- ಹೈದರಾಬಾದ್ ಅಭಿಮಾನಿಯಿಂದ ಪ್ರಚಾರ ವಾಹನ ಕೊಡುಗೆ
- ನಾಳೆ ನಾಮಪತ್ರ ಸಲ್ಲಿಸಲಿರುವ ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಚುನಾವಣಾ ಪ್ರಚಾರಕ್ಕಾಗಿ ಅಭಿಮಾನಿಯೊಬ್ಬರು ವಿಶೇಷ ಪ್ರಚಾರ ವಾಹನ ಕೊಡುಗೆಯಾಗಿ ನೀಡಿದ್ದಾರೆ.
ಹೌದು.. ದೇಶಾದ್ಯಂತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಬೆರಳೆಣಿಕೆ ನಾಯಕರ ಸಾಲಿನಲ್ಲಿ ನಿಲ್ಲುವವರು ರಾಜ್ಯದ ವಿಪಕ್ಷ ನಾಯಕ ಮಾಸ್ ಲೀಡರ್ ಸಿದ್ದರಾಮಯ್ಯ.
ಸಾಮಾನ್ಯ ಕಾರ್ಯಕ್ರಮಗಳಿಂದ ಹಿಡಿದು ಪಕ್ಷದ ಬೃಹತ್ ಸಮಾವೇಶಗಳವರೆಗೆ ಜನರನ್ನು ತಮ್ಮ ಮಾತಿನಿಂದ ಸೆಳೆಯುವ ನಾಯಕ ಸಿದ್ದರಾಮಯ್ಯ. ಹೀಗಾಗಿ ಸಿದ್ದರಾಮಯ್ಯಗೆ ಸಾಲು ಸಾಲು ಅಭಿಮಾನಿಗಳು.
ಸಮಾರಂಭಕ್ಕೆ ಹೋದಾಗಲೆಲ್ಲ ಹಾರ ತುರಾಯಿಗಳ ಜೊತೆ ಕುರಿ, ಜೋಡೆತ್ತುಗಳನ್ನು ಕೊಟ್ಟ ಅಭಿಮಾನಿ ವರ್ಗ ಒಂದಾದರೆ, ನಾಯಕತ್ವಕ್ಕೆ ಒಲಿದು ಪ್ರಚಾರಕ್ಕಾಗಿ ಬಸ್, ಕ್ಷೇತ್ರದಲ್ಲಿ ಉಳಿದುಕೊಳ್ಳಲು ಮನೆ, ಚುನಾವಣೆ ಖರ್ಚಿಗೆ ಹೊಲ, ಮನೆ ಮಾರಿ ಹಣ ನೀಡುವ, ಓಡಾಟಕ್ಕೆ ಹೆಲಿಕಾಪ್ಟರ್ ಕೊಡಲು ನಿಂತ ಗ್ರಾಮಸ್ಥರು ಹೀಗೆ ಮತ್ತೊಂದು ವರ್ಗದ ಅಭಿಮಾನಿಗಳನ್ನು ಸಿದ್ದರಾಮಯ್ಯ ಹೊಂದಿದ್ದಾರೆ.
ಈಗ ಇಂತಹ ಅಭಿಮಾನಿಗಳ ಸಾಲಿಗೆ ಹೊಸ ಸೇರ್ಪಡೆ ಆಂಧ್ರಪ್ರದೇಶದ ಶ್ರೀಧರ್ ರಾವ್. ಸಿದ್ದರಾಮಯ್ಯ ಫ್ಯಾನ್ ಆಗಿರುವ ಶ್ರೀಧರ್, ಈ ಬಾರಿ ವಿಪಕ್ಷ ನಾಯಕರ ಚುನಾವಣಾ ಪ್ರಚಾರಕ್ಕೆ ಮಹೀಂದ್ರಾ ಕಂಪನಿಯ ಬುಲೆರೋ ಓಪನ್ ಜೀಪನ್ನು ಕೊಡುಗೆ ನೀಡಿದ್ದಾರೆ.
ಪ್ರಚಾರ ಕಾರ್ಯದ ಸಲುವಾಗಿಯೇ ವಿಶೇಷ ವಿನ್ಯಾಸ ಮಾಡಿಸಿ ಆಂಧ್ರದಿಂದಲೇ ಆ ವಾಹನವನ್ನು ತಂದು ಸಿದ್ದರಾಮಯ್ಯನವರಿಗೆ ಕೊಟ್ಟಿದ್ದಾರೆ.
ಪ್ರಚಾರಕ್ಕೆ ಅನುವಾಗುವಂತೆ ವಾಹನಕ್ಕೆ ಮೈಕ್ಸೆಟ್, ಕತ್ತಲ ಪ್ರಚಾರಕ್ಕೆ ಎಲ್ಇಡಿ ಲೈಟ್ಸ್, ಹತ್ತು ಮಂದಿ ಒಟ್ಟಿಗೆ ಪ್ರಯಾಣ ಮಾಡಲು ಅನುವಾಗುವಂತೆ ವಿಸ್ತಾರ ಪ್ಲಾಟ್ ಫಾರಂ, ಸುಲಭವಾಗಿ ಹತ್ತಿ ಇಳಿಯುವ ಮೆಟ್ಟಿಲನ್ನು ಈ ವಾಹನ ಹೊಂದಿದೆ.
ಈ ಸುದ್ದಿ ಓದಿದ್ದೀರಾ? :ಇಡೀ ಬಿಜೆಪಿ ಬಿ ಎಲ್ ಸಂತೋಷ್ ಕಪಿಮುಷ್ಠಿಯಲ್ಲಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ನಾಳೆ(ಏಪ್ರಿಲ್ 19) ನಂಜನಗೂಡಿನಲ್ಲಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬಳಿಕ ವರುಣಾ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ಈ ವಾಹನದ ಬಳಕೆ ಮಾಡಲಿದ್ದಾರೆ.
ಇತ್ತ ನೆಚ್ಚಿನ ನಾಯಕನ ಚುನಾವಣಾ ಸೇವೆಗೆ ಪುಟ್ಟ ಕಾಣಿಕೆ ಕೊಟ್ಟ ಶ್ರೀಧರ್ರಾವ್ ಸಂತೋಷದಿಂದಿದ್ದಾರೆ. ತಮ್ಮ ವಾಹನವೇರಿ ಗೆಲುವಿನ ಗುರಿ ತಲುಪಲಿದ್ದಾರೆನ್ನುವ ವಿಶ್ವಾಸವನ್ನು ಅವರು ಇದೇ ವೇಳೆ ವ್ಯಕ್ತಪಡಿಸಿದರು.