ʼಎದ್ದೇಳು ಕರ್ನಾಟಕʼದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳು, ಕರಪತ್ರ ಇತ್ಯಾದಿಗಳ ಮೂಲಕ ಸುಳ್ಳು ಮತ್ತು ದ್ವೇಷದ ರಾಜಕೀಯದ ಅಸಲಿ ಬಣ್ಣವನ್ನು ಬಯಲಿಗೆಳೆಯುತ್ತಿದ್ದಾರೆ. ಆದರೆ ಇದರ ಜೊತೆಜೊತೆಗೇ ರಾಜ್ಯದ ಸುಮಾರು ಆಯ್ದ 100 ಕ್ಷೇತ್ರಗಳಲ್ಲಿ ತಂಡಗಳನ್ನು ರಚಿಸಲಾಗಿದೆ. ಆ ತಂಡಗಳು ಅಧಿಕಾರ ಬದಲಾವಣೆಗಾಗಿ ಅಲ್ಲಿನ ಅತ್ಯಂತ ಸೂಕ್ತ ಅಭ್ಯರ್ಥಿಯ ಬೆಂಬಲದಲ್ಲಿ ಪ್ರಚಾರ-ಪ್ರಸಾರದ ಕೆಲಸ ಮಾಡುತ್ತಿವೆ
ಕರ್ನಾಟಕದ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ ನಡೆಯುತ್ತಿದೆ. ‘ಎದ್ದೇಳು ಕರ್ನಾಟಕ’ದ ಹೆಸರಿನಲ್ಲಿ ಪ್ರಾದೇಶಿಕ ಮತ್ತು ದೇಶದ ಅನೇಕ ಸಾಮಾಜಿಕ ಸಂಘಟನೆಗಳು ಮತ್ತು ಆಂದೋಲನಗಳ ಸಮೂಹವು ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಅವಶ್ಯಕತೆಯೇ ಆವಿಷ್ಕಾರದ ತಾಯಿ ಎನ್ನುತ್ತಾರೆ. ಹಾಗಾಗಿ ದೇಶದ ಇತಿಹಾಸದ ಅಸಾಧಾರಣ ಕಾಲದಲ್ಲಿ ಆಗುತ್ತಿರುವ ಈ ಅಸಾಧಾರಣ ಚುನಾವಣೆಗಳು ಈ ಅಸಾಧಾರಣ ಕ್ರಮಕ್ಕೆ ಜನ್ಮ ನೀಡಿವೆ.
ಮುಂದಿನ ತಿಂಗಳ 10ರಂದು ಆಗಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆ ಕೇವಲ ಪ್ರಜಾಪ್ರಭುತ್ವವಲ್ಲ ನಮ್ಮ ಗಣತಂತ್ರದ ಅಸ್ತಿತ್ವವೇ ಅಪಾಯದಲ್ಲಿರುವಂತಹ ಕಷ್ಟಕರ ತಿರುವಿನಲ್ಲಿರುವಾಗ ನಡೆಯುತ್ತಿರುವ ಈ ಚುನಾವಣೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದ ಸ್ವಧರ್ಮದ ಮೂರು ಸ್ತಂಭಗಳ (ಕರುಣೆ, ಸ್ನೇಹ ಮತ್ತು ನಮ್ರತೆ) ಮೇಲೆ ಒಂದು ಮಾರಣಾಂತಿಕ ದಾಳಿ ಆಗುತ್ತಿದೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ಆಳುವ ಶಕ್ತಿಗಳ ಮುಂದೆ ನರಳುತ್ತಿವೆ. ಸಂಪೂರ್ಣ ಶರಣಾಗತಿ ತೋರಿವೆ. ಇಂತಹ ಸನ್ನಿವೇಶದಲ್ಲಿ ಭಾರತ್ ಜೋಡೋ ಯಾತ್ರೆಯು ದೇಶಕ್ಕೆ ಒಂದು ಭರವಸೆಯ ಕಿರಣವಾಗಿ ಮೂಡಿ ಬಂದಿತ್ತು. ಆದರೆ ದೇಶದ ಜನಸಾಮಾನ್ಯರ ಮೇಲೆ ಅದು ಬೀರಿದ ಪರಿಣಾಮದ ಪರೀಕ್ಷೆ ಆಗುವುದಿನ್ನೂ ಬಾಕಿ ಇದೆ. ಬಿಜೆಪಿ ಮತ್ತು ಅದರ ಸಹಯೋಗಿಗಳು ಹೇಳುವುದೇನೆಂದರೆ, ಇದು ಕೇವಲ ಒಂದು ಆಲಂಕಾರಿಕ ಹೂವಾಗಿತ್ತು, ಜನರ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಹೇಗೂ, ಕಳೆದ ಹಲವಾರು ವರ್ಷಗಳಿಂದ ಆಡಳಿತ ಪಕ್ಷವು ಸಂವಿಧಾನದ ಮೌಲ್ಯಗಳು ಮತ್ತು ನೈತಿಕತೆಯ ಎಲ್ಲ ಪ್ರಶ್ನೆಗಳಿಗೆ ಚುನಾವಣೆಗಳಲ್ಲಿ ಕಂಡ ತಮ್ಮ ವಿಜಯಗಳನ್ನು ತೋರಿಸಿ ತಿರಸ್ಕರಿಸಿದೆ. ಎಲ್ಲ ಪ್ರಶ್ನೆಗಳ ಉತ್ತರವಾಗಿ ಒಂದೇ ಸವಾಲು ಹಾಕಲಾಗುತ್ತದೆ; ಒಂದು ವೇಳೆ ನೀವೇ ಸರಿ ಇದ್ದರೆ, ಚುನಾವಣೆ ಗೆದ್ದು ತೋರಿಸಿ. ಹಾಗಾಗಿ ಕರ್ನಾಟಕದ ಚುನಾವಣೆಗಳು ಆಡಳಿತದಲ್ಲಿರುವ ಶಕ್ತಿಗಳಿಗೆ ಸವಾಲು ಹಾಕುವವರಿಗೆ ಒಂದು ಅಗ್ನಿಪರೀಕ್ಷೆ ಆಗಿ ಮುಂದೆ ಬಂದಿವೆ.
ಕಳೆದ ಎರಡು ತಿಂಗಳಲ್ಲಿ ವಿರೋಧಪಕ್ಷಗಳು ದೇಶದಲ್ಲಿ ಎರಡು ದೊಡ್ಡ ಪ್ರಶ್ನೆಗಳನ್ನು ಎತ್ತಿವೆ. ಮೊದಲ ಪ್ರಶ್ನೆ, ರಾಜಕೀಯ ಶಕ್ತಿ ಮತ್ತು ಕಾರ್ಪೋರೇಟ್ಗಳ ಹಣದ ಚೀಲದ ಹತ್ತಿರದ ಸಂಬಂಧದ ಬಗ್ಗೆ ಇದೆ, ಇದನ್ನು ರಾಹುಲ್ ಗಾಂಧಿಯು ಗೌತಮ್ ಅದಾನಿಯ ಹೆಸರನ್ನು ಉಲ್ಲೇಖಿಸಿ ತುಂಬಾ ಶ್ರದ್ಧೆಯಿಂದ ಎತ್ತಿದ್ದಾರೆ. ಅದಕ್ಕೆ ಉತ್ತರವಾಗಿ ಆಡಳಿತ ಪಕ್ಷವು ರಾಹುಲ್ ಗಾಂಧಿಯ ಧ್ವನಿಯನ್ನು ಹತ್ತಿಕ್ಕಿತು, ನಂತರ ಸಂಸತ್ತಿನ ನಡಾವಳಿಗಳಿಂದ ಅವರ ಪದಗಳನ್ನೇ ಕಿತ್ತುಹಾಕಿದರು, ತದನಂತರ ಸಂಸತ್ತನ್ನು ನಿಲ್ಲಿಸಿದರು ಹಾಗೂ ಕೊನೆಯಲ್ಲಿ ಹೇಗೋ ಮಾಡಿ ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ಹೊರಹಾಕಿದರು. ಕಳೆದ ಕೆಲವು ವಾರಗಳಿಂದ ರಾಹುಲ್ ಗಾಂಧಿ ಪ್ರತಿಯೊಂದು ವೇದಿಕೆಯಿಂದ ಒಂದು ಪ್ರಶ್ನೆ ಕೇಳುತ್ತಿದ್ದಾರೆ; ಗೌತಮ್ ಅದಾನಿಯ ಕಂಪನಿಗಳಲ್ಲಿ ಮಾರಿಷಸ್ನಿಂದ ಬಂದ 20,000 ಕೋಟಿ ರೂಪಾಯಿಗಳನ್ನು ಒಂದು ಬೇನಾಮಿ ಕಂಪನಿ ಹೂಡಿಕೆ ಮಾಡಿದೆ. ಆ ದುಡ್ಡು ಯಾರದ್ದು? ಕರ್ನಾಟಕದ ಚುನಾವಣೆಯಲ್ಲಿಯೂ ರಾಹುಲ್ ಗಾಂಧಿ ಈ ಪ್ರಶ್ನೆ ಎತ್ತುತ್ತಿದ್ದಾರೆ.
ಕರ್ನಾಟಕದ ಚುನಾವಣೆಗಳಲ್ಲಿ ಎರಡನೆಯ ದೊಡ್ಡ ರಾಷ್ಟ್ರೀಯ ಪ್ರಶ್ನೆಯೂ ಏಳುತ್ತಿದೆ. ಅದು ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಸಂಬಂಧಿಸಿದೆ. ಬಿಜೆಪಿ ಯಾವಾಗ ರಾಹುಲ್ ಗಾಂಧಿ ಮೇಲೆ ಒಬಿಸಿ ಸಮುದಾಯಗಳ ಅಪಮಾನ ಮಾಡಿದರು ಎಂದು ಆರೋಪಿಸಿತೋ, ಅದಕ್ಕೆ ಉತ್ತರವಾಗಿ ರಾಹುಲ್ ಗಾಂಧಿಯು ನರೇಂದ್ರ ಮೋದಿಯನ್ನು ಉದ್ದೇಶಿಸಿ ಒಂದು ವೇಳೆ ನಿಮಗೆ ಒಬಿಸಿ ಸಮುದಾಯದ ಬಗ್ಗೆ ಇಷ್ಟೇ ಪ್ರೀತಿಯಿದ್ದರೆ ನೀವು ಜಾತಿವಾರು ಜನಗಣತಿಯ ಅಂಕಿ ಅಂಶಗಳನ್ನು ಸಾರ್ವಜನಿಕರಿಗೆ ಏಕೆ ಬಹಿರಂಗಗೊಳಿಸುತ್ತಿಲ್ಲ ಎಂದು ಕೇಳಿದರು. ನಿಮ್ಮ ಸರಕಾರದ ಪ್ರಮುಖ ಅಧಿಕಾರಿಗಳಲ್ಲಿ ದಲಿತ, ಆದಿವಾಸಿ ಅಥವಾ ಹಿಂದುಳಿದ ವರ್ಗಗಳ ಅಧಿಕಾರಿಗಳ ಸಂಖ್ಯೆ ಏಕೆ ನಗಣ್ಯ ಎಂದು ಕೇಳಿದರು. ಒಟ್ಟಾರೆ, ರಾಹುಲ್ ಗಾಂಧಿಯು ಮಂಡಲ್ ಹೋರಾಟದ ಮೂರನೆಯ ಹಂತವನ್ನು ಆರಂಭಿಸಿದ್ದಾರೆ.
ಕರ್ನಾಟಕದ ಚುನಾವಣೆಗಳು ಕೇವಲ ಈ ಎರಡೇ ವಿಷಯಗಳ ಮೇಲೆ ನಡೆಯದೇ ಇದ್ದರೂ, ಈ ಚುನಾವಣೆಗಳ ಪರಿಣಾಮವನ್ನು ಈ ಎರಡು ದೊಡ್ಡ ರಾಷ್ಟ್ರೀಯ ಅಭಿಯಾನದ ಅಗ್ನಿ ಪರೀಕ್ಷೆ ಎಂತಲೇ ನೋಡಲಾಗುವುದು. ಒಂದು ವೇಳೆ ಬಿಜೆಪಿ ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿ ಸಂಪೂರ್ಣ ಬಹುಮತ ಪಡೆಯಲು ಸಫಲವಾದಲ್ಲಿ, ಸ್ವಾಭಾವಿಕವಾಗಿಯೇ ಇದನ್ನು ಕೇವಲ ರಾಹುಲ್ ಗಾಂಧಿ, ಕಾಂಗ್ರೆಸ್ ಪಾರ್ಟಿ ಹಾಗೂ ಭಾರತ್ ಜೋಡೊ ಯಾತ್ರೆಯುದ್ದಷ್ಟೇ ಅಲ್ಲದೇ ಆರ್ಥಿಕ ಕ್ಷಮತೆ ಮತ್ತು ಸಾಮಾಜಿಕ ನ್ಯಾಯದ ರಾಜಕಾರಣದ ಸೋಲು ಎಂಬಂತೆ ಮುಂದಿಡಲಾಗುವುದು. ಇನ್ನೊಂದೆಡೆ, ಬಿಜೆಪಿ ಸೋಲು ಅನುಭವಿಸಿದಲ್ಲಿ, ಇದು 2024ರ ಚುನಾವಣೆಗಳನ್ನು ಸಂಪೂರ್ಣವಾಗಿ ಮುಕ್ತವಾಗಿಸುತ್ತದೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ರಂಗದಲ್ಲಿ ಆಗುವ ರಾಜಕೀಯ ಯುದ್ಧವು ಅತ್ಯಂತ ತೀಕ್ಷ್ಣವಾಗಿರುವ ಯುದ್ಧವಾಗಲಿದೆ.
ಈ ಧರ್ಮಯುದ್ಧಕ್ಕಾಗಿ ಕರ್ನಾಟಕ ತುಂಬಾ ಉಪಯುಕ್ತವಾದ ಕುರುಕ್ಷೇತ್ರವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರವೇಶ ದ್ವಾರ ಎಂದೇ ಬಿಂಬಿಸಲಾದ ಈ ರಾಜ್ಯವು ಸಾಂಸ್ಕೃತಿಕ ಮತ್ತು ರಾಜಕೀಯ ರೂಪದಲ್ಲಿ ಅತ್ಯಂತ ಸಮೃದ್ಧವಾದ ಪ್ರದೇಶವಾಗಿದೆ. ಇಂದು ಕರ್ನಾಟಕದಿಂದ ಹಿಜಾಬ್ ಮತ್ತು ಆಜಾನ್ನ ವಿಷಯಗಳಲ್ಲಿ ನಡೆಯುತ್ತಿರುವ ವಿವಾದಗಳ ಸುದ್ದಿಗಳು ಬರುತ್ತಿರಬಹುದು ಆದರೆ ಈ ರಾಜ್ಯ ಬಸವಣ್ಣನಂತಹ ವಚನಕಾರರ ರಾಜ್ಯವಾಗಿದೆ, ಇದು ಧಾರ್ಮಿಕ ಸಹಿಷ್ಣುತೆ ಮತ್ತು ಸಾಹಿತ್ಯದ ನೆಲವಾಗಿದೆ. ಕರ್ನಾಟಕವು ದೇಶದ ರೈತ ಆಂದೋಲನ ಮತ್ತು ದಲಿತ ಚಳವಳಿಗಳಿಗೆ ಒಂದು ತೀರ್ಥಯಾತ್ರೆಯಾಗಿದೆ. ದೇಶದ ಇತರ ಭಾಗದವರಿಗೆ ಕೇವಲ ಬೆಂಗಳೂರಿನ ಐಟಿ ಉದ್ಯೋಗಗಳಷ್ಟೇ ಕಾಣಿಸುತ್ತಿರಬಹುದು ಆದರೆ ಕರ್ನಾಟಕದ ಅರ್ಥವ್ಯವಸ್ಥೆಯಲ್ಲಿ ಇಂದಿಗೂ ಕೃಷಿ, ಪಶುಪಾಲನೆ ಹಾಗೂ ಕರಕುಶಲ ಕೈಗಾರಿಕೆಗಳ ಸ್ಥಾನ ತುಂಬಾ ದೊಡ್ಡದಿದೆ.
ಇದನ್ನು ಓದಿ ಈದಿನ.ಕಾಮ್ ಸಮೀಕ್ಷೆ-6: ಬಿಜೆಪಿ ಶಾಸಕರ ವಿರುದ್ಧ ಉಳಿದವರಿಗಿಂತ ಹೆಚ್ಚು ಆಡಳಿತ ವಿರೋಧಿ ಅಲೆ
ಈ ಚುನಾವಣೆಗಳ ಮಹತ್ವ ಮತ್ತು ಕರ್ನಾಟಕದ ಅಸಾಧಾರಣ ಸಂಭಾವ್ಯಗಳನ್ನು ಗಮನದಲ್ಲಿಟ್ಟುಕೊಂಡು ದೇಶದ ಮತ್ತು ರಾಜ್ಯದ ಸಾಮಾಜಿಕ ಸಂಘಟನೆಗಳು ಮತ್ತು ಜನರ ಆಂದೋಲನಗಳು ಈ ಚುನಾವಣೆಗಳಲ್ಲಿ ಒಂದು ಹೊಸ ರೀತಿಯಲ್ಲಿ ಮಧ್ಯಪ್ರವೇಶಿಸಲು ತೀರ್ಮಾನಿಸಿವೆ. ಸಾಮಾನ್ಯವಾಗಿ, ಸಾಮಾಜಿಕ ಸಂಘಟನೆಗಳು ಮತ್ತು ಜನಪರ ಆಂದೋಲನಗಳು ಚುನಾವಣಾ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುತ್ತವೆ ಅಥವಾ ಅದರಲ್ಲಿ ಒಂದಿಷ್ಟು ಸಾಂಕೇತಿಕವಾದ ಪಾತ್ರ ನಿರ್ವಹಿಸಿ ಸಂತುಷ್ಟವಾಗುತ್ತವೆ. ಕೆಲವೊಮ್ಮೆ ಜನಪರ ಆಂದೋಲನಗಳ ಜನರು ಸಂಪೂರ್ಣವಾಗಿ ಚುನಾವಣಾ ರಾಜಕೀಯದಲ್ಲಿ ಧುಮುಕುತ್ತಾರೆ. ಆದರೆ ಇಂತಹ ಪ್ರಯೋಗಗಳ ಪರಿಣಾಮ ಅಷ್ಟು ಚೆನ್ನಾಗಿ ಆಗಿದ್ದು ಕಂಡುಬಂದಿಲ್ಲ. ಕರ್ನಾಟಕದ ಚುನಾವಣೆಗಳಲ್ಲಿ ಜನಪರ ಆಂದೋಲನಗಳು ತೀರ್ಮಾನಿಸಿದ್ದೇನೆಂದರೆ, ತಾವು ಖುದ್ದಾಗಿ ಚುನಾವಣಾ ರಾಜಕೀಯದಲ್ಲಿ ಒಂದು ಪಕ್ಷವಾಗಿ ಅಥವಾ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ ಆದರೆ ದೇಶದ ಇತಿಹಾಸದ ಈ ಕಷ್ಟಕರ ನಿರ್ಣಾಯಕ ಘಟ್ಟದಲ್ಲಿ ಚುನಾವಣೆಗಳನ್ನು ಕೇವಲ ಪ್ರೇಕ್ಷಕರಾಗಿ ನೋಡುವುದಿಲ್ಲ ಎಂದು. ಹಿಂದಿನಂತೆ, ಚುನಾವಣೆಗಳಲ್ಲಿ ಯಾವುದೋ ಒಂದು ರಾಜಕೀಯ ಶಕ್ತಿಯನ್ನು ಸೋಲಿಸಬೇಕು ಎಂದು ಮನವಿ ಮಾಡಿಯೂ ಸಂತುಷ್ಟರಾಗುವಂತಿಲ್ಲ. ಹಾಗಾಗಿ ಈ ಬಾರಿ ಈ ಸಂಘಟನೆಗಳು ಮತ್ತು ಜನಪರ ಆಂದೋಲನಗಳು ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷಭೇದ ಬಿಟ್ಟುಕೊಟ್ಟು, ನೇರವಾಗಿ ನೆಲಮಟ್ಟದಲ್ಲಿ ಮಧ್ಯಪ್ರವೇಶ ಮಾಡುವ ತೀರ್ಮಾನ ಕೈಗೊಂಡಿವೆ.
ಇದನ್ನು ಓದಿ ಈ ಸಮೀಕ್ಷಾ ವರದಿಯನ್ನೂ ಓದಿ: ಈದಿನ.ಕಾಮ್ ಸಮೀಕ್ಷೆ-5: ಸರ್ಕಾರದ ಯೋಜನೆಗಳ ʼಫಲʼ ಬಿಜೆಪಿಗೆ ಸಿಗದು; ಕಾಂಗ್ರೆಸ್ನ ಗ್ಯಾರಂಟಿಗಳಿಗೆ ಇನ್ನೂ ಇಲ್ಲ ಗ್ಯಾರಂಟಿ
ಇದುವೆ “ಎದ್ದೇಳು ಕರ್ನಾಟಕ”. ಇದು ಸಹಬಾಳ್ವೆ ಎಂಬ ಹೆಸರಿನಲ್ಲಿ ಆರಂಭವಾಗಿ, ರಾಜ್ಯದಲ್ಲಿ ನಡೆಯುತ್ತಿರುವ ದ್ವೇಷದ ರಾಜಕೀಯದ ವಿರುದ್ಧ ಎಲ್ಲಾ ಸಮುದಾಯಗಳಲ್ಲಿ ಸದ್ಭಾವನೆಯ ಕಲ್ಪನೆಯನ್ನು ಎಲ್ಲೆಡೆ ಬೀದಿಗಳಲ್ಲಿಯೂ ಬಿತ್ತುವ ಕೆಲಸ ಮಾಡಿದರು. ಈ ಮುಂದೊಡಗಿನೊಂದಿಗೆ ಹಲವಾರು ರೀತಿಯ ಸಂಘಟನೆಗಳು ಸೇರತೊಡಗಿದವು. ಕರ್ನಾಟಕದಲ್ಲಿ ರಾಜ್ಯ ರೈತ ಸಂಘ ಎಂಬ ಹೆಸರಿನಲ್ಲಿ ನಡೆಯುತ್ತಿರುವ ರೈತರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಯ ಅನೇಕ ಬಣಗಳು, ಅಲ್ಪಸಂಖ್ಯಾತರ ರಕ್ಷಣೆಗಾಗಿ ಸಂಘರ್ಷ ನಡೆಸುತ್ತಿರುವ ಸಂಘಟನೆಗಳು ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಜನರ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಅನೇಕ ಸಂಘಟನೆಗಳು ಮತ್ತು ನಾಗರಿಕರೂ ಈ ಸಂಕಲ್ಪದ ಜೊತೆಗೂಡಿದರು. ಭಾರತ ಜೋಡೊ ಯಾತ್ರೆಯ ನಂತರ ಶುರುವಾದ ಭಾರತ್ ಜೋಡೊ ಅಭಿಯಾನವೂ ಮುಂದುವರಿದ ಭಾಗವಾಯಿತು ಹಾಗೂ ಎಲ್ಲರೂ ಸೇರಿ ಎದ್ದೇಳು ಕರ್ನಾಟಕ ಎಂಬ ಹೆಸರಿನ ಆಂದೋಲನವನ್ನು ಸ್ಥಾಪಿಸಿದರು.
ಈ ಅಭಿಯಾನದ ಅಡಿಯಲ್ಲಿ ಎರಡು ಹಂತಗಳಲ್ಲಿ ಕೆಲಸಗಳು ನಡೆಯುತ್ತಿವೆ. ಮೊದಲನೆಯದು ಸಂವಾದ ಮತ್ತು ಪ್ರಚಾರದ ಕೆಲಸ, ಅದರಲ್ಲಿ ಎದ್ದೇಳು ಕರ್ನಾಟಕದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳು, ಕರಪತ್ರ ಇತ್ಯಾದಿಗಳ ಮೂಲಕ ಸುಳ್ಳು ಮತ್ತು ದ್ವೇಷದ ರಾಜಕೀಯದ ಅಸಲಿ ಬಣ್ಣವನ್ನು ಬಯಲಿಗೆಳೆಯುತ್ತಿದ್ದಾರೆ. ಆದರೆ ಇದರ ಜೊತೆಜೊತೆಗೇ ರಾಜ್ಯದ ಸುಮಾರು ಆಯ್ದ 100 ಸ್ಥಾನಗಳಲ್ಲಿ ತಂಡಗಳನ್ನು ರಚಿಸಲಾಗಿದೆ. ಆ ತಂಡಗಳು ಅಧಿಕಾರ ಬದಲಾವಣೆಗಾಗಿ ಅಲ್ಲಿನ ಅತ್ಯಂತ ಸೂಕ್ತ ಅಭ್ಯರ್ಥಿಯ ಬೆಂಬಲದಲ್ಲಿ ಪ್ರಚಾರ-ಪ್ರಸಾರದ ಕೆಲಸ ಮಾಡುತ್ತಿವೆ. ಇಲ್ಲಿಯತನಕ ಬಿಜೆಪಿಯ ಅಭ್ಯರ್ಥಿಗಳ ಬೆಂಬಲದಲ್ಲಿ ಸಂಘ ಪರಿವಾರದ ಎಲ್ಲಾ ಸಂಘಟನೆಗಳು ಈ ಪಾತ್ರ ನಿರ್ವಹಿಸುತ್ತಿದ್ದವು. ಆದರೆ ಅದನ್ನು ವಿರೋಧಿಸುವ ಪಕ್ಷಗಳ ಬಳಿ ಇಂತಹ ಯಾವ ಸಾಮಾಜಿಕ ಬೆಂಬಲವೂ ಇರಲಿಲ್ಲ. ಎದ್ದೇಳು ಕರ್ನಾಟಕ ಈ ಕೊರತೆಯನ್ನು ತೂಗಿಸುವ ಒಂದು ವಿಶಿಷ್ಟ ಪ್ರಯೋಗವಾಗಿದೆ. ಈ ಪ್ರಯೋಗ ಸಫಲವಾದಲ್ಲಿ, ಈ ವರ್ಷ ರಾಜಸ್ಥಾನ, ಛತ್ತೀಸಗಢ, ಮಧ್ಯ ಪ್ರದೇಶ ಹಾಗೂ ತೆಲಂಗಾಣದಲ್ಲಿ ಆಗಲಿರುವ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಗಳಿಗೆ ಒಂದು ಹೊಸ ಮಾದರಿಯಾಗಿ ಸಾಬೀತಾಗಬಹುದು.

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ