- ಬಿಜೆಪಿ ಷಡ್ಯಂತ್ರಕ್ಕೆ ಬಲಿಯಾಗಬೇಡಿ ಎಂದು ಯಡಿಯೂರಪ್ಪ, ಶೋಭಾಗೆ ಕರೆ
- ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡುತ್ತೇನೆ ಎಂದು ತಿಳಿಸಿದ ಎಂ ಬಿ ಪಾಟೀಲ್
2013ರಲ್ಲಿ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ದೆಹಲಿಯ ಲೀಲಾ ಪ್ಯಾಲೇಸ್ನಲ್ಲಿ ಭೇಟಿ ಮಾಡಿದ್ದು ಯಾರನ್ನು? ಮೂರ್ನಾಲ್ಕು ದಿನಗಳಲ್ಲಿ ನಾನು ಬಹಿರಂಗಪಡಿಸುವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಎರಡು ಬಾರಿ ಯಾರನ್ನು ಭೇಟಿ ಆಗಿದ್ರಿ? ಏನು ಮಾತುಕತೆ ನಡೆದಿತ್ತು, ಆ ಮಾತುಕತೆ ಯಾಕೆ ವಿಫಲವಾಯಿತು? ಎಂಬುದನ್ನು ಮೂರ್ನಾಲ್ಕು ದಿನಬಿಟ್ಟು ಬಹಿರಂಗಪಡಿಸುವೆ. ನಾವು ಗಾಳಿಯಲ್ಲಿ ಗುಂಡು ಹೊಡೆಯುವುದಿಲ್ಲ, ನಮ್ಮದು ನಿಜ ಗುಂಡು” ಎಂದರು.
“ಯಡಿಯೂರಪ್ಪ, ಶೋಭಾ ಅವರೇ ಎಲ್ಲ ಬಿಟ್ಟುಬಿಡಿ. ಬಿಜೆಪಿಯವರ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಡಿ. ನೀವು ಬಿಜೆಪಿ ಅವರ ಉಪಯೋಗಕ್ಕೆ ಒಳಗಾಗಬೇಡಿ. ಈ ಬಾರಿ ಬಹಳ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ರಾಜ್ಯದ ಜನತೆ ಡಬಲ್ ಎಂಜಿನ್ ಸರ್ಕಾರವನ್ನು ಕಿತ್ತೆಸೆಯಲ್ಲಿದ್ದಾರೆ” ಎಂದು ತಿಳಿಸಿದರು.
“ಬೊಮ್ಮಾಯಿ ಅವರು ಅಕ್ಸಿಡೆಂಟಲ್ ಮುಖ್ಯಮಂತ್ರಿ. ಯಡಿಯೂರಪ್ಪ ಆದ ಬಳಿಕ, ಲಕ್ಷ್ಮಣ್ ಸವದಿಯನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರು. ಜಗದೀಶ್ ಶೆಟ್ಟರ್ ಅವರಿಗೆ 67 ವರ್ಷ, ಅವರ ಮೇಲೆ ಯಾವುದೇ ಆರೋಪವಿಲ್ಲ. ಲಿಂಗಾಯುತ ಸಮುದಾಯದ ಬಗ್ಗೆ ಬಿಜೆಪಿ ಅವರ ಹಿಡೆನ್ ಅಂಜೆಡಾ ಏನಿದೆ? ನಮ್ಮನ್ನು ಉಪಯೋಗಿಸಿ ನಮ್ಮನ್ನು ಒಂದು ಹಂತಕ್ಕೆ ತಂದು, ಕಸದ ಬುಟ್ಟಿಗೆ ಹಾಕಿದ್ದಾರೆ. ಲಿಂಗಾಯತರು ಮತ್ತೆ ಮರಳಿ ಮನೆಗೆ ಬರುತ್ತಿದ್ದಾರೆ. ಇದೀಗ ಬಿಜೆಪಿ ಗಾಬಾರಿಯಾಗಿದೆ. ಈ ಬಾರಿ ಲಿಂಗಾಯುತ ಸಮುದಾಯ ಖಂಡಿತವಾಗಿಯೂ ಶೇ. 50ರಷ್ಟು ಕಾಂಗ್ರೆಸ್ ಪರ ನಿಲ್ಲುತ್ತಾರೆ. ಕಾಂಗ್ರೆಸ್ಗೆ 130-140 ಸ್ಥಾನ ಬರುವುದು ಖಚಿತ” ಎಂದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
“ಲಿಂಗಾಯತರ ವಿಷಯದಲ್ಲಿ ಬಿಜೆಪಿ ಅವರು ಗಾಬರಿಗೊಂಡಿದ್ದಾರೆ. ರಾಜ್ಯದ ಬಿಜೆಪಿಯ ಯಾವುದೇ ನಾಯಕನ ಮುಖವನ್ನು ಇಟ್ಟು ಜನರ ಬಳಿಗೆ ಹೋಗಕಾಗುತ್ತಿಲ್ಲ ಇವರಿಗೆ. ಮೋದಿ ಶಾ ಅವರು ಕರ್ನಾಟಕದ ಶಾಶ್ವತ ನಿವಾಸಿಗಳಾಗಿ ಬಿಟ್ಟಿದ್ದಾರೆ. ಮೋದಿ ಮತ್ತು ಶಾ ಕೂಡ ತಮ್ಮ ಅನೇಕ ಭಾಷಣಗಳಲ್ಲಿ ಸುಳ್ಳು ಹೇಳಿದ್ದಾರೆ. ಶೆಟ್ಟರ್, ಸವದಿ ಸೋಲಿಸಲು ಯಡಿಯೂರಪ್ಪ ಅವರನ್ನು ಬಿಟ್ಟಿದ್ದಾರೆ. ಸವದಿ, ಶೆಟ್ಟರ್ ಅವರನ್ನು ಸಂತೋಷ್, ಜೋಶಿ ಮುಗಿಸಲಿ. ಇಬ್ಬರು ಮಕ್ಕಳ ಭವಿಷ್ಯಕ್ಕಾಗಿ ಅವರನ್ನು ಬಳಸಲಾಗುತ್ತಿದೆ. ಯಡಿಯೂರಪ್ಪರನ್ನು ಹೆದರಿಸಿದ್ದಾರೆ” ಎಂದರು.
“ಯಡಿಯೂರಪ್ಪನವರು ಇಂದು ಸವದಿ, ಶೆಟ್ಟರ್ ಅವರಿಗೆ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ಹೇಳ್ತಾ ಇದ್ದಾರೆ. ಯಡಿಯೂರಪ್ಪನವರು ಕೆಜೆಪಿ ಸ್ಥಾಪನೆ ಮಾಡಿದಾಗ ಅವರು ನೇರ ಬಿಜೆಪಿ ಎದೆಗೆ ಚೂರಿ ಹಾಕಿದ್ದರು. ಯಡಿಯೂರಪ್ಪನವರಿಂದ ಕೆಟ್ಟ ಕೆಲಸ ಮಾಡಿಸಿದರು. ಕಣ್ಣೀರು ಹಾಕಿಸಿದರು. ಬಳಿಕ ಕಸದ ಬುಟ್ಟಿಗೆ ಎಸೆದಂತೆ ಎಸೆದರು” ಎಂದು ಹೇಳಿದರು.