ಹಲವು ಚುನಾವಣೆಗಳಲ್ಲಿ ಬಿಜೆಪಿಗೆ ಫಲ ನೀಡಿದ್ದ ‘ಫಲಾನುಭವಿ’ಗಳ ದಾಳ ಕರ್ನಾಟಕದಲ್ಲಿ ಯಶಸ್ಸು ನೀಡುವ ಸಾಧ್ಯತೆ ಕಡಿಮೆ. ಇನ್ನೊಂದೆಡೆ, ಕಾಂಗ್ರೆಸ್ ಸಹಾ ತನ್ನ ‘ಗ್ಯಾರಂಟಿ’ ಬಗ್ಗೆ ಜನರಲ್ಲಿ ಪೂರ್ಣ ವಿಶ್ವಾಸ ಮೂಡಿಸುವ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.
ಮೊದಲಿಗೆ ಈ ಸಮೀಕ್ಷೆ ಏನೆಂದು ಅರಿಯಲು ಈ ವರದಿ ಓದಿ: ಚುನಾವಣೆ 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಅತಿ ದೊಡ್ಡ ಸಮೀಕ್ಷೆ ‘ಈ ದಿನ.ಕಾಮ್’ನ ಸಮೀಕ್ಷೆ
ದೇಶದ ಕೆಲವು ರಾಜ್ಯಗಳಲ್ಲಿ ಬಿಜೆಪಿಯು ಆಡಳಿತ ವಿರೋಧಿ ಅಲೆಯನ್ನು ಸರ್ಕಾರದ ಕೆಲವು ಜನಪ್ರಿಯ ಯೋಜನೆಗಳಿಂದ ಪ್ರಯೋಜನ ಪಡೆದ ‘ಫಲಾನುಭವಿಗಳಿಗೆʼ ಅದನ್ನು ಮತ್ತೆ ಮತ್ತೆ ನೆನಪಿಸುವ ಮೂಲಕ ನಿವಾರಿಸಿಕೊಂಡಿತ್ತು. ಎರಡು ಕಾರಣಗಳಿಂದ ಇದು ಕರ್ನಾಟಕದಲ್ಲಿ ಫಲ ನೀಡುವ ಸಾಧ್ಯತೆ ಕಡಿಮೆ ಎಂದು ತೋರುತ್ತದೆ.
ಎ) ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆದಿದ್ದೀರಾ ಎಂಬ ಪ್ರಶ್ನೆಗೆ 35% ಜನರು ಯಾವುದೇ ಯೋಜನೆ ತಮಗೆ ತಲುಪಿಲ್ಲ ಎಂದಿದ್ದಾರೆ. ಪಿಎಂ ಕಿಸಾನ್ ಯೋಜನೆ, ಆಯುಷ್ಮಾನ್ ಭಾರತ್ ಮತ್ತು ಉಜ್ವಲ ಗ್ಯಾಸ್ ಯೋಜನೆಗಳಿಂದ ಲಾಭ ಪಡೆದವರು (ಪ್ರತಿಕ್ರಿಯೆ ನೀಡಿದವರಲ್ಲಿ) ಕ್ರಮವಾಗಿ 21%, 21% ಮತ್ತು 23% ಮಾತ್ರ.
ಅದಕ್ಕಿಂತ ಮುಖ್ಯವಾಗಿ, ಸದರಿ ಯೋಜನೆಗಳ ಫಲಾನುಭವಿಗಳಾಗಬಹುದಾಗಿದ್ದ ಜನರಲ್ಲಿ ಈ ಯೋಜನೆಗಳಿಂದ ಅನುಕೂಲ ಪಡೆದವರ ಸಂಖ್ಯೆ ಬಹಳ ಕಡಿಮೆಯಿದೆ. ಉದಾಹರಣೆಗೆ ಪಿಎಂ ಕಿಸಾನ್ ಯೋಜನೆಯ ಅನುಕೂಲ ಪಡೆದಿದ್ದೇವೆ ಎಂದು ಹೇಳಿದ ರೈತರು 33% ಮಾತ್ರ ಆಗಿದ್ದಾರೆ.
ಈ ಸಮೀಕ್ಷಾ ವರದಿಯನ್ನೂ ಓದಿ: ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ-3: ಭ್ರಷ್ಟಾಚಾರ, ಅಸಮರ್ಥತೆಯೇ ತಿರಸ್ಕಾರಕ್ಕೆ ಪ್ರಧಾನ ಕಾರಣ
ಬಿ) ರಾಜ್ಯ ಸರ್ಕಾರದ ಯೋಜನೆಗಳ ವಿಷಯಕ್ಕೆ ಬಂದರೆ, ಪ್ರಸ್ತುತ ಬಿಜೆಪಿ ಸರ್ಕಾರ ಪ್ರಾರಂಭಿಸಿದ ಯಾವುದೇ ಯೋಜನೆಯನ್ನು ಹೆಸರಿಸಲೂ ಮತದಾರರಿಗೆ ಸಾಧ್ಯವಾಗಲಿಲ್ಲ.
ಕಾಂಗ್ರೆಸ್ ಗ್ಯಾರಂಟಿಯೂ ಪೂರ್ಣ ಮತ ತಂದುಕೊಡುವ ಗ್ಯಾರಂಟಿಯಿಲ್ಲ.
ಮತದಾರರಿಗೆ ನಾಲ್ಕು ದೊಡ್ಡ ‘ಗ್ಯಾರಂಟಿ’ಗಳನ್ನು (ಭರವಸೆ) ನೀಡುವ ಮೂಲಕ ಕಾಂಗ್ರೆಸ್ ಈ ನಿರ್ವಾತದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ. ಪ್ರಸ್ತುತ ಸಮೀಕ್ಷೆಯು ಈ ನಾಲ್ಕರ ಪೈಕಿ ಎರಡು ಗ್ಯಾರಂಟಿಗಳಿಗೆ ಮತದಾರರ ಪ್ರತಿಕ್ರಿಯೆಯೇನು ಎಂಬುದನ್ನು ಪರಿಶೀಲಿಸಿತು. ಇಲ್ಲಿ ಕಾಂಗ್ರೆಸ್ನ ಎರಡು ಸಮಸ್ಯೆಗಳು ಸಮೀಕ್ಷೆಯಲ್ಲಿ ಗಮನಕ್ಕೆ ಬಂದವು.
ಎ) ಸುಮಾರು ಮೂರನೇ ಒಂದು ಭಾಗದಷ್ಟು ಮತದಾರರಿಗೆ, ವಿಶೇಷವಾಗಿ ಯಾರನ್ನು ಉದ್ದೇಶಿಸಿ ಈ ಘೋಷಣೆಗಳನ್ನು ಮಾಡಲಾಗಿದೆಯೋ ಆ ಸಮುದಾಯಗಳ ಮತದಾರರಲ್ಲಿ ಗಣನೀಯ ಪ್ರಮಾಣದ ಜನರಿಗೆ ಈ ಘೋಷಣೆಗಳ ಬಗ್ಗೆ ಮಾಹಿತಿಯೇ ಇಲ್ಲ.
ಬಿ) ಯೋಜನೆಗಳ ಬಗ್ಗೆ ಮಾಹಿತಿ ಇರುವವರ ಪೈಕಿ ಅರ್ಧದಷ್ಟು ಮಂದಿಯು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತನ್ನ ಭರವಸೆಗಳನ್ನು ಕಾರ್ಯಗತಗೊಳಿಸುತ್ತದೆ ಎಂದು ನಂಬಿಲ್ಲ. ಅಂದರೆ ತನ್ನ ಸಂಭಾವ್ಯ ಮತದಾರರ ಮನವೊಲಿಸುವ ಸವಾಲನ್ನು ಕಾಂಗ್ರೆಸ್ ಎದುರಿಸುತ್ತಿದೆ.
ಈ ಸಮೀಕ್ಷಾ ವರದಿಯನ್ನೂ ಓದಿ: ಚುನಾವಣೆ 2023 | ಈದಿನ.ಕಾಮ್ ಸಮೀಕ್ಷೆ-4: ಭ್ರಷ್ಟಾಚಾರವೇ ಚುನಾವಣೆಯ ಪ್ರಧಾನ ಸಂಗತಿ
Honest and remarkable survey. Much appreciated