸಹೋದರರ ವರ್ಚಸ್ಸು ಕುಸಿಯಿತು.
ಇದೇ ವೇಳೆ, ಬಂಡಾಯವೆದ್ದಿದ್ದ ಬಿಎಸ್ ಯಡಿಯೂರಪ್ಪ ಮತ್ತು ಬಿ ಶ್ರೀರಾಮುಲು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ರಚಿಸಿದರು. ಈ ಎಲ್ಲ ಅಂಶಗಳು ಬಳ್ಳಾರಿಯಲ್ಲಿ ಬಿಜೆಪಿಯನ್ನು ದುರ್ಬಲಗೊಳಿಸಿದವು. ಅಂದಿನ ಚುನಾವಣೆಯಲ್ಲಿ ಜಿಲ್ಲೆಯ ಒಂಬತ್ತು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ತನ್ನ ಸಂಖ್ಯೆಯನ್ನು ಸುಧಾರಿಸಿಕೊಂಡಿತು. ಬಿಎಸ್ಆರ್ಗೆ ಎರಡು ಮತ್ತು ಬಿಜೆಪಿ ಮತ್ತು ಜೆಡಿಎಸ್ ತಲಾ ಕ್ಷೇತ್ರಗಳಲ್ಲಿ ಗೆದ್ದವು.
ಈ ಸುದ್ದಿ ಓದಿದ್ದೀರಾ?: ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಒಂದು ಸ್ಥಾನವನ್ನೂ ಗೆಲ್ಲದ ಬಿಜೆಪಿ
2018ರ ಚುನಾವಣೆಯ ವೇಳೆಗೆ, ಎಲ್ಲ ಅತೃಪ್ತ ನಾಯಕರು ಮತ್ತೆ ಬಿಜೆಪಿಗೆ ಮರಳಿದ್ದರು. ಪರಿಣಾಮ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಕಾಂಗ್ರೆಸ್ ತನ್ನ ಸಂಖ್ಯೆಯಲ್ಲಿ ಐದಕ್ಕೆ ಹೆಚ್ಚಿಸಿಕೊಂಡಿತು. ನಂತರ ಜಿಲ್ಲೆ ಇಬ್ಭಾಗವಾಗಿದ್ದು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ತಲಾ ಐದು ಕ್ಷೇತ್ರಗಳಿವೆ. ಇದೀಗ ಬಳ್ಳಾರಿಯ ಐದೂ ಹಾಗೂ ವಿಜಯನಗರದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಬಿಜೆಪಿ ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಉಳಿದೆರಡನ್ನು ಜೆಡಿಎಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ಗಾಲಿ ಜನಾರ್ದನರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಹಾಗೂ ಬಿ ಶ್ರೀರಾಮುಲು ಸೋತಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಸ್ಪರ್ಧಿಸಿದ್ದ ಗಾಲಿ ಜನಾರ್ದನರೆಡ್ಡಿ ಮಾತ್ರ ಗೆದ್ದಿದ್ದಾರೆ. ಬಳ್ಳಾರಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿರುವುದರಿಂದ ರೆಡ್ಡಿಗಳ ಗತವೈಭವ ಮರುಕಳಿಸುವ ಸಾಧ್ಯತೆಗಳು ಸುಪ್ತವಾಗಿ ಕಾಣುತ್ತಿಲ್ಲ.